ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಸಾಂಪ್ರದಾಯಿಕ ಹಿನ್ನೆಲೆ ಇದೆ. ಆದರೆ ಸಧ್ಯದ ದಿನಮಾನಗಳಲ್ಲಿ ಹಿಂದೂ ಹಬ್ಬಗಳ ಬಗ್ಗೆ ಕಂದಾಚಾರ, ಮೂಢನಂಬಿಕೆ ಎಂದು ಅಪಪ್ರಚಾರವಾಗುತ್ತಿರುವುದರ ಪರಿಣಾಮ ಹಿಂದೂ ಹಬ್ಬಗಳು ನಶಿಸಿ ಹೋಗುತ್ತಿವೆ. ಇಂತಹ ಮಾತುಗಳಿಗೆ ಕಿವಿಗೊಡದೇ ಪ್ರತಿಯೊಬ್ಬ ಹಿಂದೂಗಳು ಪ್ರತಿಯೊಂದು ಹಬ್ಬಗಳಲ್ಲಿ ಭಾಗಿಯಾಗಿ ಹಬ್ಬಗಳ ಹಿಂದೆ ವಿಜ್ಞಾನ ಇದೆ ಎಂದು ಸಮಾಜಕ್ಕೆ ಸಾರಿ ಹೇಳಬೇಕು ಎಂದು ಹೋರಾಟಗಾರ ಮತ್ತು ಹಿಂದು ಕಾರ್ಯಕರ್ತ ಬಸಯ್ಯ ನಂದಿಕೇಶ್ವರಮಠ ಕರೆ ನೀಡಿದರು.
ಪಟ್ಟಣದ ಮಾರುತಿ ನಗರದಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಣ್ಣೆತ್ತು ಪ್ರತಿಷ್ಠಾಪಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಮ್ಮ ದೇಶ ಉಳಿಯಲು ಕಾರಣನೇ ಹಿಂದೂ ಹಬ್ಬಗಳು. ಕಾಲ, ಋತು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಹಿಂದೂ ಹಬ್ಬಗಳನ್ನು ಜೋಡಿಸಲಾಗಿದೆ. ಪ್ರತಿಯೊಂದು ಹಬ್ಬಗಳ ಆಚರಣೆಯ ಹಿಂದೆ ಸಾಮಾಜಿಕ ಹಾಗೂ ವೈಜ್ಞಾನಿಕ ಮಹತ್ವ ಅಡಗಿದೆ. ಹಬ್ಬಗಳು ಕುಟುಂಬ ಹಾಗೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ. ಹಿಂದೂ ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ಯುವ ಜನತೆಗೆ ಅರಿವು ಮೂಡಿಸುವದು ಅಗತ್ಯವಾಗಿದ್ದು, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹಾಗಾಗಿ ಪ್ರತಿಯೊಬ್ಬ ಹಿಂದೂ ಎಲ್ಲ ಹಬ್ಬಗಳಲ್ಲಿ ಸಕ್ರೀಯವಾಗಿ ಭಾಗಿಯಾಗುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಯುವ ಮುಖಂಡ ಸಂಗನಗೌಡ ಪಾಟೀಲ ಮಾತನಾಡಿ, ಇಂತಹ ಧಾರ್ಮಿಕ ಆಚರಣೆಗಳು ಕೇವಲ ಪೂಜಾ ವಿಧಾನಗಳಿಗೆ ಸೀಮಿತವಾಗಿರದೇ ಸಮಾಜದಲ್ಲಿ ಪರಸ್ಪರ ಸಹಕಾರ, ಬಾಂಧವ್ಯ ಮತ್ತು ಸಾಮರಸ್ಯವನ್ನು ಬೆಳೆಸುವ ವೇದಿಕೆಯಾಗಿವೆ ಎನ್ನುತ್ತ, ಪಟ್ಟಣದಲ್ಲಿಯೇ ಮಾರುತಿ ನಗರ ಶರಣರ ನಾಡಾಗಿದೆ. ಈ ಭಾಗದಲ್ಲಿ ಒಂದು ಭವ್ಯವಾದ ಜಗಜ್ಯೋತಿ ಬಸವಣ್ಣನವರ ದೇವಾಲಯವನ್ನು ನಿರ್ಮಿಸಬೇಕೆನ್ನುವದು ಬಹುತೇಕರ ಆಶಯವಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಈ ಭಾಗದಲ್ಲಿ ಬಾಗೇವಾಡಿಯಲ್ಲಿರುವ ಬಸವಣ್ಣನವರ ದೇವಸ್ಥಾನದಂತೆ ಅದ್ಭುತ ದೇವಾಲಯವನ್ನು ನಿರ್ಮಿಸಲು ನಾವೆಲ್ಲ ಯುವಕರು ಹಗಲಿರುಳು ಶ್ರಮಿಸಲು ಸಿದ್ಧರಿದ್ದೇವೆ ಎಂದರು.
ಮುಖಂಡ ಮಹಾಂತೇಶ ಮೋಟಗಿ ಮಾತನಾಡಿ, ಹಬ್ಬಗಳು ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಹಬ್ಬಗಳನ್ನು ಪುನಶ್ಚೇತನಗೊಳಿಸಲು ವಾಟ್ಸ್ಅಪ್ ಗುಂಪನ್ನು ತಯಾರಿಸಲಾಗಿದೆ. ಈ ಗುಂಪಿನಲ್ಲಿ ಪ್ರತಿಯೊಂದು ಹಬ್ಬಗಳನ್ನು ಅದ್ಧೂರಿಯಾಗಿಸಲು ಏನೆಲ್ಲ ಪೂರ್ವಸಿದ್ಧತೆ ಮಾಡಬೇಕು ಎನ್ನುವ ಬಗ್ಗೆ ಪೂರ್ವ ಸಮಾಲೋಚನೆ ನಡೆಸಲಾಗುತ್ತದೆ. ಸಭೆ ಕರೆದಾಗ ಪ್ರತಿಯೊಬ್ಬರೂ ಭಾಗಿಯಾಗಿ ಸಲಹೆ ಸೂಚನೆ ನೀಡಬಹುದು ಎಂದರು.
ಪ್ರಮುಖರಾದ ವಿರೇಶ ಢವಳಗಿ, ಮಹಾಂತೇಶ ಬೂದಿಹಾಳಮಠ ಮಾತನಾಡಿದರು. ಮಹಾದೇವ ಶಾಸ್ತಿçಗಳು ಆಶಿರ್ವಚನ ನೀಡಿದರು. ಲಾಲಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀಕಾಂತ ಹಿರೇಮಠ, ವಿಜು ಸೋನಾರ, ಮಾಂತಗೌಡ ಬಿರಾದಾರ ವಕೀಲರು, ಕಾಶಿನಾಥ ಹುಗ್ಗಿ, ಮಾಜಿ ಸೈನಿಕ ಎಸ.ವಿ.ಹೊಳಿ ಸೇರಿದಂತೆ ಮತ್ತೀತರರು ಇದ್ದರು.

