ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ವಿಕಲಚೇತನರ ಪಿಂಚಣಿ ಮರುಚಾಲನೆಗೆ ಆಗ್ರಹಿಸಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ವಿಕಲಚೇತನರ ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿರುವ ಅರ್ಹ ವಿಕಲಚೇತನರ ಮಾಸಾಶನವನ್ನು (ಪಿಂಚಣಿ) ತಕ್ಷಣವೇ ಪುನರ್ ಆರಂಭಿಸಬೇಕೆಂದು ಒತ್ತಾಯಿಸಿದರು.
ಜೊತೆಗೆ ಇಲ್ಲಿನ ಎಂ.ಆರ್.ಡಬ್ಲ್ಯೂ ವಿ.ಆರ್.ಡಬ್ಲ್ಯೂ , ಯು.ಆರ್.ಡಬ್ಲ್ಯೂ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಯಾದ ಸಂಗಪ್ಪ ಸುರಗಿಹಳ್ಳಿ ಮಾತನಾಡಿ, ಪಿಂಚಣಿ ಸ್ಥಗಿತದಿಂದಾಗಿ ತಾಲ್ಲೂಕಿನ ನೂರಾರು ವಿಕಲಚೇತನರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ತಹಶೀಲ್ದಾರರ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ಮನವಿ ಸ್ವೀಕರಿಸಿ ವಿಕಲಚೇತನರ ಪಿಂಚಣಿ ಮರುಚಾಲನೆಗೆ ಅಗತ್ಯವಿರುವ ಪೂರಕ ದಾಖಲಾತಿಗಳನ್ನು ಒದಗಿಸಿದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ ಸಿಬ್ಬಂದಿಗಳು ತಮ್ಮ ವ್ಯಾಪ್ತಿಯಲ್ಲಿ ರದ್ದಾಗಿರುವ ಅರ್ಹ ವಿಕಲಚೇತನರ ಪಿಂಚಣಿ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನೇರವಾಗಿ ಕಚೇರಿಗೆ ಸಲ್ಲಿಸಬೇಕು. ಇದರಿಂದಾಗಿ ವಿಕಲಚೇತನರು ಅನಾವಶ್ಯಕವಾಗಿ ತಹಶೀಲ್ದಾರ್ ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿಕಲಚೇತನರ ಕುಂದು ಕೊರತೆಗಳನ್ನು ಆಲಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ತಾಲ್ಲೂಕು ಮಟ್ಟದ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದೂ ಭರವಸೆ ನೀಡಿದರು.
ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಪರಶುರಾಮ ಯಲಗೋಡ, ಮುತ್ತುರಾಜ ಸಾತಿಹಾಳ ಶರಣಗೌಡ ಪಾಟೀಲ, ದ್ಯಾವಪ್ಪ ಪೂಜಾರಿ ,ಮೈನೂದ್ದಿನ ಮುಜಾವರ, ಚೈತ್ರಾ ನಾವಿ, ಬಸಮ್ಮ ಘಂಟಿ, ಪ್ರಕಾಶ ಪವಾರ, ಪರಮಾನಂದ ಹಡಪದ, ಬಸಪ್ಪ ಯತ್ನಾಳ ಅಶೋಕ ಕೋಟಿನ, ಮಡಿವಾಳಪ್ಪ ಒಂಟೆತ್ತಿನ, ಲಕ್ಷ್ಮಣ ಪೂಜಾರಿ, ಹಸಿಮಸಾಬ್ ಹಾದಿಮನಿ ಇದ್ದರು.

