41 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ | ನದಿಯಲ್ಲಿ ಈಜಿನ ಮೊರೆಹೋದ ಯುವಕರು | ಕಾದು ಕೆಂಡದಂತಾಗುವ ಭೂಮಿ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಿದೆ. ಅಧಿಕ ತಾಪಮಾನದಿಂದ ಭೂಮಿ ಕಾದು ಕೆಂಡದಂತಾಗಿದೆ. ಇದರಿಂದ ಸಾರ್ವಜನಿಕರು, ರೈತರು ತತ್ತರಿಸಿ ಹೋಗಿದ್ದಾರೆ. ಬಿಸಿಲಾಘಾತ ತಡೆದುಳ್ಳಲು ಗ್ರಾಮೀಣ ಪ್ರದೇಶದ ಯುವಕರು ತಮ್ಮೂರಿನ ನದಿಯಲ್ಲಿ ಈಜಿನ ಮೊರೆ ಹೋಗಿದ್ದಾರೆ.
ಮಳೆಗಾಲದಲ್ಲಿ ಮಳೆ ಸುರಿದು ಭೂತಾಯಿ ಒಡಲು ತಂಪಾಗಿರುತ್ತೆ. ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಆದರೆ ಬಿರು ಬೇಸಿಗೆಯಲ್ಲಿ ವರುಣನ ದರ್ಶನವಿಲ್ಲದ ಕಾರಣ ಉರಿವ ಸೂರ್ಯನ ತಾಪ ತಡೆದುಕೊಳ್ಳುವುದು ಕಷ್ಟವಾಗಿದೆ. ಎಲ್ಲೇ ಕುಂತರು-ನಿಂತರೂ ಮನಸ್ಸಿಗೆ ನೆಮ್ಮದಿ ಇಲ್ಲದಾಗಿದೆ. ತಂಪಾದ ನೆರಳಿಗಾಗಿ ಹಂಬಲಿಸುವಂತಾಗಿದೆ.
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರದ ಕೃಷ್ಣಾ ನದಿ ಪಾತ್ರದ, ತಾಪಮಾನ ಏರಿಕೆಯಿಂದ ನಲುಗಿರುವ ಜನ ಈಜಿನ ಮೊರೆ ಹೋಗಿದ್ದಾರೆ. ಈ ನದಿಯಲ್ಲಿ ನಿತ್ಯ ಬೇರೆ ಬೇರೆ ಗ್ರಾಮಗಳ ನೂರಾರು ಯುವಕರು ಈಜಲು ಬರುತ್ತಾರೆ. ಆಲಗೂರ, ಹಿರೇಪಡಸಲಗಿ, ನಾಗನೂರ, ಕವಟಗಿ, ಜನವಾಡ, ಬಿದರಿ ಸೇರಿ ಸುತ್ತಲಿನ ಗ್ರಾಮಗಳ ಯುವಕರು ಇಲ್ಲಿ ಈಜಾಡುತ್ತಾರೆ. ರೈತರು ತಮ್ಮ ತೋಟದಲ್ಲಿರುವ ನೀರಿನ, ಹೊಂಡಗಳಲ್ಲಿ ಈಜಿ ಬಿಸಿಲಿನ ತಾಪ ತಡೆದುಕೊಳ್ಳುತ್ತಿದ್ದಾರೆ.

ತಂಪು ಪಾನೀಯಕ್ಕೆ ಬೇಡಿಕೆ
ಬಿಸಿಲಿನ ತಾಪಮಾನ 40 ರಿಂದ 41ಕ್ಕೆ ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೊಟ್ಟೆ ತಂಪಾಗಿಸಿಕೊಳ್ಳಲು ಜನತೆ ತಂಪು ಪಾನೀಯ ಮೊರೆ ಹೋಗಿದ್ದಾರೆ. ಹೀಗಾಗಿ ಹಣ್ಣು ಹಂಪಲು, ಜ್ಯೂಸ್, ಎಳನೀರಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಎಳನೀರು ಒಂದಕ್ಕೆ 45 ರೂ. ಇದೆ. ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.
ಆರೋಗ್ಯ ಕಾಳಜಿ ವಹಿಸಲಿ
“ಅಧಿಕ ಉಷ್ಣಾಂಶದಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿವೆ. ತಲೆನೋವು, ಹೊಟ್ಟೆ ನೋವು, ಜ್ವರ, ಸುಸ್ತು ಹೆಚ್ಚುತ್ತಿದೆ. ಆರೋಗ್ಯದಿಂದ ಇರಲು ಉತ್ತಮ ಆಹಾರ, ಹೆಚ್ಚು ನೀರು ಕುಡಿಯುವುದು, ವಿಶ್ರಾಂತಿ, ಎಳನೀರು ಜತೆಗೆ ಹಣ್ಣು ಹಂಪಲು ಸೇವನೆ ಒಳ್ಳೆಯದು. ಮಕ್ಕಳನ್ನು ಪಾಲಕರು ಬಿಸಿಲಿಗೆ ಬಿಡದಂತೆ ಕಾಳಜಿ ವಹಿಸಬೇಕು. ಆರೋಗ್ಯದಲ್ಲಿ ಏನಾದರೂ ತೊಂದರೆ ಕಂಡು ಬಂದರೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು.”
– ಮುಕುಂದ ಕಾಂಬಳೆ
ಮುಖ್ಯ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕಲಕಿ ಕ್ರಾಸ್.
“ತಾಪಮಾನ ಏರಿಕೆಯಿಂದ ಯುವಕರು ತತ್ತರಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ನದಿˌ ಕೆರೆ, ಹೊಂಡಗಳಲ್ಲಿ ಈಜಲು ಮುಂದಾಗಿದ್ದಾರೆ. ನಮ್ಮ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರದ ನದಿ ಪ್ರಾತ್ರದಲ್ಲಿ ಇನ್ನಷ್ಟು ಇನ್ನೆರಡು ವಾರಗಳ ಮಟ್ಟಿಗೆ ಆಗುವಷ್ಟು ನೀರಿದ್ದು, ಅದರಲ್ಲಿ ಈಜಾಡಲು ಅನುಕೂಲವಾಗಿದೆ.”
– ಸುರೇಶ ಸಂತಿ
ಶಿಕ್ಷಕರು, ಶಿವಶರಣ ಹರಳಯ್ಯ ಸ್ಮಾರಕ ಪ್ರಾಥಮಿಕ ಶಾಲೆ
ಚಿಕ್ಕಪಡಸಲಗಿ.

