ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಬಡತನ ಎಂದಿಗೂ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ, ಬದಲಾಗಿ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ವಿದ್ಯಾಭ್ಯಾಸದಲ್ಲಿ ಸಾಧನೆಯ ಮೆಟ್ಟಿಲು ಹತ್ತಬಹುದು.ಬಡತನ ಕುಟುಂಬದಲ್ಲಿ ಹುಟ್ಟಿರೋದು ತಪ್ಪಲ್ಲ. ಅದನ್ನು ಯಾರು ಹೇಳಿ ಕೇಳಿ ಪಡೆದುಕೊಂಡು ಬಂದಿರುವುದಿಲ್ಲ. ಆದರೆ ಬಡತನ ಎಂಬ ಕುಂಟುನೆಪ ಇಟ್ಕೊಂಡು ನಿನ್ನ ದಾರಿಗೆ ನೀನೇ ಮುಳ್ಳಿನ ಬೇಲಿ ಹಾಕಿಕೊಳ್ಳುವುದು ಮೂರ್ಖತನ. ಯಾಕೆ ಈ ಮಾತು ಹೇಳ್ತಿದ್ದೀವಿ ಅಂದ್ರೆ ಮನೆಯಲ್ಲಿ ಬಡತನವಿದೆ. ವಿದ್ಯಾಭ್ಯಾಸದಲ್ಲಿ ಹೇಗೆ ಮುಂದುವರೆಯುವುದು ಎಂಬಿತ್ಯಾದಿ ವಿಚಾರಗಳನ್ನು ತಲೆಗೆ ತುಂಬಿಸಿಕೊಂಡು ಮನೆಯಲ್ಲಿ ಕುಳಿತು ಯೋಚಿಸುತ್ತಿದ್ದರೆ ಇವತ್ತು ಕನಕರಾಜ್ ಎಸ್ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪ-ಅಪ್ಪನ ಮುಖದಲ್ಲಿ ಸಾರ್ಥಕತೆ ಭಾವನೆ ಮೂಡಲು ಸಾಧ್ಯವಾಗುತ್ತಿರಲಿಲ್ಲ.
ಹೆಚ್ ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸಿದ್ದಲಿಂಗೇಗೌಡ ಪುತ್ರ ಕನಕರಾಜ್ ಎಸ್ ಬಡತನ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಉತ್ತಮ ಅಂಕಗಳನ್ನು ಪಡೆದು ಹುಟ್ಟೂರಿನ ಹಾಗೂ ಕುಟುಂಬದ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಸಿದ್ದಲಿಂಗೇಗೌಡ- ಶ್ವೇತಾ ದಂಪತಿಯ ಪುತ್ರನಾಗಿರುವ ಕನಕರಾಜ್, ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 548 ಅಂಕಗಳನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದಿರುವುದಕ್ಕೆ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ನವೀನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಅವನ ಮುಂದಿನ ವಿದ್ಯಾಭ್ಯಾಸಕ್ಕೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

