ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಂಥನಾಳ ಮಠದ ಉತ್ತರಾಧಿಕಾರಿ ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ಮತ್ತು ಭಕ್ತರ ಸೌಹಾರ್ದಯುತ ಒಮ್ಮತದೊಂದಿಗೆ ನಡೆದಿದೆ. ಇದರಲ್ಲಿ ಯಾವುದೇ ಗೊಂದಲದ ಮಾತಿಲ್ಲ. ಆದರೆ ಕೆಲವರು ವೈಯಕ್ತಿಕ ದುರುದ್ದೇಶದಿಂದ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಭಕ್ತರು ಇಂತಹ ಯಾವುದೇ ಊಹಾಪೋಹಗಳಿಗೆ ಮನ್ನಣೆ ನೀಡಬಾರದು,” ಎಂದು ನ್ಯಾಯವಾದಿ ಹಾಗೂ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ನೂತನ ಉತ್ತರಾಧಿಕಾರಿಗಳ ಪುರ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮಠದ ಸಮಿತಿ ನಿರ್ಧರಿಸಿದೆ. ಶೀಘ್ರದಲ್ಲೇ ಭಕ್ತರ ಸಭೆ ಕರೆದು ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗುವುದು. ಈ ಧಾರ್ಮಿಕ ಮಹೋತ್ಸವದಲ್ಲಿ ಉತ್ತರ ಕರ್ನಾಟಕ ಭಾಗದ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮುಳಜಿ ಮಾಹಿತಿ ನೀಡಿದರು.
ಒಮ್ಮತದ ಆಯ್ಕೆಗೆ ಭಕ್ತರ ಹರ್ಷ: ತಾಂಬಾ ಗ್ರಾಮದ ಹಿರಿಯ ಮುಖಂಡರಾದ ಜಿ. ವಾಯ್. ಗೊರನಾಳ ಮಾತನಾಡಿ, “ಬಂಥನಾಳ ಮಠವು ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಮಠದ ಗರಿಮೆಗೆ ತಕ್ಕಂತೆ ಎಲ್ಲ ಭಕ್ತರ ಇಚ್ಛೆಯ ಮೇರೆಗೇ ಈ ಆಯ್ಕೆ ಪೂರ್ಣಗೊಂಡಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಂಬಾ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಗಂಗನಹಳ್ಳಿ, ರಾಜು ಗುಂಜುಟಗಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಪ್ರಕಾಶ್ ಮುಂಜಿ ಸೇರಿದಂತೆ ಮಠದ ಸದ್ಭಕ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

