ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವು ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಭಾಗವಹಿಸಿದ ಎಮ್.ಬಿ. ಸಿದಗೋಣಿ (ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ), ಕರಣಕುಮಾರ ಮೌರ್ಯ (ಅಂಬೇಡ್ಕರ್ ಚಿಂತಕರು ಹಾಗೂ ವಕೀಲರು) ಹಾಗೂ ಈರಪ್ಪ ಸುತಾರ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ತತ್ವಗಳು, ಸಂವಿಧಾನಿಕ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಹಂಚಿಕೊಂಡರು. ಇಂದಿನ ಸಮಾಜದಲ್ಲಿ ಶಿಕ್ಷಣ, ಸಮಾನತೆ ಹಾಗೂ ಹಕ್ಕುಗಳ ಅರಿವು ಅತ್ಯಂತ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರಾದ ಹಣಮಂತ ಗುಗ್ಗರಿ, ಉಪಾಧ್ಯಕ್ಷರಾದ ಶಿವಾನಂದ ಯಣಗಾಯಿ ಹಾಗೂ ಪದಾಧಿಕಾರಿಗಳಾದ ಕಿರಣ ಗುಗ್ಗರಿ, ಶಿವಾನಂದ ಬೋದ್ಲಿ, ಶಟ್ಟು ಬೋದ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜು ಗಸ್ತಿ, ಸೂರಜ್ ಕುಡ್ರಾಣಿ, ಈಶ್ವರ ನ್ಯಾಮಗೌಡ, ಸುರೇಶ ಕಲ್ಯಾಣಿ, ರಮೇಶ ಅಂಬಿ, ತಿಪ್ಪಣ್ಣ ಪೋತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಸುರೇಶ ಸಂತಿ ಸುಗಮವಾಗಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

