ಉದಯರಶ್ಮಿ ದಿನಪತ್ರಿಕೆ
ಅಥಣಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮಕ್ಕಳು ತಾವು ಶಿಕ್ಷಣದಲ್ಲಿ ಬೆಳೆಯುವಂತೆ ತಾವು ನೆಟ್ಟ ಸಸಿಗಳನ್ನೂ ಪೋಷಿಸಿ ದೊಡ್ಡ ಮರಗಳನ್ನಾಗಿ ಬೆಳೆಸಬೇಕು. ಒಂದು ಮರ ನೂರು ಜೀವಗಳಿಗೆ ಆಸರೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ನಾವು ಇಂದು ಕೇವಲ ಗಿಡಗಳನ್ನು ನೆಡುತ್ತಿಲ್ಲ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬೀಜ ಬಿತ್ತುತ್ತಿದ್ದೇವೆ ಎಂದರು.
ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಜೂನ್ 5ರ ಒಂದು ದಿನದ ಆಚರಣೆಗೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಬೇಕೆಂದರು.
ಶಾಲೆಯ ಮುಖ್ಯಸ್ಥ ಸಂತೋಷ ಬಡಕಂಬಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ನಿಗಾಡಿ, ದಲಿತ ಮುಖಂಡ ಮಾಂತೇಶ ಬಾಡಗಿ, ಶಿಕ್ಷಕಿಯರಾದ ವಿದ್ಯಾ ತೇವರಟ್ಟಿ, ಭಾರತಿ ಖಿಲಾರೆ, ಸುಧಾರಾಣಿ ಕೊರೆ, ಗೀತಾ ಕನ್ನೂರ, ಪೂರ್ಣಿಮಾ ಚೌಗಲಾ, ಎಸ್.ಎಸ್. ಗುಡೋಡಗಿ, ಶೈಲಾ ಇಂಗಳೇಶ್ವರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.

