ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಪ್ತಪತಿ ಫೌಂಡೇಶನ್ ಮಂಗಳಸೂತ್ರ ಫೌಂಡೇಶನ್ ಹಾಗೂ ಶ್ರೀ ಶಿವಚಿದಂಬರ ಸೇವಾ ಸಮಿತಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಇದೇ ಜುಲೈ೧೧-೧೨ ರಂದು ನಗರದ ರಿಂಗ್ ಮನಗೂಳಿ ರಸ್ತೆಯಲ್ಲಿರುವ ಶ್ರೀ ಚಿದಂಬರೇಶ್ವರ ಸಾಂಸ್ಕೃತಿಕ ಭವನದಲ್ಲಿ ರಾಜ್ಯಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರರ ವರಾನ್ವಷೇಷಣಾ ಸಮಾವೇಶ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀ ಗಿರಿಜಾ ಕಲ್ಯಾಣೋತ್ಸವ ಮಹಾ ಸಂಕಲ್ಪ ಜರುಗಲಿದೆ ಎಂದು ಸಪ್ತಪದಿ ಫೌಂಡೇಶನ್ ಟ್ರಸ್ಟನ ಸಂಚಾಲಕ ಶ್ರೀನಿವಾಸ ಭಾರದ್ವಾಜ ತಿಳಿಸಿದರು.
ರಾಜ್ಯದಲ್ಲಿನ ಎಲ್ಲ ಬ್ರಾಹ್ಮಣ ವಧು-ವರರಿಗೆ ಮದುವೆ ಆಗಬೇಕೆಂಬ ಉದ್ದೇಶದಿಂದ ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಜನರಿಗೆ ಅನುಕೂಲ ಆಗಲು ಅಲ್ಲಿಯೇ ಮದುವೆ ಹೊಂದಾಣಿಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ದಿವ್ಯ ಸಾನ್ನಿಧ್ಯವನ್ನು ಪಂಡಿತ ಮಧ್ವಾಚಾರ್ಯ ಮೋಕಾಶಿ, ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿ, ಶ್ರೀನಿವಾಸನ್ ಗುರೂಜಿ, ಕೃಷ್ಣ ಭಟ್ ಗಲಗಲಿ, ಸತೀಶಚಂದ್ರ ಕುಲಕರ್ಣಿ, ಚಿದಂಬರೇಶ್ವರ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ ಸೇರಿದಂತೆ ಅನೇಕ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನಮ್ಮ ಸಪ್ತಪತಿ ಮಂಗಳಸೂತ್ರ ಫೌಂಡೇಶನ್ ವತಿಯಿಂದ ಅತಿ ಹೆಚ್ಚು ಮದುವೆಗಳು ನಡೆದಿದ್ದು, ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮದುವೆ ಮಾಡಿಸಲಾಗಿದೆ. ಈಗ ನಾವೇ ಮದುವೆ ಮಾಡಿಸಲು ಮುಂದೆ ಬಂದರೂ ವಧುಗಳ ಪಾಲಕರು ಬರುತ್ತಿಲ್ಲ ಎಂದು ತಿಳಿಸಿದರು.
ಬ್ರಾಹ್ಮಣ ಕ್ಷೇಮಾಭಿವೃದ್ಧಿ ರಾಜ್ಯಾಧ್ಯಕ್ಷ ಆನಂದ ಜೋಶಿ ಮಾತನಾಡಿ,ಬ್ರಾಹ್ಮಣ ವಧು-ವರರು ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಲು ವೇದಿಕೆ ಬೇಕು ಅದು ಸಪ್ತಪದಿ ಮಂಗಳಸೂತ್ರ ಪೌಂಡೇಶನ್ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲಿಯೂ ಬ್ರಾಹ್ಮಣ ವಧು-ವರರ ಸಮಾವೇಶಕ್ಕೆ ಎಲ್ಲ ಬ್ರಾಹ್ಮಣ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು.
ಹಿರಿಯ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಗಳು ಉತ್ತರ ಪ್ರದೇಶದ ಬಡ ಬ್ರಾಹ್ಮಣ ವಧುಗಳನ್ನು ಕರ್ನಾಟಕದಲ್ಲಿನ ವರರಿಗೆ ಮದುವೆ ಮಾಡಿಲು ಅನುಮತಿ ನೀಡಿದ್ದರು. ಅದರಂಗವಾಗಿ ಉತ್ತರ ಪ್ರದೇಶದ ವಧುಗಳನ್ನು ಕರೆತರುವ ಪ್ರಯತ್ನ ಜಾರಿಯಲ್ಲಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರತಿನಿಧಿ ಸತೀಶ್ಚಂದ್ರ ಕುಲಕರ್ಣಿ ಮಾತನಾಡಿ, ಜು.೧೧-೧೨ ರಂದು ನಡೆಯುವ ವಧು-ವರರ ಸಮಾವೇಶದಲ್ಲಿ ಶುಲ್ಕ ಉಚಿತವಾಗಿದ್ದು, ವಧು-ವರರ ಬಯೋಡೆಟಾ ಪೋಸ್ಟ ಕಾರ್ಡ ಫೋಟೊ ಹಾಗೂ ಜಾತಕದೊಂದಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ವಧುಗಳ ಪಾಲಕರು ಕೇವಲ ಬೆಂಗಳೂರು ಸಾಫ್ಟವೇರ್ ಕಂಪನಿಗಳ ವರರರನ್ನು ಹುಡಕದೇ ಸ್ಥಳೀಯವಾಗಿ ಒಳ್ಳೆಯ ಉದ್ಯೋಗ ಹಾಗೂ ವ್ಯಾಪಾರದವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಲು ಮುಂದೆ ಬರಬೇಕು ಎಂದು ವಿನಂತಿ ಮಾಡಿದರು.
ಬ್ರಾಹ್ಮಣರಲ್ಲಿ ವಧು ಹಾಗೂ ವರರ ಅನುಪಾತ ಕಡಿಮೆಯಿದ್ದು, ಉತ್ತಮ ವರರನ್ನು ವಧುಗಳ ಪಾಲಕರು ಪರಿಗಣಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯತೀರ್ಥ, ಸತಿತಾ ಗಲಗಲಿ, ವಿಜಯ ಜೋಶೀ, ಆನಂದ ಕುಲಕರ್ಣಿ, ಗೋವಿಂದ ಜೋಶಿ ಸೇರಿದಂತೆ ಅನೇಕರು ಹಾಜರಿದ್ದರು.

