ಡಾ.ರಾಜ್ ಜನ್ಮ ದಿನಾಚರಣೆ ಅರ್ಥಪೂರ್ಣಗೊಳಿಸಲು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶೇಷ ನಟನೆ ಮೂಲಕ ಕನ್ನಡಿಗರ ಮನೆ-ಮಾತಾದ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶಿಷ್ಟವಾಗಿ ಆಚರಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮಕ್ಕೆ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡಾ.ರಾಜ್ಕುಮಾರ್ ಜನ್ಮ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇರುನಟ ಡಾ.ರಾಜ್ಕುಮಾರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಏ.೨೪ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಕಂದಗಲ್ ಶ್ರೀ ಹನುತರಾಯ ರಂಗಮಂದಿರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಡಾ.ಔದ್ರಾಮ ಅವರು ತಿಳಿಸಿದರು.
ಡಾ. ರಾಜ್ ಕುಮಾರ ಅವರು, ಕನ್ನಡದ ಮೇರು ನಟ, ನಟಸಾರ್ವಭೌಮರಾಗಿ ಈ ನಾಡು ಕಂಡ ನೆಚ್ಚಿನ ನಟರಾಗಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗಿಯಾಗಿ ನಾಡು-ನುಡಿಗಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಇವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸಲಹೆ ನೀಡಿದಂತೆ ಈ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡಲು ಆಸಕ್ತ ಕಲಾವಿದರು ಮತ್ತು ಎಲ್ಲ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು. ವಯಸ್ಸಿನ ಮಿತಿ ವಿಧಿಸದೇ,ಕಾರ್ಯಕ್ರಮದ ನಿಗದಿತ ಸಮಯ ಮೀರದಂತೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರಿಗೂ ಅವಕಾಶ ನೀಡಬೇಕು ಎಂದರು.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಸಹಾಯಕ ತೋಟಗಾರಿಕಾ ನಿರ್ದೇಶಕ ಭಗವಂತ ಜಿಗಜಿಣಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಎಂ.ಸಿ ಮುಲ್ಲಾ, ಅಡಿವೆಪ್ಪ ಸಾಲಗಲ್, ಸುರೇಶ ಬಿಜಾಪುರ, ಫಯಾಜ್ ಕಲಾದಗಿ, ಶರಣು ಸಬರದ, ಮಂಜುಳಾ ಅಂಗಡಿ, ಸುರೇಶ್ ಬಬಲೇಶ್ವರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಡಾ.ರಾಜ್ ಅಭಿನಯದ ಸಿನಿಮಾ ಗೀತೆಗಳ ಗಾಯನಕ್ಕೆ ಅವಕಾಶ
ವಿಜಯಪುರ: ವರನಟ ಡಾ.ರಾಜಕುಮಾರ್ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ್ ಅವರ ಚಲನಚಿತ್ರ ಗೀತೆಗಳ ಪ್ರಸ್ತುತಪಡಿಸಲು ಆಸಕ್ತ ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ವಯಸ್ಸಿನ ಮಿತಿ ಇರುವುದಿಲ್ಲ. ಪ್ರಸ್ತುತಿಯ ಸಮಯದ ಮಿತಿ ಇದೆ. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶವಿದ್ದು, ಆಯೋಜಕರ ನಿರ್ಣಯವೇ ಅಂತಿಮವಾಗಿದ್ದು, ತಮ್ಮ ಹೆಸರು ಮತ್ತು ಪೂರ್ಣ ವಿಳಾಸದೊಂದಿಗೆ ಇದೇ ಏಪ್ರೀಲ್ ೨೨ರೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಕಡ್ಡಾಯವಾಗಿದೆ.
ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವ ಹಾಡುಗಾರರು, ಕಲಾವಿದರು, ಸಾರ್ವಜನಿಕರು ಸ್ವಂತ ಖರ್ಚಿನಲ್ಲೇ ಕಾರ್ಯಕ್ರಮಕ್ಕೆ ಬರತಕ್ಕದ್ದು. ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ಮಾತ್ರ ಗೌರವವಾಗಿ ವಿತರಿಸಲಾಗುವುದು. ಆಸಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯನ್ನು ಅಥವಾ ಮೊಬೈಲ್ ಸಂಖ್ಯೆ ೯೦೪೯೪೯೯೭೮೩ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

