ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂಗಾರು ಮಳೆ ಅಭಾವದಿಂದ ರಾಜ್ಯದ ಬಹುತೇಕ ಜಲಾಶಯಗಳಿಗೆ ಇನ್ನೂ ಸಮರ್ಪಕ ಒಳಹರಿವು ಆರಂಭವಾಗದ ಹಿನ್ನೆಲೆಯಲ್ಲಿ, ಆಲಮಟ್ಟಿ ಜಲಾಶಯದಲ್ಲಿರುವ ಲಭ್ಯವಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಸರಕಾರಸೂಚನೆ ನೀಡಿದೆ ಎಂದು ಆಲಮಟ್ಟಿ ಆಣೆಕಟ್ಟು ವೃತ್ತದ ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ರೈತ ಬಾಂಧವರು ಸರಕಾರದ ನಿರ್ದೇಶನದನುಸಾರ ಜನ-ಜಾನುವಾರುಗಳ ಕುಡಿಯುವ ನೀರಿನ ಹಿತದೃಷ್ಟಿಯಿಂದ ಸಹಕಾರ ನೀಡಬೇಕೆಂದವರು ಮನವಿ ಮಾಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಿರುವುದರಿಂದ ಜಲಾಶಯದಲ್ಲಿರುವ ನೀರನ್ನು ಈ ಉದ್ದೇಶಕ್ಕಾಗಿಯೇ ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಆಲಮಟ್ಟಿ ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
