ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಗತ್ತಿನಲ್ಲಿ ಪ್ರೀತಿ-ವಿಶ್ವಾಸ ಬಹುಮುಖ್ಯವಾಗಿದೆ. ಪ್ರತಿಯೊಬ್ಬರೂ ಪ್ರೀತಿ-ವಿಶ್ವಾಸ ಬಾಂಧವ್ಯದಿಂದ ಜೀವನ ಮಾಡಲು ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಭಜನಾ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟೀಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ 77ನೇ ಯಾತ್ರಾಮಹೋತ್ಸ, ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ 25ನೇ ಸಂಸ್ಮರಣೋತ್ಸವ ಹಾಗೂ ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ ಹಾಗೂ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಗುರುರಕ್ಷೆ, ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರಲ್ಲಿ ಪ್ರೀತಿ-ವಿಶ್ವಾಸ ಇಲ್ಲದಂತಾಗಿರುವದು ವಿಷಾದನೀಯ. ಇದನ್ನು ಉಳಿಸಿಕೊಳ್ಳುವದು ಬಹಳ ದೊಡ್ಡ ಶಕ್ತಿಯಾಗಿದೆ. ಇದನ್ನು ಪ್ರತಿಯೊಬ್ಬರೂ ಉಳಿಸಿಕೊಂಡು ಜೀವನ ಮಾಡುವ ಅಗತ್ಯವಿದೆ. ಮನಸ್ಸಿನಲ್ಲಿ ಒಂದು ಹೊರಗೊಂದು ವಿಚಾರವನ್ನು ಇಟ್ಟುಕೊಂಡು ಜೀವನ ಸಾಗಿಸುವದು ಸರಿಯಲ್ಲ. ಎಂದಿಗೂ ವೈಮನಸ್ಸು ಇರಬಾರದು. ಪ್ರತಿಯೊಂದು ಊರಗಳಲ್ಲಿ ಎಲ್ಲ ಬಾಂಧವರು ಸಹಕಾರ, ಸಹಬಾಳ್ವೆ, ಪ್ರೀತಿ-ವಿಶ್ವಾಸದೊಂದಿಗೆ ಬದುಕು ಸಾಗಿಸುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಶಿವಾಚಾರ್ಯ ಪರಂಪರೆಗೆ ಸೇರಿದ ಸಹಸ್ರ ಮಠಗಳಿವೆ. ಇಂತಹ ಮಠಗಳಲ್ಲಿ ಮನಗೂಳಿಯಲ್ಲಿರುವ ಪಟ್ಟೀಕಂಥಿ ಹಿರೇಮಠವು ತಪೋಭೂಷಣ, ತಪಸ್ವಿಮಠವಾಗಿದೆ. ಪ್ರಸ್ತುತ ಶ್ರೀಗಳು ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ನೇತೃತ್ವ ವಹಿಸಿದ್ದ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ರಾಸಾಯನಿಕ ಬಳಕೆಯಿಂದಾಗಿ ಭೂಮಿಯ ಆರೋಗ್ಯ ಕೆಟ್ಟು ಹೋಗಿದೆ. ಕೆಟ್ಟು ಹೋದ ಭೂಮಿಯಿಂದ ಬರುವ ಆಹಾರದಿಂದ ಜನರ ಆರೋಗ್ಯವು ಕೆಡುತ್ತಿದೆ. ಇದನ್ನು ಮನಗಂಡು ನಾವು ಸಾವಯವ ಕೃಷಿ ಮಾಡುವ ಕೃಷಿಕರನ್ನು ಉತ್ತೇಜನ ಮಾಡುವ ಸಲುವಾಗಿ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಎಂಬ ವಿನೂತನವಾಗಿ ಶ್ರೀಮಠ ನೀಡಿದೆ. ಭೂಮಿಯ ಆರೋಗ್ಯ ಸರಿಯಿದ್ದರೆ ಜನರ ಆರೋಗ್ಯವು ಸರಿಯಾಗಿರುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಮುಖ್ಯಮಂತ್ರಿ ಪದಕ ಪುರಸ್ಕ್ರತ ಪಿಎಸ್ಐ ಶ್ರೀಕಾಂತ ಕಾಂಬಳೆ ಮಾತನಾಡಿದರು. ಸಾನಿಧ್ಯವನ್ನು ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಸಮಾರಂಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಶೇಖಪ್ಪಗೌಡ ಬಿರಾದಾರ, ಮುಖಂಡರಾದ ಸುಭಾಸಗೌಡ ಪಾಟೀಲ, ರಾಜಶೇಖರ ಮಗಿಮಠ, ಗುರು ಗಚ್ಚಿನಮಠ, ಎಸ್.ಎಸ್.ಗೊಳಸಂಗಿಮಠ, ಪಪಂ ಸದಸ್ಯರಾದ ಪ್ರದೀಪ ಜಾನಕರ, ಭಾಗ್ಯರಾಜ ಸೊನ್ನದ, ಪಪಂ ಮುಖ್ಯಾಧಿಕಾರಿ ನಿಖಿಲೇಶ ಪಾಟೀಲ ಇತರರು ಇದ್ದರು. ಸಂಗಮೇಶ ಗೆಣ್ಣೂರ ಸ್ವಾಗತಿಸಿದರು. ಎಸ್.ಪಿ.ಪಾಟೀಲ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ರತ್ನಾಬಾಯಿ ಸಿದ್ದಪ್ಪ ಗುಬ್ಬಾ ದಂಪತಿಗಳಿಗೆ ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ, ವಿರೇಶ ಗೂಡಲಮನಿ ಅವರಿಗೆ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗುರುರಕ್ಷೆ ನೀಡಲಾಯಿತು. ಶ್ರೀಮಠದ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗು, ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಸಮಾರಂಭಕ್ಕೂ ಮುನ್ನ ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ರಜತ ಮೂರ್ತಿಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಭಮೇಳ, ಸಕಲ ವಾದ್ಯ ವೈಭವದೊಂದಿಗೆ ಸಂಭ್ರಮದಿಂದ ಜರುಗಿತು. ನಂತರ ರಥೋತ್ಸವ, ಶ್ರೀಮಠದ ಪೂಜ್ಯರ ಸಿಂಹಾಸನಾರೋಹಣ ನೆರವೇರಿತು.

