ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ | ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಗಣತಿ ನಮೂನೆ ಭರ್ತಿ ಮಾಡುವ ಸಂದರ್ಭ ಮಾಹಿತಿ ದಾಖಲಿಸುವಾಗ ಬಹು ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಮತದಾರರ ಕುಟುಂಬದ ಮಾಹಿತಿಯನ್ನು ತಪ್ಪಾಗಿ ನಮೂದಿಸದಾಗದಂತೆ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಾಹಿತಿ ನಮೂದಿಸುವಾಗ ಯಾವುದೇ ಅನಗತ್ಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಗಣತಿ ನಮೂನೆಯ ಎರಡನೇ ಕಾಲಂನ ಎರಡನೇ ಪಟ್ಟಿಯಲ್ಲಿ ಕೇವಲ ೨೦೦೨ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನೇ ದಾಖಲಿಸಬೇಕು. ಒಂದು ವೇಳೆ ೨೦೦೨ರ ಮಾಹಿತಿಯು ಲಭ್ಯವಿಲ್ಲದಿದ್ದರೆ ಆ ಕಾಲಂ ಅನ್ನು ಖಾಲಿ ಬಿಡಬೇಕು. ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರು.
ಗಣತಿ ನಮೂನೆಗಳ ಭರ್ತಿ, ರೂಲ್ ಬ್ಯಾಕ್ ಪ್ರಕ್ರಿಯೆ, ನೋಟಿಸ್ ಜಾರಿ ಹಾಗೂ ಹಿಯರಿಂಗ್ಗೆ ಸಂಬಂಧಿಸಿದಂತೆ ಅಗತ್ಯ ಸೂಚನೆಗಳನ್ನು ನೀಡಿದ ಅವರು, ಪ್ರತಿ ದಿನ ತಹಶೀಲ್ದಾರರು, ಚುನಾವಣಾ ಅಧಿಕಾರಿಗಳು ಹಾಗೂ ಬಿಎಲ್ಒಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ರೂಲ್ ಬ್ಯಾಕ್ ಪ್ರಕ್ರಿಯೆ ಆರಂಭವಾಗುವ ಮೊದಲೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡರೆ ಅಂತಿಮ ಹಂತದಲ್ಲಿ ತೊಂದರೆ ಉಂಟಾಗುವುದಿಲ್ಲ ಎಂದರು.
ಗಣತಿ ನಮೂನೆಗಳ ಪರಿಶೀಲನೆಯ ಸಂದರ್ಭದಲ್ಲಿ ಡ್ಯಾಶ್ಬೋರ್ಡ್ನಲ್ಲಿ “ರೂಲ್ ಬ್ಯಾಕ್” ಅಥವಾ ಆಕ್ಷೇಪಣೆಗೆ ಒಳಪಡುವ ನಮೂನೆಗಳನ್ನು ಗುರುತಿಸಿ, ಸಂಬಂಧಿಸಿದ ಬಿಎಲ್ಒಗಳಿಗೆ ತಕ್ಷಣ ಮಾಹಿತಿ ನೀಡಿ ಅಗತ್ಯ ತಿದ್ದುಪಡಿ ಮಾಡಿಸಬೇಕು. ರೂಲ್ ಬ್ಯಾಕ್ ಪ್ರಕ್ರಿಯೆಯೊಂದಿಗೆ ನೋಟಿಸ್ ಗಳು ಜಾರಿಯಾಗಲಿರುವುದರಿಂದ ಅವುಗಳನ್ನು ನಿಯಮಾನುಸಾರ ಕಡ್ಡಾಯವಾಗಿ ಅನುಸರಿಸಬೇಕು ಎಂದರು.
ನೋಟಿಸ್ ಜಾರಿ ಹಾಗೂ ಹಿಯರಿಂಗ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಹಿಯರಿಂಗ್ ನಡೆಯುವ ಸ್ಥಳ, ಸಮಯ, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಒಂದು ಗುಂಪಿಗೆ ನೀಡುವ ಸಮಯ, ಆಗಮನ-ನಿರ್ಗಮನ ವ್ಯವಸ್ಥೆ ಸೇರಿದಂತೆ ಎಲ್ಲ ಅಂಶಗಳಿಗೂ ಸಮರ್ಪಕ ಯೋಜನೆ ರೂಪಿಸಬೇಕು.
ಗಣತಿ ನಮೂನೆಗಳನ್ನು ಭರ್ತಿ ಮಾಡುವ ವೇಳೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ ತಾಳ್ಮೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಗಣತಿ ನಮೂನೆ ವಿತರಿಸುವ ಸಿಬ್ಬಂದಿ ಹಾಗೂ ಬಿಎಲ್ಒಗಳು ಗಣತಿ ಕಾರ್ಯ ಪೂರ್ಣಗೊಳ್ಳುವವರೆಗೆ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ. ಹೀಗಾಗಿ ಎಲ್ಲರೂ ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಿಯರಿಂಗ್ ಪ್ರಕ್ರಿಯೆಗೆ ಎಷ್ಟು ಜನರ ಗುಂಪು ಮಾಡಬೇಕು, ಯಾವ ಸಮಯದಲ್ಲಿ ನಡೆಸಬೇಕು ಹಾಗೂ ಸ್ಥಳ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪೂರ್ವಭಾವಿಯಾಗಿ ಸಿದ್ಧಪಡಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಸಹಾಯಕ ಚುನಾವಣಾ ಅಧಿಕಾರಿಗಳನ್ನು (ಎಇಆರ್ ಒ) ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದರು.
ಈ ಎಲ್ಲ ಸೂಚನೆಗಳನ್ನು ತಾಲೂಕಿನ ಎಲ್ಲಾ ಬಿಎಲ್ಒಗಳಿಗೆ ತಲುಪಿಸಿ, ಗಣತಿ ನಮೂನೆಗಳನ್ನು ನಿಯಮಾನುಸಾರ ಹಾಗೂ ದೋಷರಹಿತವಾಗಿ ಭರ್ತಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ದಾರರಿಗೆ ಸೂಚಿಸಿದರು.

