ಜೀವನೋಪಾಯಕ್ಕಾಗಿ ವಲಸೆ, ಮನೆಗಳಿಗೆ ಬೀಗ, ದಾಖಲಾತಿ ಇಲ್ಲದೆ ತ್ರಿಶಂಕುಸ್ಥಿತಿಯಲ್ಲಿ ಆದಿವಾಸಿಗಳು
ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಎಚ್.ಡಿ.ಕೋಟೆ: ಹಳ್ಳಿಗಳಿಂದ ಆವೃತವಾಗಿರುವ ಹೆಚ್ ಡಿ ಕೋಟೆ ತಾಲೂಕಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕಬ್ಬಿಣದ ಕಡಲೆಯಾಗಿದೆ. ಅದರಲ್ಲೂ ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳಲ್ಲಿ ಬಿಎಲ್ ಒ ಗಳ ಪರಿಸ್ಥಿತಿ ಹೇಳತೀರದಾಗಿದೆ. ಹಾಡಿಗಳಿಗೆ ಹೋದ್ರೆ ಜನ ಇರೋದಿಲ್ಲ, ಮನೆಗಳಿಗೆ ಬೀಗ ಹಾಕಿಕೊಂಡು ಕೊಡಗಿನ ಎಸ್ಟೇಟ್ ಗಳಿಗೆ ವಲಸೆ ಹೋಗಿರುತ್ತಾರೆ. ಇದರಿಂದ ವಿಶೇಷ ತೀವ್ರ ಪರಿಷ್ಕರಣೆ ಮ್ಯಾಪಿಂಗ್ ಪ್ರಕ್ರಿಯೆ ಮಾಡುವುದೇ ಬಿಎಲ್ ಒ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗ ವಾಸಸ್ಥಳ ದೃಢೀಕರಣ, ಜನ್ಮ ಪ್ರಮಾಣಪತ್ರ ಹಾಗೂ ಆಸ್ತಿ ಹಕ್ಕುಪತ್ರಗಳಂತಹ ಕಠಿಣ ದಾಖಲೆಗಳನ್ನು ಕೇಳುತ್ತಿದ್ದು, ಪುನರ್ವಸತಿ ಕಲ್ಪಿಸದ ಹಿನ್ನೆಲೆ, ತಲೆಮಾರುಗಳ ದಾಖಲೆ ತರುವುದಾದರೂ ಎಲ್ಲಿಂದ ಎಂಬ ಚಿಂತೆ ಆದಿವಾಸಿ ಕುಟುಂಬಗಳಿಗೆ ಕಾಡುತ್ತಿದೆ.
ಹಾಡಿಗಳ ಮನೆಮನೆಗೆ ತೆರಳಿ SIR ಅರ್ಜಿ ಫಾರಂ ವಿತರಿಸುವ ಜವಾಬ್ದಾರಿ ಹೊತ್ತ ಬಿಎಲ್ಒಗಳು ಬಹುತೇಕರ ಮನೆಗಳಲ್ಲಿ ಜನರಿಲ್ಲದೆ ಪರದಾಡುತ್ತಿದ್ದಾರೆ. ಇನ್ನು ಮತದಾರ ಪಟ್ಟಿಯಿಂದ ಬಿಟ್ಟು ಹೋಗಿರುವ ಗಿರಿಜನರು ಸ್ಥಳೀಯ ನಿವಾಸಿಗಳು ಎಂದು ಗುರುತಿಸುವ ದಾಖಲೆಗಳನ್ನು ಪಡೆಯಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನಲ್ಲಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಎರವ, ಪಂಜರಿ, ಪಣಿಯ, ಇರುಳಿಗರು ಸೇರಿದಂತೆ ಅನೇಕ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಆದರೆ ಅವರಿಗೆ ಚುನಾವಣಾ ಆಯೋಗ ಕೇಳುವ ದಾಖಲಾತಿ ಒದಗಿಸಲು ಆಗುತ್ತಿಲ್ಲ. ಜೀವನೋಪಾಯಕ್ಕಾಗಿ ಕೊಡಗಿನ ಎಸ್ಟೇಟ್ ಸೇರಿದಂತೆ ಜಮೀನುದಾರರ ಭೂಮಿಯಲ್ಲಿ ಕೂಲಿ ಕೆಲಸ ಮಾಡುವ ನಾವು ಎಲ್ಲಿಂದ
ವಾಸಸ್ಥಳ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ, ಆಸ್ತಿಯ ಹಕ್ಕುಪತ್ರ ತರುವುದು ಎಂದು ಪ್ರಶ್ನೆ ಮಾಡುತ್ತಾರೆ.
ಆದಿವಾಸಿಗಳ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ಇದೆ. ಆದರೆ ಇದಕ್ಕೆ ಚುನಾವಣಾ ಆಯೋಗ ಆದ್ಯತೆ ನೀಡುತ್ತಿಲ್ಲ. ಜೊತೆಗೆ ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲಎಂಬ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯಿಂದ ಎಲ್ಲಿ ಸೌಲಭ್ಯ ತಪ್ಪುವುದೋ ಎಂಬ ಆತಂಕ ಆದಿವಾಸಿಗಳಲ್ಲಿ ಶುರುವಾಗಿದೆ.
ದಾಖಲೆ ಎಲ್ಲಿಂದ ತರೋಣ?
ಕೆಲವೇ ಕುಟುಂಬಗಳಿಗೆ ಮಾತ್ರ ಭೂಮಿ ಇದೆ. ಅವುಗಳ ದಾಖಲೆ ಕೂಡ ಸರಿಯಾಗಿಲ್ಲ. ಸರ್ಕಾರ ನೀಡಿರುವ ಆಸ್ತಿಯ ಪೌತಿಖಾತೆ ಆಗಿಲ್ಲ. ಎಲ್ಲ ಇಲಾಖೆಗಳು ನಮ್ಮನ್ನು ನಿರ್ಲಕ್ಷಿಸುತ್ತವೆ. ಹಲವೆಡೆ ನಮ್ಮ ಭೂಮಿ ಒತ್ತುವರಿಯಾಗಿದೆ. ಹೀಗಿರುವಾಗ ನಾವು ಯಾವ ದಾಖಲೆಗಳನ್ನು ನೀಡಬೇಕು? ಎಂದು ಆದಿವಾಸಿ ಕೃಷ್ಣ ಪ್ರಶ್ನಿಸುತ್ತಾರೆ.
ಅರಣ್ಯ ಹಕ್ಕು ಕಾಯಿದೆ 2006 ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ದಾಖಲೆ ಒದಗಿಸುವುದಾದರೂ ಹೇಗೆ? ಇವರು ಕೇಳಿರುವ ದಾಖಲೆಗಳನ್ನು ಎಲ್ಲಿಂದ ತಂದು ಕೊಡೋಣ ಎಂಬುದು ಆದಿವಾಸಿಗಳ ಅಳಲು. ಇನ್ನು ಎಲ್ಲಾ ಪಕ್ಷಗಳಿಂದಲೂ ಬಿಎಲ್ಒ ಗಳನ್ನೂ ನಿಯೋಜಿಸಲಾಗಿದೆ. ಆದರೆ ಅವರು ಕೂಡ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಹೆಚ್ಚು ತಲೆಕೆಡಿಕೊಂಡಂತೆ ಕಾಣುತ್ತಿಲ್ಲ. ಬಿಎಲ್ಒ ಗಳ ಸಭೆಗಳಿಗೆ ಹಾಜರಗ್ತಾರೋ ಹೊರತು, ಪ್ರಕ್ರಿಯೆ ಶುರುವಾದ ಮೇಲೆ ಪರಿಶೀಲಿಸುವ ಕಾರ್ಯಕ್ಕೆ ಹೋಗಿಲ್ಲ. ಇನ್ನು ಬಿಜೆಪಿ, ಜೆಡಿಎಸ್ ಹೇಳೋದೇ ಬೇಡ. ಬಿಎಲ್ಒ ಗಳು ನೋಡಿಕೊಳ್ಳುತ್ತಾರೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು ಎಂಬ ಉಡಾಫೆ ಮನಸ್ಥಿತಿ ಅವರದ್ದು.

