ಲೇಖನ
– ಮಲ್ಲಪ್ಪ ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಆಧುನಿಕ ಮಾನವ ಕಂಪ್ಯುಟರ್ ಎಂದೇ ಹೆಸರುವಾಸಿಯಾದ ಶಕುಂತಲಾ ದೇವಿ ಪ್ರಕಾರ“ ಶಿಕ್ಷಣವೆಂದರೆ ಕೇವಲ ಶಾಲೆ-ಕಾಲೇಜುಗಳಿಂದ ಪದವಿ ಪಡೆಯುವುದಲ್ಲ. ಅದು ವ್ಯಕ್ತಿಯ ವಿಷಯ ಜ್ಞಾನ, ಪ್ರಾಯೋಗಿಕತೆ, ವಿವೇಚನೆ-ತಾರ್ತಿಕ ಶಕ್ತಿಯನ್ನು ಹೆಚ್ಚಿಸುತ್ತಾ, ಹಂಚಿಕೆಯಾದ ಕಾರ್ಯವನ್ನು ಕಾರ್ಯಕ್ಷಮತೆಯೊಂದಿಗೆ ಪೂರ್ಣಗೊಳಿಸಲು ಬೇಕಾದ ಅಗತ್ಯ ಕೌಶಲ್ಯವನ್ನು ಒಡಮೂಡಿಸುವುದೇ ನಿಜವಾದ ಶಿಕ್ಷಣ” ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಕಾರ್ಪೋರೇಟ್ ಸಂಸ್ಥೆಗಳ ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, ಇಂದು ಕಾಲೇಜುಗಳಿಂದ ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳು ಅಥವಾ ಪದವೀಧರರು ಉದ್ಯೋಗಕ್ಕೆ ತಕ್ಕಂತೆ ಅರ್ಹತೆ, ಸಂವಹನ ಕೌಶಲ್ಯ, ಸಂದರ್ಶನ ಕಲೆ ಮತ್ತು ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವುದಿಲ್ಲ. ಇಂದಿನ ಕಾಲದಲ್ಲಿ ಡಿಗ್ರಿಗಳಿಗೆ ಕಾಲವಿಲ್ಲ, ಅದರ ಜೊತೆಗೆ ಕೌಶಲ್ಯಗಳನ್ನು ಪಡೆದವನು ಉದ್ಯೋಗದಲ್ಲಿ ಉನ್ನತ ದರ್ಜೆಗೆ ಶೀಘ್ರವಾಗಿ ಏರಲು ಸಾಧ್ಯವಾಗುತ್ತದೆ ಎಂಬ ಅಂಶ ಕಂಡುಬಂದಿದೆ.

ಯುವಕರನ್ನು ಕೌಶಲ್ಯದೊಂದಿಗೆ ಸಜ್ಜುಗೊಳಿಸಿ ಉದ್ಯೋಗವಂತರನ್ನಾಗಿಸುವ ಮಹತ್ವಾಕಾಂಕ್ಷೆ
ಜಾಗತಿಕವಾಗಿ ಯುವಜನತೆ ಎದುರಿಸುವ ಅತಿ ಪ್ರಮುಖ ಸಮಸ್ಯೆಗಳೊಂದಾದ ನಿರುದ್ಯೋಗ ಮತ್ತು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳ ಅವರಲ್ಲಿ ಒಡಮೂಡಿಸುವಲ್ಲಿ ಅಗತ್ಯ ತರಬೇತಿ ಮತ್ತು ಕೌಶಲ್ಯಾಧಾರಿತ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ವಿಶ್ವಸಂಸ್ಥೆಯು ಜುಲೈ ೧೫, ೨೦೧೪ ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲು ಅಧಿಕೃತವಾಗಿ ಕರೆಕೊಟ್ಟಿತು. ಯುವಜನರಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವುದು ಮತ್ತು ಯುವಶಕ್ತಿಯನ್ನು ಉದ್ಯೋಗಕ್ಕಾಗಿ ಸಬಲೀಕರಣಗೊಳಿಸುವುದು ಈ ‘ವಿಶ್ವ ಯುವ ಕೌಶಲ್ಯ ದಿನ’ದ ಪ್ರಮುಖ ಧ್ಯೇಯೋದ್ಧೇಶವಾಗಿದೆ.
ಕಾರ್ಪೋರೇಟ್ ಜಗತ್ತು ಅಪೇಕ್ಷಿತವಾದ ಕೌಶಲ್ಯವಿದ್ದರೆ ಉದ್ಯೋಗ ನಮ್ಮದಾಗುತ್ತದೆ
ಬದಲಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಯುವಜನತೆಗೆ ಉದ್ಯೋಗ ಪಡೆಯುವುದು ಒಂದು ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಉದ್ಯೋಗಾಕಾಂಕ್ಷಿಗಳು ಉನ್ನತ ಗುಣಮಟ್ಟದ ಶಿಕ್ಷಣದ ಜತೆ ವೃತ್ತಿಪರತೆಯೊಂದಿಗೆ ಸಂದರ್ಶನ ಕಲೆ, ಸಂವಹನ ಕೌಶಲ್ಯ, ವಿಶ್ಲೇಷಣೆ, ತಾರ್ಕಿಕ ಶಕ್ತಿ ಮತ್ತು ಸೃಜನಾತ್ಮಕತೆಯಂತಹ ಕೌಶಲ್ಯಗಳನ್ನು ಹೊಂದಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಯಾವ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವಿರೋ ಆ ಕ್ಷೇತ್ರದಲ್ಲಿ ಅಗತ್ಯ ಶೈಕ್ಷಣಿಕ ಅರ್ಹತೆಗಳು ಮತ್ತು ಕಾರ್ಪೋರೇಟ್ ಜಗತ್ತಿನ ಅಪೇಕ್ಷಿತ ಮಟ್ಟದ ಕೌಶಲ್ಯವನ್ನು ಪಡೆದಿರಬೇಕು. ಅಂದಾಗ ಮಾತ್ರ ದೊರೆಯುವ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳಲು ಸಹಕಾರಿಯಾಗುತ್ತದೆ.

ಯುವಜನತೆ ಸ್ವಾವಲಂಬಿಯಾಗುವAತೆ ಸರ್ಕಾರದ ದಿಟ್ಟ ಹೆಜ್ಜೆ
ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೌಶಲ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿವೆ. ಮೈ ಭಾರತ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ ಅಪ್, ಸ್ಟಾö್ಯಂಡ್ ಅಪ್, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ, ಮುದ್ರಾ ಹೀಗೆ ಯುವಕರಲ್ಲಿ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಕೌಶಲ್ಯಾಧಾರಿತ ತರಬೇತಿ ನೀಡುತ್ತಿರುವುದು ದಿಟ್ಟ ಹೆಜ್ಜೆಯಾಗಿದೆ. ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್, ಯಂತ್ರಗಳ ಬಳಕೆ, ಹಾರ್ಡವೇರ್-ಸಾಫ್ಟವೇರ, ಟೇಲರಿಂಗ್, ಬ್ಯೂಟಿ ಪಾರ್ಲರ್, ಕರಕುಶಲ ಕೆಲಸ-ಕಾರ್ಯಗಳ ಬಗ್ಗೆ ತರಬೇತಿ ನೀಡುತ್ತಾ, ಸ್ವಯಂ ಉದ್ಯೋಗದೊಂದಿಗೆ ಆರ್ಥಿಕ ಸ್ವಾವಲಂಬಿಯನ್ನಾಗಿಸುತ್ತಿದೆ. ಯುವಜನತೆಯಲ್ಲಿ ವೃತ್ತಿ, ಜೀವನ ಕೌಶಲ್ಯ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮತ್ತು ಕೌಶಲ್ಯಗಳ ಸದ್ಭಳಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದೇ ಈ ದಿನದ ಆಚರಣೆಯು ಪ್ರಮುಖ ಪಾತ್ರ ವಹಿಸುತ್ತಿದೆ.
ಶಿಕ್ಷಣದ ಗುರಿ ಮತ್ತು ದೃಷ್ಟಿಕೋನ ಬದಲಾಗಬೇಕು
ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ಯುವಕರಿಗೆ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಸಾಲದು. ಅವರವರ ಕ್ಷೇತ್ರದಲ್ಲಿ ಅಥವಾ ಆಸಕ್ತಿಗೆ ತಕ್ಕಂತೆ ವೃತ್ತಿಪರ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಉದ್ಯೋಗ ಪಡೆಯಲು ಅಭ್ಯರ್ಥಿಗಳ ಕೌಶಲ್ಯಗಳೇ ಮಾನದಂಡವಾಗಲಿವೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಪಡೆದ ಪಠ್ಯಕ್ರಮದಲ್ಲಿರುವ ವಿಷಯ ಜ್ಞಾನವು ಅವರು ಉದ್ಯೋಗ ಸ್ಥಳಕ್ಕೆ ಬಂದಾಗ ಅದು ಹಳೆಯದಾಗಿರುತ್ತದೆ. ಆದ್ದರಿಂದ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಪ್ರಸ್ತುತ ಕೈಗಾರಿಕೆ, ಕಂಪನಿ, ವ್ಯವಹಾರ ಸಂಸ್ಥೆಗಳು, ಬ್ಯಾಂಕಿಂಗ್, ಹಣಕಾಸು, ವಿಮೆ ಮತ್ತು ಇನ್ನಿತರ ಸೇವಾ ಸಂಸ್ಥೆಗಳ ಅಗತ್ಯತೆಗೆ ಅನುಗುಣವಾಗಿ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವೆ ಸಂಪರ್ಕವನ್ನಿಟ್ಟುಕೊಂಡು ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದ ಉದ್ಯೋಗ ಮತ್ತು ವೃತ್ತಿಪರವಾದ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ಯಶಸ್ವಿ ಹೊಂದಲು ಶಿಕ್ಷಣದ ಜೊತೆಗೆ ಕೌಶಲ್ಯಗಳು ಬೇಕು. ಕಾಲಕಾಲಕ್ಕೆ ಪ್ರಸ್ತುತವೆನಿಸುವ ಸ್ಕೀಲ್ಗಳನ್ನು ಅಪಗ್ರೇಡ್ ಮಾಡಿಕೊಳ್ಳುವುದು ಅನಿವಾರ್ಯ ಎಂಬುದನ್ನು ಅರಿಯಬೇಕು. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದ ಗುರಿ ಮತ್ತು ದೃಷ್ಟಿಕೋನ ಬದಲಾಗಬೇಕು.
೨೦೨೬ ನೇಯ ವರ್ಷದ ಘೋಷವಾಕ್ಯ
“ಹಂಚಿದ ಭವಿಷ್ಯಕ್ಕಾಗಿ ಕೌಶಲ್ಯಗಳು” ಎಂಬ ಧ್ಯೇಯವಾಕ್ಯದೊಂದಿಗೆ ಯುವಜನತೆಯನ್ನು ಕೌಶಲ್ಯದೊಂದಿಗೆ ಉದ್ಯೋಗ ಪಡೆದು ಸುಸ್ಥಿರ ಅಭಿವೃದ್ಧಿ ಮತ್ತು ಯಶಸ್ವಿ ಉದ್ಯಮಶೀಲತೆಗೆ ಸಜ್ಜುಗೊಳಿಸುವ ಮಹೋನ್ನತವಾದ ಉದ್ಧೇಶವನ್ನು ಈ ವರ್ಷದ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತಿದೆ. ಭವಿಷ್ಯದ ಸಬಾಲುಗಳನ್ನು ಎದುರಿಸಲು ಮತ್ತು ಜಾಗತಿಕವಾಗಿ ಯುವಜನರನ್ನು ಸಬಲೀಕರಣಗೊಳಿಸುವಲ್ಲಿ ಈ ಕೌಶಲ್ಯ ದಿನವು ಸಂದೇಶವನ್ನು ಸಾರುತ್ತದೆ.
ಕೊನೆಯ ನುಡಿ
ಕೇವಲ ಪಠ್ಯಕ್ರಮವನ್ನು ವಿವರಿಸುವ, ತಿಳಿಸುವ, ಮಾಹಿತಿ ನೀಡುವ ಕೊನೆಗೆ ಗರಿಷ್ಠ ಅಂಕದೊಂದಿಗೆ ಪದವಿ ಪಡೆದು ಉದ್ಯೋಗಕ್ಕಾಗಿ ಬೇರೊಬ್ಬರ ಮುಂದೆ ಕೈಚಾಚಿ ಅಂಗಲಾಚಿ ನಿಲ್ಲುವಂತಹ ಪರಿಸ್ಥಿತಿಯನ್ನು ತರುವಂತಾಗಬಾರದು. ಯುವಕರು ‘ಸರಕಾರಿ ನೌಕರಿ’ ಎಂಬ ಮರಳುಗಾಡಿನ ಮರೀಚಿಕೆಗಾಗಿ ಕಾಯ್ದು ಕುಳಿತುಕೊಳ್ಳದೇ ಜೀವನ ನಿರ್ವಹಣೆಗಾಗಿ ಯಾವುದಾದರೂ ಸ್ವಯಂ ಉದ್ಯೋಗ ಕೈಗೊಳ್ಳುವಂತೆ ರೂಪಿಸಬೇಕು. ತಾವು ಪಡೆದ ಕೌಶಲ್ಯದಿಂದ ದೇಶೀಯ ಕುಲ-ಕಸುಬುಗಳಾದ ಸಣ್ಣ, ಗುಡಿ, ಗೃಹ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರಾರಂಭಿಸುತ್ತಾ ಸ್ವಾವಲಂಬಿಗಳಾಗಿ ಬದುಕಿ ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವಂತಾಗಬೇಕು ಎನ್ನುವುದು ನನ್ನ ಅಂಬೋಣ.


