ಕೂಡಗಿ ಗ್ರಾಮದಲ್ಲಿ ಕುಡಿಯುವ ಹಾಗೂ ಕೃಷಿ ಬಳಕೆಯ ಪ್ರಮುಖ ಆಧಾರವಾಗಿರುವ ಸ್ಥಳೀಯ ಕೆರೆ | ಗ್ರಾಮಸ್ಥರ ತೀವ್ರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಕೂಡಗಿ ಗ್ರಾಮದಲ್ಲಿ ಕುಡಿಯುವ ಹಾಗೂ ಕೃಷಿ ಬಳಕೆಯ ಪ್ರಮುಖ ಆಧಾರವಾಗಿರುವ ಸ್ಥಳೀಯ ಕೆರೆಯ ಪಕ್ಕದಲ್ಲೇ ಬಾವಿಗಳನ್ನು ತೋಡಿ, ಅಲ್ಲಿಂದ ಬೇರೆಡೆಗೆ ನೀರು ಸರಬರಾಜು ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಇದರಿಂದಾಗಿ ಗ್ರಾಮದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರಾವರಿ ಜಮೀನುಗಳಿಗೆ ಹಾಗೂ ಗ್ರಾಮಸ್ಥರ ದೈನಂದಿನ ಬಳಕೆಗೆ ತೀವ್ರ ಹೊಡೆತ ಬಿದ್ದಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರಮುಖ ಆರೋಪವೆಂದರೆ, ಸ್ಥಳೀಯರ ಕುಡಿಯುವ ಹಾಗೂ ದೈನಂದಿನ ಬಳಕೆಯ ಹಕ್ಕನ್ನು ಕಸಿದುಕೊಂಡು, ಕೆರೆಯ ಬಾವಿಗಳನ್ನು ನಿರ್ಮಿಸಿ ಅಲ್ಲಿಂದ ಪೈಪ್ಲೈನ್ ಅಳವಡಿಸಿ ನೀರನ್ನು ಬೇರೆಡೆಗೆ ಒಯ್ಯಲಾಗುತ್ತಿದೆ. ಈ ಅವೈಜ್ಞಾನಿಕ ನೀರು ಎತ್ತುವಿಕೆಯಿಂದಾಗಿ ಇಡೀ ಕೆರೆಯ ನೀರು ಸಂಪೂರ್ಣವಾಗಿ ಖಾಲಿಯಾಗಿದೆ. ಕೃಷಿಯನ್ನೇ ನಂಬಿಕೊಂಡಿರುವ ರೈತರ ನೀರಾವರಿ ಜಮೀನುಗಳು ಈಗ ನೀರಿನ ಅಭಾವದಿಂದ ಒಣಗುವ ಹಂತಕ್ಕೆ ತಲುಪಿವೆ.”ನಮ್ಮ ಗ್ರಾಮದ ಕೆರೆ ಮತ್ತು ಹಳ್ಳಗಳು ನಮ್ಮ ಜೀವನಾಡಿ. ಆದರೆ ಇಲ್ಲಿನ ನೀರನ್ನು ಪೈಪ್ಲೈನ್ ಮೂಲಕ ಬೇರೆಡೆಗೆ ಸಾಗಿಸುತ್ತಿರುವುದರಿಂದ ಕೆರೆಯಲ್ಲಿನ ನೀರು ದಿನದಿಂದ ದಿನಕ್ಕೆ ತಳ ಮುಟ್ಟುತ್ತಿದೆ. ನಮ್ಮ ಸ್ವಂತ ಬಳಕೆಗೆ ಮತ್ತು ಜಮೀನುಗಳಿಗೆ ನೀರಿಲ್ಲದಂತಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ,” ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಕೂಡಗಿ ಗ್ರಾಮ ತೀವ್ರ ಜಲಕ್ಷಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಗ್ರಾಮಸ್ಥರು, ಕೆರೆ ಹಾಗೂ ಹಳ್ಳದ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಕೊರೆಯಲಾಗಿರುವ ಎಲ್ಲಾ ಬಾವಿಗಳನ್ನು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮುಚ್ಚಿಸಬೇಕು ಎಂದು ಪ್ರಬಲವಾಗಿ ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆ ನೀಡಿದ್ದಾರೆ.
ಅಂದಾಜು ೧೦ ಕ್ಕೂ ಹೆಚ್ಚು ಬಾವಿಗಳನ್ನು ತೆಗೆದು ಅಲ್ಲಿಯ ನೀರನ್ನು ಬೇರೆ ಗ್ರಾವiಗಳಿಗೆ ಕೃಷಿಗಾಗಿ ಮತ್ತು ಇನ್ನಿತರ ಉದ್ಯೋಗಕ್ಕಾಗಿ ಬಳಸುತ್ತಿದ್ದಾರೆ. ಭಾವಿಯಿಂದ ಅಡ್ಡವಾಗಿ ಕೆರೆಗೆ ಬೋರ ಕೊರೆದು ನೀರು ಪಡೆಯುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಅದಲ್ಲದೆ ಪ್ರತಿ ಬಾವಿಗೆ ನಾಲ್ಕಕ್ಕೂ ಹೆಚ್ಚು ೧೨ ಎಚ್ ಪಿ ಮೋಟಾರುಗಳನ್ನು ಅಳವಡಿಸಿ ನೀರನ್ನು ಪಡೆಯುತ್ತಿದ್ದಾರೆ.
ಇಲ್ಲಿಯ ಕೆರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ತಿಡಗುಂದಿ ಶಾಖಾ ಕಾಲುವೆಯಿಂದ ನೀರು ಬರುತ್ತದೆ. ಕೆರೆ ತುಂಬ ನೀರು ಬಿಡುತ್ತಾರೆ. ಆದರೆ ಆ ನೀರು ಸೋರಿಕೆಯಾಗಿ ಕೆರೆಯ ಪಕ್ಕದಲ್ಲಿರುವ ಭಾವಿಯಲ್ಲಿ ಜಮೆಯಾಗುತ್ತವೆ ಎಂಬುದು ಇಲ್ಲಿಯ ರೈತರ ಆರೋಪ.
ಈ ಕುರಿತು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ.
ಚಂದ್ರಶೇಖರ ಖಾನಾಪುರ, ಸಿದಲಿಂಗ ಖಾನಾಪುರ, ರಮೇಶ ಮೇಡೇದಾರರ, ಜ್ಞಾನೇಶ್ವರ ಠೋಕೆ, ಧನರಾಜ ಠೋಕೆ, ಮಲ್ಲಿಕಾರ್ಜುನ ದಳವಾಯಿ, ಸಿದ್ದಪ್ಪ ನಾಯಿಕೊಡಿ, ಶಾಂತಪ್ಪ ಮಸಳಿ, ರಾಮಚಂದ್ರ ಠೋಕೆ ಸೋಮಲಿಂಗ ಸಿನ್ನೂರ ಮತ್ತಿತರರು ನ್ಯಾಯ ದೊರೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿದ್ದಾರೆ.
“ಕೂಡಗಿ ಕೆರೆಯ ಪಕ್ಕದ ಹಳ್ಳದಲ್ಲಿ ಭಾವಿ ತೋಡಿ ನೀರು ಪೈಪ್ಲೈನ್ ಮುಖಾಂತರ ಬೇರೆಕಡೆ ಒಯ್ಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.”
– ಚಿದಾನಂದ ಗುರುಸ್ವಾಮಿ
ಕಂದಾಯ ಉಪವಿಭಾಗಾಧಿಕಾರಿ, ಇಂಡಿ.
“ಕೂಡಗಿ ಕೆರೆಯ ನೀರನ್ನು ಬೇರೆ ಗ್ರಾಮದ ಜನರು ಬಾವಿ ತೋಡಿ ತೆಗೆದುಕೊಂಡು ಹೋಗಿ ಬಳಸುತ್ತಿರುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಕೊಳ್ಳಲು ಸಣ್ಣ ನೀರಾವರಿ ಅಭಿಯಂತರರಿಗೆ ಸೂಚನೆ ನೀಡಿದ್ದೇನೆ. ಅವರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಂಡ ನಂತರ ಮುಂದೆ ಏನು ಮಾಡುವುದರ ಬಗ್ಗೆ ತೀರ್ಮಾನ ಮಾಡುತ್ತೇವೆ.”
– ನಾಗೇಂದ್ರ ಕೋಳಶೆಟ್ಟಿ
ತಹಸೀಲದಾರರು, ಇಂಡಿ
“ಕೂಡಗಿ ಕೆರೆ ತುಂಬಿದಾಗ ಮಾತ್ರ ಎಲ್ಲ್ಲರಿಗೂ ನೀರು ಸಿಗಲು ಸಾದ್ಯ. ಇಲ್ಲದಿದ್ದರೆ ಅನಧಿಕೃತವಾಗಿ ಕೆರೆಯ ನೀರನ್ನು ಬೇರೆ ಗ್ರಾಮದವರು ತೆಗೆದುಕೊಂಡು ಹೋಗುವದು ನಿಲ್ಲಿಸಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಕೆರೆಯ ಸುತ್ತಲಿನ ಭಾವಿಗಳನ್ನು ಮುಚ್ಚಿಸುವ ಕಾರ್ಯ ಮಾಡಬೇಕು.”
– ಗುರುನಾಥ ಬಗಲಿ
ರೈತ ಹೋರಾಟಗಾರರು, ಗುಂದವಾನ

