ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ರಷಿಯನ್ ತತ್ವಜ್ಞಾನಿ ಹಾಗೂ ಹೋರಾಟಗಾರ ಸ್ಟಾಲಿನ್ ರವರು ಹೇಳಿರುವಂತೆ, “ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮರ್ಥವಾಗಿ ಬಳಸಿಕೊಂಡು ಅವುಗಳನ್ನು ಯಶಸ್ಸನ್ನಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ” ಎಂದು ಹೇಳಿದ್ದಾರೆ.
ಕಠಿಣ ಪರಿಶ್ರಮ ಮತ್ತು ಛಲಗಾರಿಕೆ ಇದ್ದರೆ ಎಂತಹ ಗ್ರಾಮೀಣ ಪ್ರತಿಭೆಯು ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ ತೋರಬಹುದು. ರಾಜಸ್ಥಾನದ ಸಾಂಪ್ರದಾಯಿಕ ಸಾಮಾಜಿಕ ಪದ್ಧತಿ ‘ಆತಾ-ಸಾತಾ’ ಹೆಸರಿನಲ್ಲಿ ಕುಟುಂಬಗಳು ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ವಿನಿಮಯ (ಬೇರೆ ಮನೆಗೆ ಹೆಣ್ಣು ಕೊಟ್ಟು ತೆಗೆದುಕೊಳ್ಳುವ ಪದ್ಧತಿ) ಮಾಡಿಕೊಳ್ಳುವ ಪದ್ದತಿಯಡಿಯಲ್ಲಿ ಕೇವಲ ೧೦ ವರ್ಷದವಳಿದ್ದಾಗಲೇ ತಂದೆ ಸಂಬಂಧಿಗೆ ವಿವಾಹ ಮಾಡಿಕೊಟ್ಟಿದ್ದರು. ಸಾಮಾಜಿಕ ಕಟ್ಟಳೆ, ಸಾಂಪ್ರದಾಯಿಕ ಅಡೆತಡೆ ಮತ್ತು ಸವಾಲುಗಳನ್ನು ಮೀರಿ, ಹಠಮಾರಿ ಹೆಣ್ಣಾಗಿ ಬೆಳೆದು ಇಡೀ ದೇಶವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿ ತೋರಿದ ಗ್ರಾಮೀಣ ಹುಡುಗಿ ಅವಳು.
ಇವರು ಯಾರ ಬಗ್ಗೆ ಹೇಳೋಕ ಹೊರಟಿದ್ದಾರೆ ಅಂದುಕೊಂಡೀರಾ? ಇವರು ಬೇರಾರೂ ಅಲ್ಲ. ಅವರೇ ರಾಜಸ್ಥಾನದ ದುರ್ಗಾ ಕುಮಾವತ್. ಸಾಮಾಜಿಕ ನಿರ್ಬಂಧಗಳನ್ನು ಎದುರಿಸಿ, ಜೀವನದಲ್ಲಿ ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪದೊಂದಿಗೆ ವೇಟ್ ಲಿಫ್ಟಿಂಗ್ (ಭಾರ ಎತ್ತುವಿಕೆ) ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೈಲಿಗಲ್ಲು ಸಾಧಿಸಿದ ಹೆಣ್ಣು ಆಕೆ.

ಜೀವನವೆಂಬುದು ಒಂದು ಸಾಗರವಿದ್ದಂತೆ. ಆ ಸಾಗರವನ್ನು ಈಜುವಾಗ ಹತ್ತು ಹಲವು ತೊಂದರೆ, ಸಮಸ್ಯೆ, ಮತ್ತು ಸವಾಲುಗಳು ಎದುರಾಗಬಹುದು. ಈಸಬೇಕು ಇದ್ದು ಜಯಿಸಬೇಕು ಎನ್ನುವಂತೆ, ಹೀಗೆ ಸಾಧನೆಯ ಪಯಣದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸೆಂಬ ದಡವನ್ನು ಸೇರಲೇಬೇಕು. ಆದ್ದರಿಂದ ಅದು ನನಗೆ ಸಾಧ್ಯವಿಲ್ಲ, ಕೈಲಾಗದು ಮತ್ತು ಕಠಿಣವಾಗಿದೆ ಎಂಬಂತಹ ನಕಾರಾತ್ಮಕ ಭಾವದಿಂದ ಹೊರಬಂದು ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯ, ಜ್ಞಾನ, ಪ್ರತಿಭೆ, ಯುಕ್ತತೆ ಮತ್ತು ಕೌಶಲ್ಯಗಳಿಂದ ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ಅರಿತು ಕಾರ್ಯಪ್ರವೃತ್ತರಾದರೆ ಎಲ್ಲವು ಸಾಧ್ಯ.
ಸಾಮಾಜಿಕ ಕಟ್ಟಳೆಗಳನ್ನು ಮೀರಿ ಬೆಳೆದ ಗ್ರಾಮೀಣ ಕ್ರೀಡಾ ಸಾಧಕಿ
ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಈಕೆ ‘ಹಳ್ಳಿಯ ಹುಡುಗಿ ಮುಸುಕಿನಲ್ಲೇ ಇರಬೇಕು’ ಎಂಬ ಸಾಮಾಜಿಕ ನಿರ್ಬಂಧವನ್ನು ಮೀರಿ, ಕ್ರೀಡೆಯಲ್ಲಿ ಆಸಕ್ತಿ ತೋರಿದಳು. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ಎದರಿಸಬಲ್ಲೆನೆಂಬ ಆತ್ಮವಿಶ್ವಾಸವೇ ಅವರ ಕ್ರೀಡಾ ಸಾಧನೆಗೆ ಮುನ್ನಡಿ. ದುರ್ಗಾ ಕುಮಾವತ್ ಅವರು ತನಗೆ ಎಲ್ಲಿ ಅವಮಾನವಾಗಿದೆಯೋ ಅದೇ ಸಮಾಜದಿಂದಲೇ ಸನ್ಮಾನಕ್ಕೆ ಪಾತ್ರಳಾಗಬೇಕೆಂಬ ಅಚಲ ನಂಬಿಕೆ ಮತ್ತು ಧೈರ್ಯವೇ ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಎತ್ತರ ಮಟ್ಟಕ್ಕೇರಿಸಿತು.
ಹೆಣ್ಣು ಅಬಲೆಯಲ್ಲ, ಸಮರ್ಥಳು ಎಂಬುದನ್ನು ಸಾಬೀತುಪಡಿಸಿದ ದುರ್ಗಾ ಕುಮಾವತ್
ಇನ್ನು ೧೦ ವರ್ಷದವಳಿದ್ದಾಗಲೇ ಆಟವಾಡಿ ಬೆಳೆಯಬೇಕಾದ ಮಗು ದುರ್ಗಾ ಕುಮಾವತ್ ಬಾಲ್ಯ ವಿವಾಹಕ್ಕೆ ಒಳಗಾಗಿ ಅನೇಕ ಸಾಮಾಜಿಕ ಕಟ್ಟಳೆಗಳಿಂದ ಜರ್ಜರಿತವಾಗಿದ್ದರು. ಹೆಣ್ಣೆಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಅಡಿಗೆ-ಪಾತ್ರೆ-ಪಗಡೆ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವಂತಿದ್ದ ಸಮಾಜಕ್ಕೆ ಹೆಣ್ಣು ಅಬಲೆಯಲ್ಲ, ಸಮರ್ಥಳು ಮತ್ತು ಸಬಲೆ ಎಂಬುದನ್ನು ಸಾಧನೆಯಿಂದಲೇ ತೋರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಳು. ಆದರೆ ದುರದೃಷ್ಟವಶಾತ್ ತಂದೆ ತೀವ್ರತರವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವಾಗ ಅನಿವಾರ್ಯವಾಗಿ ತಂದೆ ಆರೈಕೆಗಾಗಿ ತವರುಮನೆಗೆ ತೆರಳಬೇಕಾಯಿತು. ಕಟ್ಟಡ ಕಾರ್ಮಿಕ, ಕಾರ್ಖಾನೆ ಮತ್ತು ಕೂಲಿಯಾಗಿ ಕೆಲಸ ಮಾಡುತ್ತಾ, ಕುಟುಂಬದ ನಿರ್ವಹಣೆಯ ನೊಗ ಹೊರಬೇಕಾಯಿತು.
ತನ್ನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಿ ತೋರಬೇಕೆಂಬ ಹಂಬಲದೊಂದಿಗೆ ದುರ್ಗಾ ಕುಮಾವತ್ ಅವರು ಜಿಮ್ ಸೇರಿ ತರಬೇತಿ ಪಡೆದರು. ಆಕೆಯಲ್ಲಿರುವ ಅಭಿರುಚಿ ಮತ್ತು ದೈಹಿಕ ಸಾಮರ್ಥ್ಯವನ್ನು ಮನಗಂಡ ತರಬೇತುದಾರ ಭಾರ-ಎತ್ತುವ ತರಬೇತಿ ನೀಡಿದರು. ಅದುವೇ ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸಿತು. ಹೀಗೆಯೇ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಾ, ರಾಷ್ಟçಮಟ್ಟದಲ್ಲಿಯೂ ೩೦೦ ಕೆ.ಜಿ. ವಿಭಾಗದಲ್ಲಿ ಎರಡನೇಯ ಸ್ಥಾನ ಪಡೆಯುವದರೊಂದಿಗೆ ಕ್ರೀಡೆಯಲ್ಲಿ ದಾಖಲೆ ದಾಖಲೆ ಮಾಡಿದರು. ದುರ್ಗಾ ಕುಮಾವತ್ ಅವರು ರಾಷ್ಟ್ರಮಟ್ಟದಲ್ಲಿ ವೇಟ್ ಲಿಪ್ಟಿಂಗ್ನಲ್ಲಿ ಕೀರ್ತಿ ಹೆಚ್ಚುತ್ತಾ ಗ್ರಾಮೀಣ ಪ್ರತಿಭೆ ಮನಸ್ಸು ಮಾಡಿದರೆ ಕ್ರೀಡೆಯಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಸ್ಪೂರ್ತಿದಾಯಕ ಮತ್ತು ಯಶೋಗಾಥೆಯು ನಮಗೆಲ್ಲ ಮಾದರಿಯಾಗಿದೆ.
ಕೊನೆಯ ನುಡಿ
ಗೌತಮಬುದ್ಧ ಅವರ ಜೀವನ ಸಂದೇಶದಂತೆ, “ಇಂದಿನ ನಮ್ಮ ಸ್ಥಿತಿಗೆ ನಿನ್ನೆ ಇದ್ದ ನಮ್ಮ ಮನೋಭಾವ ಅಥವಾ ಮನೋಧೋರಣೆಗಳೇ ಕಾರಣ. ಅದರಂತೆ ನಾಳೆ ನಾವು ಏನಾಗಬೇಕು ಅಂದುಕೊಂಡಿರುತ್ತೇವೆಯೋ ಅಥವಾ ಬಯಸುತ್ತೇವೆಯೋ ಅದು ನಮ್ಮ ಮನೋಧರ್ಮದ ಬಗ್ಗೆ ಇಂದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯಶಸ್ಸಿಗೆ ಸುಲಭದಾರಿಗಳಿಲ್ಲ ಎಂಬುದನ್ನು ಅರಿತು ಸಮಚಿತ್ತ, ತಾಳ್ಮೆ, ನಮ್ಮ ಮೇಲಿನ ದೃಢ ನಂಬಿಕೆ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವವರೆಗೆ ವಿರಮಿಸದೇ ಸತತ ಪ್ರಯತ್ನ, ದಿಟ್ಟಛಲ, ಮತ್ತು ಆತ್ಮವಿಶ್ವಾಸಗಳಿಂದ ಹೋರಾಡಿದರೆ ಯಶಸ್ಸು ಲಭಿಸುತ್ತದೆ.


