ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ಎಲ್ಲಾ ಕೆಲಸಗಳಿಗೂ, ಎಲ್ಲಾ ಸಂದರ್ಭಕ್ಕು ಅನ್ವಯಿಸಿಕೊಳ್ಳಲಾಗುವುದಿಲ್. ಕೆಲವೊಮ್ಮೆ ‘ಹಣೆಬರಹಕ್ಕೆ ಹೊಣೆ ಯಾರು’ ಎಂದೂ ಸಹ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳಬೇಕಾಗುತ್ತದೆ.
ಎಂಬುದನ್ನು ಈ ಕಥೆಗಳು ಹೇಳಹೊರಟಿವೆ.
ಅವರು ಮೂವರು ಮಕ್ಕಳು. ಮೂವರೂ ಸಹ ಒಳ್ಳೆಯ ನೌಕರಿ ಹಿಡಿದವರೆ. ಆದರೆ ಹಿರಿಯವ ತುಸು ಗಿಡ್ಡ. ಆದ್ದರಿಂದಲೇ ಇರಬೇಕು ಅವನನ್ನು ವರಿಸಲು ಯಾವ ಮಧುಮಗಳು ಒಪ್ಪಲೇ ಇಲ್ಲ. ಅಗ್ರಜ ಮದುವೆ ಆಗುವವರೆಗೆ ಉಳಿದಿಬ್ಬರು ಆಗುವಂತಿಲ್ಲವಲ್ಲ.
‘ಮದುವೆ ಆಗುವವರೆಗೆ ಹುಚ್ಚು ಬಿಡೋಲ್ಲ. ಹುಚ್ಚು ಬಿಡುವವರೆಗೆ ಮದುವೆ ಆಗೋಲ್ಲ’ ಎಂಬಂತೆ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದೇ ಮಾಡಿದ್ದು. ಎಲ್ಲಿಯವರೆಗೆ ನೋಡುವುದು. ಏನು ಪ್ರಯೋಜನ. ಅದಕ್ಕೂ ಒಂದು ವಯಸ್ಸು ಉಂಟಲ್ಲ. ವಯಸಿದ್ದಾಗಲೇ ಯಾರು ವರಿಸಲಿಲ್ಲ. ಇನ್ನು ಇವಾಗ 40-45 ದಾಟಿದ ಮೇಲೆ ಯಾರು ಮೆಚ್ಚಿಯಾರು? 50ರ ಗಡಿ ದಾಟುತ್ತಿರುವವ ಹೋಗಿ ಹೇಗೆ ಹೆಣ್ಣು ಕೇಳುವುದು?
ಅಲ್ಲಿಗೆ ಮದುವೆ ಆಸೆ ಬಿಟ್ಟಂತಯೇ.

ಇದು ಅಣ್ಣನ ಕರ್ಮ ಅಥವಾ ಶಾಪ ಅಥವಾ ದುರಾದೃಷ್ಟ ಎಂದುಕೊಳ್ಳಬೇಕಾ? ಇಲ್ಲ ಇಲ್ಲ. ಅವನೊಬ್ಬನದಲ್ಲ. ಉಳಿದಿಬ್ಬರದು ಕೂಡಾ.
ಅವನಿಗೇನೇ ವಿವಾಹಬಂಧ ಕೂಡಿಬರಲಿಲ್ಲ ಎಂದಾಗ, ಉಳಿದಿಬ್ಬರು ‘ನನಗೆ ಮದುವೆ ಮಾಡಿಸಿ’ ಎಂದು ಲಜ್ಜೆಬಿಟ್ಟು ಹೇಗೆ ಕೇಳುವುದು.. ಅಲ್ಲಿಗೆ ಕಥೆ ಮುಗಿದಂತೆಯೆ.
ಒಬ್ಬ ಮಡದಿ ಸಾಲುವುದಿಲ್ಲವೆಂದು ಮತ್ತೊಬ್ಬ ಪ್ರೇಯಸಿಯನ್ನೂ ಇಟ್ಟುಕೊಳ್ಳುವ ಕೆಲ ರಸಿಕರು ಇರುವ ಈ ದಿನಗಳಲ್ಲಿ, ಎಲ್ಲಾ ಆಸೆಗಳನ್ನು ಕೊಂದುಕೊಂಡು ಬದುಕುವ ನತದೃಷ್ಟ ಬದುಕು ಈ ಮೂವರದು. ಆದರು ಬದುಕಲೇಬೇಕು.
ಅಪ್ಪ ಹೋಗಿ ಯಾವುದೋ ಕಾಲವಾಯಿತು. ಇವರದೇ ಕೊರಗಿನಲ್ಲಿ ಅಮ್ಮ ಹಾಸಿಗೆ ಹಿಡಿದಳು. ಅವಳನ್ನು ನೋಡಿಕೊಳ್ಳಲೂ ಸಹ ಒಂದು ಹೆಣ್ಣಿನ ದಿಕ್ಕಿಲ್ಲ. ಜೀವನಕ್ಕೆ ಬೇಕಾದ ಸಂಪಾದನೆ ಮಾಡಿಕೊಂಡು, ಮನೆಕೆಲಸವನ್ನು ಮಾಡಿಕೊಂಡು, ಅನಾರೋಗ್ಯದಿಂದ ನರಳುವ ಅಮ್ಮನನ್ನು ನೋಡಿಕೊಳ್ಳುವ ಟಾಸ್ಕು ಆ ಮೂವರದು.
ಇದು ಅವರೊಬ್ಬರ ಕಥೆ ಅಲ್ಲ. ಎಷ್ಟೋ ಜನರ ವ್ಯಥೆಯ ಕಥೆ.
ಅಲ್ಲಿ ಐವರು ಹೆಣ್ಣುಮಕ್ಕಳು. ಎಲ್ಲರೂ ಹೆಚ್ಚು ಕಡಿಮೆ ಸುಂದರಿಯರೆ. ಮೊದಲನೆಯವಳು ತನ್ನ ಸೌಂದರ್ಯಕ್ಕೆ, ಓದಿಗೆ, ಶ್ರೀಮಂತಿಕೆಗೆ ತಕ್ಕನಾದವನಲ್ಲ’ ಎಂದು ಬಂದವರನ್ನೆಲ್ಲ ನಿರಾಕರಿಸುತ್ತಾ ಬಂದಳು. ನಂತರ ಬಂದವರೆಲ್ಲ ಅವಳನ್ನು ನಿರಾಕರಿಸುತ್ತಾ ಹೋದರು. ಮುಂದಿನ ದಿನಗಳಲ್ಲಿ ‘ಅನ್ನ ಹಳಸಿತ್ತು, ನಾಯಿ ಹಸ್ತಿತ್ತು’ ಎನ್ನುವಂತೆ. ಯಾರೊ ಒಬ್ಬ ನಾಲಾಯಕ್ ಹುಡುಗನಿಗು ಅವಳಿಗೂ ಮದುವೆ. ಆಕೆಯಿಂದ ಉಳಿದವರಿಗೆಲ್ಲ ತಡವಾಯಿತು. ಅವರಿಗೂ ಅವನೋ ಇವನೊ ಯಾರೊ ಒಬ್ಬೊಬ್ಬ ಸಿಕ್ಕಿದ. ಯಾರ ಸಂಸಾರವು ನೆಟ್ಟಗಾಗಲಿಲ್ಲ ಬಿಡಿ.
ಮತ್ತೊಂದು ಕುಟುಂಬ. ಅಲ್ಲಿ ತಂಗಿಯ ಮದುವೆ ಆಗುವವರೆಗೆ ಅಣ್ಣಂದಿರು ವಿವಾಹವಾಗುವಂತಿಲ್ಲ. ಅವಳದು ಎಲ್ಲಾ ಮುಗಿಯುವವರೆಗೆ, ಅಣ್ಣಂದಿರಿಗೆ ವಯಸ್ಸಾಗಿರುತ್ತೆ. ಅವಾಗ ಹೆಣ್ಣು ಹುಡುಕಲು ಹೋದರೆ ಸಿಕ್ಕೀತೆ? ಮತ್ತದೇ ಹುಡುಕಾಟ.ಸ, ತೊಳಲಾಟ
ಹೀಗೆ ಒಬ್ಬರ ಕರ್ಮ ಮತ್ತೊಬ್ಬರನ್ನು ಸಹ ಸುತ್ತಿಬಿಟ್ಟಿತ್ತೇನೊ
‘ನಿಷ್ಕ್ರಿಯ ಧೂಮಪಾನಿಗಳು’ ಹತ್ತಿರದಲ್ಲಿರುವ ಬೇರೆಯವರು ಧೂಮಪಾನ ಮಾಡುವ ಹೊಗೆ ಇತರರ ಮುಗಿಗೂ ರಾಚಿ ಅವರೂ ಸಹ ಆ ಹೊಗೆಯನ್ನು ಸೇವಿಸುವಂತಾಗುವಂತೆ, ದೊಡ್ಡವರ ಕರ್ಮಕ್ಕೆ ಒಡಹುಟ್ಟಿದವರು ಪಾಲುದಾರರಾಗುತ್ತಾರೊ ಅಥವಾ ಅವರೆಲ್ಲರ ಹಣೆಬರಹವೆ ಅಷ್ಟೊ ಗೊತ್ತಿಲ್ಲ .
ಅ ಹುಡುಗಿ ಓದಿರೋದು ಬಿ.ಕಾಂ. ಆದರೆ ಅವಳಿಗೆ ಡಾಕ್ಟರ್ ಹುಡುಗಾನೇ ಬೇಕು.
ಅವಳು ಓದಿರೋದು ಪಿಯುಸಿ. ಆದರೆ ಅವಳ ಪೋಷಕರು ಅವಳಿಗೆ ನೋಡುತ್ತಿರುವ ಹುಡುಗ, ಸರ್ಕಾರಿ ನೌಕರಿಯಲ್ಲೇ ಇರಬೇಕು.
ಇವಳು ಒಬ್ಬಳೇ ಮಗಳು. ಹಾಗಾಗಿ ಒಬ್ಬನೇ ಮಗ ಇರಬೇಕು. ಅವನೂ ಸಹ ಸಿಟಿಯಲ್ಲೇ ಇರಬೇಕು. ಆದರೆ ಊರಿನಲ್ಲಿ ಆಸ್ತಿ ಇರಲೇಬೇಕು. ಹುಡುಗನಿಗೆ ಪೋಷಕರಿದ್ದರೆ ಅವರು ಊರಿನಲ್ಲಿ ಆರಾಮವಾಗಿ ಆಸ್ತಿ ನೋಡಿಕೊಂಡು, ಬೆಳೆ ಬೆಳೆದುಕೊಂಡಿರಬಹುದು.
ಆಸೆಗಳು ಒಂದಾ.. ಎರಡಾ.. ಇದರ ಮಧ್ಯೆ ಪಾಪ ನಮ್ ಹುಡುಗರ ಪಾಡು ‘ಯಾರೋ ಯಾರೋ ಗೀಚಿಹೋದ ಹಾಳು.. ಹಣೆಯಾ ಬರಹ’ ಎಂಬಂತಾಗಿಬಿಟ್ಟಿದೆ.


