ಮತ್ತಿಗೋಡು ಕ್ಯಾಂಪ್ ನಲ್ಲಿ ಮರದ ದಿಮ್ಮಿ ಸಾಗಿಸುವಾಗ ನಡೆದ ಘಟನೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಮೂಲಕ ಜಗತ್ಪ್ರಸಿದ್ಧವಾಗಿರುವ ಅಭಿಮನ್ಯು ಆನೆಯ ಎಡಭಾಗದ ದಂತ ಮುರಿದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮತ್ತಿಗೋಡು ಕ್ಯಾಂಪ್ ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವಾಗ 59 ವರ್ಷದ ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ಭಾಗ ತುಂಡಾಗಿದೆ. ದುಬಾರೆ ಆನೆ ಕಾಳಗ ದುರಂತದ ಬಳಿಕ ಸಾಕಾನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಮತ್ತಿಗೋಡು ಕ್ಯಾಂಪ್ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಸಲಾಗುತ್ತಿತ್ತು. ಮರದ ದಿಮ್ಮಿ ಮೇಲೆತ್ತುವ ಸಂದರ್ಭದಲ್ಲಿ ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ಭಾಗ ಸ್ವಲ್ಪ ತುಂಡಾಗಿದೆ.
ಘಟನೆ ನಡೆದ ಕೂಡಲೇ ಅಭಿಮನ್ಯು ಆರೋಗ್ಯ ಪರಿಶೀಲನೆ ನಡೆಸಿದ ಪಶುವೈದ್ಯರು, ಯಾವುದೇ ಆತಂಕವಿಲ್ಲ. ಗಾಯ ಗಂಭೀರವಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. 2020ರಿಂದಲೂ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ ಅಭಿಮನ್ಯುವನ್ನು ಕಾಡಾನೆಗಳ ಕಾರ್ಯಾಚರಣೆಗಳಿಗೂ ಬಳಸಲಾಗುತ್ತಿತ್ತು. ಬಲಭಾಗಕ್ಕೆ ಬಾಗಿದಂತೆ ಕಾಣುತ್ತಿದ್ದ ದಂತದಿಂದಲೇ ಅಭಿಮನ್ಯು ದಾಳಿ ವೇಳೆ ಎದುರಾಳಿ ಆನೆಗಳನ್ನು ಹಿಮ್ಮೆಟ್ಟಿಸುತ್ತಿದ್ದ. ಅಲ್ಲದೆ ಕಾಡಾನೆಗಳಿಗೆ ಹೆಚ್ಚು ಹಾನಿ ಮಾಡುವ ಮೂಲಕ ಕಾರ್ಯಾಚರಣೆ ಸಫಲರಾಗುವಂತೆ ನೋಡಿಕೊಳ್ಳುತ್ತಿದ್ದ. ಇಲ್ಲಿಯವರೆಗೆ ಸುಮಾರು 150 ಕ್ಕೂ ಹೆಚ್ಚು ಕಾಡಾನೆಗಳನ್ನು ಸೆರೆಹಿಡಿದಿದ್ದಾನೆ. ಸುಮಾರು 50 ಕ್ಕೂ ಹೆಚ್ಚು ಹುಲಿಗಳನ್ನು ಸೆರೆಯಿಡಿಯುವುದರಲ್ಲಿ ಯಶ್ವಸಿಯಾಗಿದ್ದಾನೆ.
2020 ರಿಂದಲೂ ಅಂಬಾರಿ ಹೊರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತಿರುವ ಅಭಿಮನ್ಯು, 2026ನೇ ಸಾಲಿನ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತರೆ ಸತತ 7ನೇ ಬಾರಿ ಅಂಬಾರಿ ಹೊತ್ತಂತೆ ಆಗಲಿದೆ. ಈ ಹಿಂದೆ ದ್ರೋಣ 18 ಬಾರಿ, ಬಲರಾಮ 13 ಬಾರಿ, ಅರ್ಜುನ ಸತತ 8 ಬಾರಿ ಅಂಬಾರಿ ಹೊತ್ತು ಸಾಧನೆ ಮಾಡಿದ್ದು, ಇದೀಗ ಹೆಚ್ಚು ಬಾರಿ ಅಂಬಾರಿ ಹೊತ್ತ ಆನೆಗಳ ಸಾಲಿನಲ್ಲಿ ಅಭಿಮನ್ಯು ಹೆಸರು ಸೇರ್ಪಡೆಯಾಗಲಿದೆ.
ಅಭಿಮನ್ಯು ಇತಿಹಾಸ
1970 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿಅಭಿಮನ್ಯು ಆನೆ ಸೆರೆಹಿಡಿಯಲಾಗಿತ್ತು. ಈ ಹಿಂದೆ 2012 ರಿಂದ 2015 ರವರೆಗೆ ಅರಮನೆ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿಭಾಯಿಸುತ್ತಿದ್ದ ಅಭಿಮನ್ಯು, ನಂತರ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುತ್ತಿದ್ದ. ಕೂಂಬಿಂಗ್ ಸ್ಟಾರ್, ಕರ್ನಾಟಕದ ಎಕೆ-47 ಸೇರಿದಂತೆ ಹಲವು ಹೆಸರಿಂದ ಕರೆಯಲ್ಪಡುವ ಅಭಿಮನ್ಯು ಕರ್ನಾಟಕ ಮಾತ್ರವಲ್ಲದೇ, ದೇಶದಾದ್ಯಂತ ಅತ್ಯಂತ ಬಲಿಷ್ಠ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಅಭಿಮನ್ಯು ಆನೆಯನ್ನು ಮಾವುತ ಜೆ.ಎಸ್.ವಸಂತ್ ಮತ್ತು ಜೆ.ಕೆ.ರಾಜು ಪಾಲನೆ ಮಾಡುತ್ತಿದ್ದಾರೆ.

