ಬಿ.ಎಲ್.ಡಿ.ಇ ಸಂಸ್ಥೆ, ಅಕ್ಷಯಕಲ್ಪ ಮತ್ತು ಕೃಷಿಕಲ್ಪ ಸಹಯೋಗದ ಕ್ಷೀರ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿದ ಸಿದ್ಧಲಿಂಗ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಇಂದು ನಾವು ಅಭಿವೃದ್ಧಿ, ಶಿಕ್ಷಣ ಮತ್ತು ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವದು ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ ತ್ಯಾಗ ಮತ್ತು ಶ್ರಮದಿಂದ ಬಂದಿದ್ದಾಗಿದೆ. ಅಂತಹ ಹಳಕಟ್ಟಿಯವರನ್ನು ಸದಾ ಸ್ಮರಿಸುತ್ತಿರುವ ಬಿ.ಎಲ್.ಡಿ.ಇ ಕಾರ್ಯ ಅನುಪಮವಾದುದು ಎಂದು ನಿಡೋಣಿ ವಿರಕ್ತ ಮಠದ ಪ.ಪೂ ಸಿದ್ಧಲಿಂಗ ಶ್ರೀಗಳು ಹೇಳಿದರು.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ದಾಶ್ಯಾಳ ರಸ್ತೆಯ ವಿರಕ್ತ ಮಠಕ್ಕೆ ಸೇರಿದ 11 ಎಕರೆ ಜಮೀನಿನಲ್ಲಿ ವಚನಪಿತಾಮಹ ಡಾಫ.ಗು.ಹಳಕಟ್ಟಿ ಅವರ ಜನ್ಮದಿನದಂದು ಬಿ.ಎಲ್.ಡಿ.ಇ ಸಂಸ್ಥೆ, ಅಕ್ಷಯಕಲ್ಪ ಮತ್ತು ಕೃಷಿಕಲ್ಪ ಸಹಯೋಗದಲ್ಲಿ ಕೈಗೊಂಡಿರುವ ಕ್ಷೀರ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧಾರವಾಡದಿಂದ ಬಂದ ಹಳಕಟ್ಟಿ ಅವರು ವಿಜಯಪುರದಲ್ಲಿ ಅದ್ಬುತ ಕಾರ್ಯ ಮಾಡಿದ್ದಾರೆ. ಅವರ ನಂತರದ ತಲೆಮಾರುಗಳು ಕೂಡ ಅವರನ್ನು ಸ್ಮರಿಸುವ ಕಾರ್ಯಕ್ಕೆ ಮುಂದಾಗಿರುವುದು ನನಗೆ ಅತೀವ ಸಂತಸ ತಂದಿದೆ. ಇಂದು ಬಸವಾದಿ ಶರಣರ ವಚನ ಸಾಹಿತ್ಯ ನಮಗೆ ಸಿಗಲು ಹಳಕಟ್ಟಿಯವರ ಪಾತ್ರ ದೊಡ್ಡದು. ಅಂತಹ ಹಳಕಟ್ಟಿ ಅವರನ್ನು ಜನಮಾನಸದಲ್ಲಿ ಶಾಶ್ವತವಾಗಿರಿಸಿದವರು ಬಿ.ಎಲ್.ಡಿ.ಇ ಸಂಸ್ಥೆಯವರು ಎಂದರು.
ಹಸುಗಳಿಗೆ ಕೇವಲ ಮೇವು ಹಾಕಿದರೆ ಮಾತ್ರ ಚೆನ್ನಾಗಿ ಹಾಲು ನೀಡುತ್ತದೆ ಎಂಬ ಪರಿಕಲ್ಪನೆಯಲ್ಲಿ ರೈತರು ಇದ್ದರು. ಒಂದು ಬಾರಿ ಒಂದು ಲೀಟರ್ ಹಾಲು ನೀಡುವ ಹಸು ಏಕೆ ಎರಡು ಲೀಟರ್ ಹಾಲು ನೀಡಲು ಸಾಧ್ಯವಿಲ್ಲ? ಎಂಬ ಆಲೋಚನೆ ರೈತರಲ್ಲಿ ಇನ್ನುವರೆಗೂ ಬಂದಿರಲಿಲ್ಲ. ಇದನ್ನ ಪತ್ತೆ ಹಚ್ಚಿ ಮೊಟ್ಟಮೊದಲು ಹಸುವಿಗೆ ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ ಮಾಡುವುದು, ಆರೋಗ್ಯ, ಸ್ವಚ್ಛತೆ ಹಾಗೂ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕ ವ್ಯವಸ್ಥೆ ಕಲ್ಪಿಸುವುದರಿಂದ ಹಸು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಒದಗಿಸಲು ಸಾಧ್ಯ ಎಂದು ಸಾಬೀತು ಪಡಿಸಿದ್ದ, ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಇವರ ಸಹಕಾರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ಷೀರ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರೈತರ ಬಗ್ಗೆ ಕಾಳಜಿಯಿಂದ ಸರ್ಕಾರಿಂದ ರೈತರ ಜಮೀನುಗಳಿಗೆ ನೀರು ಒದಗಿಸಿ, ನಂತರ ಸಂಸ್ಥೆಯ ಮೂಲಕ ಹೈನುಗಾರಿಕೆಗೂ ಉತ್ತೇಜನ ನೀಡುತ್ತಿರುವ ಸಚಿವ ಎಂ.ಬಿ.ಪಾಟೀಲರಿಗೆ ಅಭಿನಂದಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ.ಪಾಟೀಲ ಮಾತನಾಡಿ, ಮಹಾನಗರಗಳಲ್ಲಿರುವ ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿರುವ ಸಾಲಿನಲ್ಲಿ ರೈತರು ಹೈನುಗಾರಿಕೆಯಿಂದ ಮೇಲೆ ಬರಬೇಕು ಎಂಬ ಉದ್ದೇಶದಿಂದ ಕ್ಷೀರ ಯೋಜನೆಯನ್ನು ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆ ಪ್ರಾರಂಭವಾದ ನಂತರ ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಈ ಮಾದರಿಯನ್ನು ಎಲ್ಲರೂ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ನಿಡೋಣಿಯಲ್ಲಿ ಪ್ರಾಯೋಗಿಕವಾಗಿ ತೋಟದಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಶುಭ ಸಂದರ್ಭಲ್ಲಿ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಅಕ್ಷಯಕಲ್ಪ ಫೌಂಡೇಶನ ಸಿ.ಎಂ.ಪಾಟೀಲ ಮಾತನಾಡಿ, ಯುವರೈತರಿಗೆ ಹಸುಗಳ ಆರೈಕೆಗೆ ಅಗತ್ಯ ತಿಳಿವಳಿಕೆ ಇಲ್ಲದೆ ಹೋದಾಗ ಅವರ ಆದಾಯದಲ್ಲಿ ಕುಂಠಿತವಾಗುತ್ತದೆ. ಅದಕ್ಕಾಗಿ ಮೊದಲು ಹಸುಗಳ ಕೊಟ್ಟಿಗೆ, ಆಹಾರ ಪದ್ಧತಿಗಳನ್ನು ಅನುಸರಿಸುವದ ಮೂಲಕ ಹೈನುಗಾರಿಕೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಈ ಮಾದರಿ ಕಾರ್ಯವನ್ನು ಆಯ್ದ ಗ್ರಾಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದರು.
ರೈತಮುಖಂಡ, ಕೆ.ಎಂ.ಎಫ್ ಮಾಜಿ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ಮಾತನಾಡಿ, ತಿಪಟೂರಿನಲ್ಲಿರುವ ಅಕ್ಷಯಕಲ್ಪ ಫಾರ್ಮ್ ಗೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಹೈನುಗಾರಿಕೆ ಪದ್ಧತಿ ಬಗ್ಗೆ ಅರಿತಾಗ ನಾವು ಮಾಡಿದ ತಪ್ಪುಗಳನ್ನು ನಾವು ಕಾಣುತ್ತೇವೆ. ಇವುಗಳನ್ನು ಸರಿ ಪಡಿಸಿಕೊಂಡರೆ ಮಾತ್ರ ನಮ್ಮ ರೈತರಿಗೂ ಹೆಚ್ಚಿನ ಆದಾಯ ಬರುತ್ತದೆ ಎಂದರು.
ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಅಕ್ಷಯಕಲ್ಪ, ಹೈನುಗಾರಿಕೆಗೆ ಪ್ರಸಿದ್ದಿಯಾಗಿದ್ದು, ತಿಪಟೂರಿನ ರೈತರು ಇದರ ಸದುಪಯೋಗ ಪಡೆಸಿಕೊಂಡು ಆರ್ಥಕವಾಗಿ ಸಬಲರಾಗಿದ್ದಾರೆ. ಇದರಂತೆ ಇಲ್ಲಿನ ರೈತರು ಸದೃಢರಾಗಬೇಕು ಎಂದು ಹೈನೋದ್ಯಮ ಪ್ರಾರಂಭಿಸಲು ಅಗತ್ಯ ನೆರವು ಪಡೆದು, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಹಭಾಗಿತ್ವದಲ್ಲಿ ತರಬೇತಿ ನೀಡಿ ನೀಡಿ, ರೈತರ ಆರ್ಥಿಕತೆಯನ್ನು ಹೆಚ್ಚಿಸುವ ಕ್ಷೀರ ಪೈಲೆಟ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಯೋಜನೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ಪ್ರತಿವರ್ಷ ರೂ.50ಲಕ್ಷ ವೆಚ್ಚವನ್ನು ನೀಡುತ್ತಿದೆ.
ಈ ಸಂದರ್ಭದಲ್ಲಿ ಪೈಲಟ್ ಯೋಜನೆ ಸಿಬ್ಬಂದಿಗಳಾದ ಈರಣ್ಣ ರೊಟ್ಟಿ, ಸಂತೋಷ ಬಿರಾದಾರ, ರಾಜಕುಮಾರ ಕುಮಠೆ, ಶಾನು ಸಾರವಾಡಾ, ಜಬ್ಬಾರ ಇನಾಮದಾರ, ಪ್ರಭುಲಿಂಗ ಬಿರಾದಾರ, ಶಿವಪುತ್ರ ಕೊಲಕಾರ, ಶರಣು ರೆಬಿನಾಳ ಅವರನ್ನು ಸನ್ಮಾನಿಸಿದರು.
ಗ್ರಾಮಸ್ಥರಾದ ಮಲ್ಲಿಕಾರ್ಜುನ ಬಾಗಿ, ಶಶಿಧರ ಕೋಟ್ಯಾಳ, ಬಸನಗೌಡ ಬಿರಾದಾರ, ಸೋಮಶೇಖರ ಕೋಟ್ಯಾಳ, ಸಾಹೇಬಗೌಡ ಪಾಟೀಲ, ದಾನಮ್ಮ ಜಿರ್ಲಿ, ಮಹಾದೇವ ಬೆನಕಟ್ಟಿ, ಜಾಪರ ಇನಾಮದಾರ ಸೇರಿದಂತೆ ಉಪಸ್ಥಿತರಿದ್ದರು.
ತಿಕೋಟಾ ನ್ಯೂ ಆರ್ಟ್ಸ್ ಕಾಲೇಜಿನ ಹಾಗೂ ಬಬಲೇಶ್ವರ ಶ್ರೀ ಶಾಂತವೀರ ಆರ್ಟ್ಸ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಫರ್ಮ್ ನಲ್ಲಿ ಸಸಿಗಳನ್ನು ನೆಟ್ಟರು.

“ವಚನ ಪಿತಾಮಹ ಫ.ಗು.ಹಳಕಟ್ಟಿಯವರು ವಿಜಯಪುರ ಮೂಲದವರಲ್ಲದಿದ್ದರೂ, ವಿಜಯಪುರದ ಅಭಿವೃದ್ಧಿಗೆ ಹಲವಾರು ಕಾರ್ಯಗಳನ್ನು 100 ವರ್ಷಗಳ ಹಿಂದೆಯೆ ಮಾಡಿದ್ದಾರೆ. ಅವರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯವನ್ನು ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಸಚಿವ ಎಂ.ಬಿ.ಪಾಟೀಲರು ಮಾಡುತ್ತಿದ್ದಾರೆ.”
– ಡಾ.ಮಹಾಂತೇಶ ಬಿರಾದಾರ
ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ

