ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯದ ಅಂಗವಾಗಿ ತಹಶಿಲ್ದಾರ ಸುರೇಶ ಚವಲರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಫಾರಂ (ಇಎಫ್) ವಿತರಣೆ ಹಾಗೂ ಭರ್ತಿ ಮಾಡಿದ ಪಾರ್ಮಗಳ ಆನಲೈನ್ ಅಪಲೋಡ ಕಾರ್ಯವನ್ನು ಬುಧವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹುಬನೂರ ಗ್ರಾಮದ ಮತಗಟ್ಟೆ ಸಂಖ್ಯೆ 34, 35 ಹಾಗೂ ಕಳ್ಳಕವಟಗಿಯ ಮತಗಟ್ಟೆ ಸಂಖ್ಯೆ 49, 50 ರಲ್ಲಿ ಕಾರ್ಯನಿರ್ವಹಿಸುವ ಬಿಎಲ್ಓಗಳ ಕಾರ್ಯವೈಖರಿಯನ್ನು ಅವಲೋಕಿಸಿದ ತಹಶಿಲ್ದಾರ ಚವಲರ ಮತದಾರರಿಗೆ ನಮೂನೆಗಳನ್ನು ಸಮರ್ಪಕವಾಗಿ ತಲುಪಿಸಿ, ಅಗತ್ಯ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು.
ಯಾವುದೇ ಅರ್ಹ ಮತದಾರರು ವಂಚಿತರಾಗದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ವ್ಯವ್ಯಸ್ಥಿತ ತಂಡ ಮಾಡಿದ್ದು, ಎಸ್ಐಆರ್ ಪ್ರಗತಿಗೆ ಎಲ್ಲ ಸಿಬ್ಬಂದಿ ಹಗಲಿರುಳು ಶ್ರಮವಹಿಸುತ್ತಿದ್ದಾರೆ. ಮತದಾರರಿಗೆ ಅಗತ್ಯ ಮಾಹಿತಿಯೊಂದಿಗೆ ತಮ್ಮ ಕುಟುಂಬದ ಸದಸ್ಯರ ಸವಿವರಗಳನ್ನು ತುಂಬಲು ಜಾಗೃತಿ ಮೂಡಿಸಲಾಗಿದೆ.
ಬಿಎಲ್ಓಗಳಿಗೆ ಹಳ್ಳಿಗಳಲ್ಲಿ, ತೋಟದ ವಸ್ತಿ ಹಾಗೂ ಗಡಿಗ್ರಾಮಗಳಲ್ಲಿ ನೆಟ್ವರ್ಕ ಸಮಸ್ಯೆ ಎದುರಾದರೆ ಹತ್ತಿರದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆನಲೈನ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಎಸ್ಐಆರ್ ಪ್ರಗತಿ ಸಾಧಿಸುತ್ತಾ ಸಾಗಿದೆ ಎಂದು ತಹಶಿಲ್ದಾರ ಸುರೇಶ ಚವಲರ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಕೆ.ಎಂ.ಗಳತಗಿ, ಬಿಎಲ್ಓ ಬಿ.ಆರ್.ಕಟೆ, ಪ್ರಕಾಶ ಚೌಧರಿ, ಅಶೋಕ ಚೌಧರಿ ಎಚ್.ಆರ್.ಕಲಾಲ, ಗ್ರಾಮ ಲೆಕ್ಕಾಧಿಕಾರಿ ಆರ್.ಎ. ಮುಲ್ಲಾ ಇದ್ದರು.

