ಲೇಖನ
ಮಲ್ಲಪ್ಪ. ಸಿದ್ರಾಮ ಖೊದ್ನಾಪೂರ
(ತಿಕೋಟಾ)
ವಿಜಯಪುರ
ಮಹಾಮಾನವತಾವಾದಿ ಬಸವಣ್ಣನವರು ೧೨ ನೇಯ ಶತಮಾನದ ಮಹಾನ್ ಕ್ರಾಂತಿಕಾರಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿದ್ದರು. ಅವರು ತನ್ನ ವಚನಗಳ ಮೂಲಕ ಸಮಾಜದಲ್ಲಿನ ಜಾತಿ, ಲಿಂಗ ತಾರತಮ್ಯ ಮತ್ತು ಮೌಢ್ಯತೆಗಳನ್ನು ಕಠೋರವಾಗಿ ವಿರೋಧಿಸುತ್ತಾ, ಸಮಾನತೆ ಮತ್ತು ಕಾಯಕ ನಿಷ್ಠೆಯನ್ನು ಬೋಧಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಧರ್ಮದ ಮೂಲ ಎಂಬ ಸಂದೇಶ ಸಾರುತ್ತಾ, ಸಾಮಾಜಿಕ ಜಾಗೃತಿ ಮೂಡಿಸುತ್ತಾ, ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದವರು. ಸುಮಾರು ೯೦೦ ವರ್ಷಗಳ ಹಿಂದೆಯೇ ಸಾಮಾಜಿಕ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ, ಸಮ ಸಮಾಜದ ನಿರ್ಮಾಣ, ಆರ್ಥಿಕತೆ, ಶಿಕ್ಷಣ ಮತ್ತು ಜ್ಞಾನ-ವಿಜ್ಞಾನದ ಪರಿಕಲ್ಪನೆಯಲ್ಲಿಯೇ ಅನುಭವ ಮಂಟಪವನ್ನೇ ಸ್ಥಾಪಿಸಿದ್ದರು.
ಸಮಾನತೆಯ ಹರಿಕಾರರಾಗಿ ಬಸವಣ್ಣ

ಅನುಭವ ಮಂಟಪ ಸ್ಥಾಪಿಸಿ, ಅಲ್ಲಮ ಪ್ರಭುಗಳು, ಮಡಿವಾಳ ಮಾಚಯ್ಯ, ನೂಲಿಯ ಚಂದಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಮೋಳಿಗೆ ಮಾರಯ್ಯ, ಅಂಬಿಗೇರ ಚೌಡಯ್ಯ, ಅಕ್ಕ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಅವರಂತಹ ಎಲ್ಲ ಬಸವಾದಿ ಶರಣರೆಲ್ಲರೂ ಒಂದೆಡೆ ಸೇರಿಸಿ ಜಾತಿ, ಮತ, ಲಿಂಗಗಳ ಭೇದವನ್ನು ಅಳಿಸುತ್ತಾ ವೈಚಾರಿಕ ಚರ್ಚೆಗೆ ವೇದಿಕೆ ಕಲ್ಪಿಸಿದವರು. ‘ದಯವೇ ಧರ್ಮದ ಮೂಲ’ ಎಂಬ ವಚನದಿಂದ ಮಾನವ ಪ್ರೇಮ, ಪ್ರೀತಿಯ ಸ್ಪರ್ಶ ನೀಡಿದ ಬಸವಣ್ಣನವರು ದಯೆ ಕೇವಲ ಮಾನವ ಕುಲಕ್ಕೆ ಮಾತ್ರ ಸಿಮೀತವಾಗದೇ ಸಕಲ ಚರಾಚರ ಪ್ರಾಣಿ-ಪಕ್ಷಿ ಸಂಕುಲಕ್ಕೂ ಅಗತ್ಯವೆಂದು ತಿಳಿಸಿಕೊಟ್ಟರು. ‘ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ, ಇವ ನಮ್ಮ ಮನೆಯ ಮಗನೆಂದೆನಿಸಯ್ಯ’ ಎಂಬ ವಚನದಲ್ಲಿ ಸಾರುತ್ತಾ ಸಮಷ್ಠಿ ಭಾವದ ಮೂಲಕ ವಿಶ್ವಭಾತೃತ್ವದ ಸಮಾಜದ ಕನಸು ಕಂಡವರು ಬಸವಣ್ಣನವರು.
ಮೌಢ್ಯತೆಗಳ ಬಗ್ಗೆ ಜಾಗೃತಿ: ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ// ಎಂಬ ವಚನದ ಮೂಲಕ ಮೌಢ್ಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ಡಾಂಭಿಕ ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಹಸಿದು ಬಂದವರಿಗೆ ಅನ್ನದಾನ ಮಾಡಬೇಕು ಹೇಳುತ್ತಾ ಮೌಢ್ಯತೆಯನ್ನು ಅಳಿಸಲು ಶ್ರಮಿಸಿದವರು. ಜನರಿಗೆ ನಡೆ-ನುಡಿ, ಸತ್ಯ, ಸಚ್ಚಾರಿತ್ರ್ಯ, ಸನ್ನಡತೆ, ಸದ್ಭಾವ, ಸದಾಚಾರಗಳ ಬಗ್ಗೆ ಅರಿವು ಮೂಡಿಸಿ ಜೀವನದ ಸಾರ್ಥಕತೆ ಮತ್ತು ಸನ್ಮಾರ್ಗದ ದಾರಿ ತೋರಿಸಿದವರು. ‘ಅರಿವೇ ಗುರು’ ಮತ್ತು ತನ್ನರಿವೇ ತನಗೆ ಗುರುವಾಗಬೇಕು ಎಂಬುದನ್ನು ಅರಿತು ನಮ್ಮಲ್ಲಿ ಸ್ವ-ಅರಿವಿನ ಶಕ್ತಿ ಬೆಳೆಸಿಕೊಳ್ಳಬೇಕೆಂಬ ಮೌಲ್ವಿಕ ಸಂದೇಶ ನೀಡಿದರು. ಅವರ ಎಲ್ಲ ವಚನಗಳು, ತತ್ವ-ಸಿದ್ದಾಂತ, ವಿಚಾರಧಾರೆಗಳನ್ನು ನಾವು ಪ್ರಸ್ತುತ ಸಮಾಜಕ್ಕೆ ತಿಳಿಸಿಕೊಡುವ ಅಗತ್ಯತೆಯಿದೆ. ಅವರ ದೃಷ್ಟಿಕೋನದಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವದಕ್ಕಿಂತ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಅಂದಾಗ ಮಾತ್ರ ಇಡೀ ಸಮಾಜವು ಸುಧಾರಣೆಯಾಗುವುದು ಎಂದು ಹೇಳಿದ್ದಾರೆ.
ನಡೆ-ನುಡಿ ಒಂದಾಗಿರಬೇಕೆಂಬ ಸಂದೇಶ ಸಾರಿದವರು: ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿ, ಸ್ಪಟಿಕದಂತೆ ಶುದ್ಧವಾಗಿರಬೇಕು, ನಾವು ಮಾತನಾಡುವ ಮಾತು ಮತ್ತು ನಮ್ಮ ನಡೆ ಅಥವಾ ನಡುವಳಿಕೆ ಒಂದೇ ಆಗಿರಬೇಕು. ನುಡಿದಂತೆ ನಡೆಯದಿದ್ದರೆ ಆ ಪರಶಿವ ಎಂದೂ ನಮ್ಮ ಮೆಚ್ಚಲಾರನು ಎಂದು ವಚನದಲ್ಲಿ ಬಹಳ ಮಾರ್ಮಿಕವಾಗಿ ವರ್ಣಿಸಿದ್ದಾರೆ. ಅಂತರಂಗ-ಬಹಿರಂಗದಲ್ಲಿ ಮನವು ಪರಿಶುದ್ಧವಾಗಿರಬೇಕು. ಕೇವಲ ಭಾಷಣ ಮಾಡಿದರೆ ಸಾಲದು. ಅದು ಆಚರಣೆ ಆಗಬೇಕು ಎಂದು ಸಾರಿದರು. ‘ಕೂಡಲಸಂಗಮದೇವ’ ಎನ್ನುವ ಅಂಕಿತನಾಮದೊಂದಿಗೆ ಸುಮಾರು ೧೫೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ, ಸಮಾನತೆ, ಕಾಯಕ, ದಾಸೋಹ ಮತ್ತು ಭಕ್ತಿಮಾರ್ಗವನ್ನು ಬೋಧಿಸಿದವರು ಬಸವಣ್ಣನವರು.
ಕೊನೆಯ ನುಡಿ
ಬಸವಣ್ಣನವರು ಸಮಾನತೆಯ ಸಮಾಜದ ಕನಸು ಕಂಡು, ಮನುಷ್ಯರೆಲ್ಲರೂ ಒಂದೇ ಎಂದು ಸಂದೇಶ ಸಾರಿದ ಮಹಾಪುರುಷರು. ಬಸವಣ್ಣನವರ ವಚನಗಳು, ವಿಚಾರಧಾರೆ, ತತ್ವ-ಸಿದ್ದಾಂತ ಮತ್ತು ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಯುವ ಪೀಳಿಗೆಗೆ ಆರ್ಥೈಸುವ ಕಾರ್ಯ ನಡೆಯಬೇಕಾಗಿದೆ. ಪ್ರತಿವರ್ಷವೂ ಶಾಲೆ-ಕಾಲೇಜುಗಳಲ್ಲಿ ಬಸವಣ್ಣನವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾ, ವಿಶೇಷ ಉಪನ್ಯಾಸ, ಕಾರ್ಯಕ್ರಮ ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಿ ವಿಶ್ವಗುರು ಬಸವಣ್ಣನವರ ವಚನಗಳ ಸಂದೇಶದ ಸಾರವನ್ನು ಜನರಿಗೆ ತಿಳಿಸಕೊಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಜಾತ್ಯಾತೀತ ಸಮಾಜದ ಕಲ್ಪನೆ, ಸ್ತ್ರೀ ಸಮಾನತೆಯ ಪ್ರತಿಪಾದನೆ, ಕಾಯಕ ದಾಸೋಹ, ಭಕ್ತಿಯೇ ಪ್ರಧಾನ ಎಂಬ ಶ್ರೇಷ್ಠ ಚಿಂತನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಭ್ರಾತೃತ್ವದ ಸಮಷ್ಠಿಭಾವದೊಂದಿಗೆ ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ ನಾವೆಲ್ಲರೂ ಬದುಕೋಣ ಎನ್ನುವದು ನನ್ನ ಅಂಬೋಣ.


