ವಿಜಯಪುರದಲ್ಲಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಿಂದ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ವಿಜಯಪುರದಲ್ಲಿ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ. ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಸಿಗುವುದು ಅಪರೂಪದ ಸಂಗತಿ. ಇಂಥ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಲು ಸಂತೋಷವೆನಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಬೋವಿ ಹೇಳಿದರು. ಇಲಾಖೆಯಿಂದ ನೀಡುವ ಅನುದಾನವನ್ನು ಕಲಾವಿದರು ಸಂಘ ಸಂಸ್ಥೆಗಳು ಸರಿಯಾಗಿ ಉಪಯೋಗ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಲಾವಿದರಿಂದ ಆಗಲಿ ಎಂದರು.
ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ್ ಯಡಳ್ಳಿ ಅವರು ಮಾತನಾಡುತ್ತಾ, ಇವತ್ತಿನ ಆಧುನಿಕ ಯುಗದಲ್ಲಿ ಎಐ ಜಗತ್ತಿನಲ್ಲಿ ಎಲ್ಲರೂ ಕ್ಷಣಿಕ ಸಂತಸಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಆದರೆ ಕಲಾವಿದರು ಸಮಾಜದ ಅಂಕುಡೊಂಕುಗಳನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿ ಸಮಾಜಕ್ಕೆ ಸಂದೇಶ ನೀಡುತ್ತ ಮಾದರಿಯಾಗುತ್ತಿದ್ದಾರೆ. ಕಲಾವಿದರಿಂದ ಸಮಾಜದ ಬೆಳವಣಿಗೆ ಸಾಧ್ಯವಾಗಿದೆ. ಒಂದು ಕಲಾಕೃತಿ ಒಂದು ವಿಶೇಷ ಅನುಭವವನ್ನೇ ನೀಡುತ್ತದೆ. ಒಂದು ಕಲಾಕೃತಿ ಒಂದು ಕಾದಂಬರಿಗೆ ಸಮ, ಸಾವಿರ ಪದಗಳಿಗೂ ಮೀರುವ ಶಕ್ತಿ ಒಂದು ಚಿತ್ರಕ್ಕೆಇದೆ ಅಂತಹ ಶ್ರೇಷ್ಠ ಕಲಾವಿದರ ಕಲಾಕೃತಿಗಳು ವಿಜಯಪುರದಲ್ಲಿ ನಡೆಯುತ್ತಿರುವುದು ಅದನ್ನು ವೀಕ್ಷಿಸುವುದು ನಮ್ಮ ಸೌಭಾಗ್ಯ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ್ ಹೂಗಾರ್ ಮಾತನಾಡುತ್ತ, ನಮ್ಮ ಇಲಾಖೆಯಲ್ಲಿಯ ಈ ಗ್ಯಾಲರಿಯು ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಿರ್ಮಿಸಿದ್ದು ಕಲಾವಿದರು ಇದರ ಸದುಪಯೋಗ ಪಡೆಯುತ್ತಿದ್ದಾರೆ ನಿರಂತರವಾಗಿ ಇಲ್ಲಿ ಪ್ರದರ್ಶನಗಳು ಕಲಾವಿದರು ನಡೆಸಬೇಕು ಅದಕ್ಕೆ ಎಲ್ಲ ರೀತಿಯ ಸಹಕಾರ ಮಾಡಲು ಇಲಖೆ ಸಿದ್ದವಿದೆ ಎಂದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಹಿರಿಯ ಕಲಾವಿದರಾದ ಪಿ. ಎಸ್ ಕಡೇಮನಿ ಯವರು ಮಾತನಾಡುತ್ತಾ, ಈ ಕಲಾಪ್ರದರ್ಶನದಲ್ಲಿ ಇರುವ ಕಲಾಕೃತಿಗಳು ಬೇರೆ ಎಲ್ಲೂ ಪ್ರದರ್ಶನವಾಗಿಲ್ಲ ಅತ್ಯಂತ ಶ್ರೇಷ್ಠ ಹಿರಿಯ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನವಾಗುತ್ತಿರುವುದು ಇದನ್ನು ಏರ್ಪಡಿಸಿರುವ ಕ್ಯಾನ್ವಾಸ್ ಆರ್ಟ್ ಫೌಂಡೇಶನ್ಗೆ ಅಭಿನಂದನೆಗಳು. ಇಂಥಹ ಕಲಾಕೃತಿಗಳು ನೋಡಲು ಸಿಗುವುದು ಅಪರೂಪ ಅದರಲ್ಲೂ ಸಂಸ್ಥೆ ಈ ರೀತಿಯ ಕಲಾಕೃತಿಗಳನ್ನು ಸಂಗ್ರಹಿಸಿಟ್ಟಿರೋದು ಅತ್ಯಂತ ಶ್ರೇಷ್ಠ ಕೆಲಸ ವಿಜಯಪುರದ ಕಲಾವಿದರು ಕಲಾಸಕ್ತರು ಈ ಪ್ರದರ್ಶನವನ್ನು ಮರೆಯದೆ ವೀಕ್ಷಿಸಿ ಆಸ್ವಾದಿಸಬೇಕೆಂದು ವಿನಂತಿಸಿಕೊಂಡರು. ವಿದ್ಯಾಧರ ಸಾಲಿ ಎಲ್ಲರನ್ನು ಸ್ವಾಗತಿಸಿದರು. ಕ್ಯಾನ್ವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಹೆಸರಾಂತ ಹಿರಿಯ ಕಲಾವಿದರ ಕಲಾಕೃತಿಗಳು
ಈ ಪ್ರದರ್ಶನದಲ್ಲಿ ನಮ್ಮ ನಾಡಿನ ಹೆಸರಾಂತ ಹಿರಿಯ ಕಲಾವಿದರುಗಳಾದ ಸೋಮಶೇಖರ ಸಾಲಿ, ಎಸ್.ಎಸ್.ಮುನ್ನೊಳ್ಳಿ, ಎಂ. ಬಿ. ಪಾಟೀಲ್, ಆರ್. ಎಂ. ಹಡಪದ, ವಿಜಯ ಸಿಂಧೂರ, ಪ್ರೊ. ಎಂ. ಜೆ. ಕಮಲಾಕ್ಷಿ, ವಿ. ಬಿ.ಹಿರೇಗೌಡರ್, ಎಂ. ಎಸ್. ಚಂದ್ರಶೇಖರ್, ವೈ. ಎಚ್. ಸೂಗೂರ, ಪಿ. ಎನ್. ಚೋಯಾಲ್, ಕೆ. ಬಾಲ್ಗೋಪಾಲನ್, ವಾಸುದೇವ ಕಾಮತ್, ಡಾ. ವಿ. ಜಿ. ಅಂದಾನಿ, ಎಂ. ಆರ್. ಬಾಳಿಕಾಯಿ, ಪಿ. ಎಸ್. ಪುಂಚಿತ್ತಾಯ, ಆರ್. ಎಂ. ಪಳನಿಯಪ್ಪನ್, ಪಿ. ಎಸ್. ಕಡೇಮನಿ, ಕೆ. ಕೆ. ಮಕಾಳಿ, ಎ. ಎಂ. ಪ್ರಕಾಶ, ಬಿ. ಕೆ. ಬಡಿಗೇರ, ವಿದ್ಯಾಧರ ಸಾಲಿ, ಶ್ರೀ ಎಂ ಮೋಹನ್, ದಯಾನಂದ ತಪಶೆಟ್ಟಿ, ಪ್ರಭಾಕರ್ ಎಲ್, ಬಿ. ಎಸ್. ಪಾಟೀಲ, ವಿಜಯರಾಜ ಬೋಧನಕರ್, ಅಂಬಾರಾಯ್ ಚಿನಮಳ್ಳಿ, ಬಾಬು ಜತ್ತಕರ್, ಕಮಲ್ ಅಹಮ್ಮದ, ಎಂ. ನಂದಬಸಪ್ಪ ವಾಡೆ, ಎಂ. ಜಿ. ಮಕಾನದಾರ್, ಕಂದನ್ ಜಿ, ಕೂಡಲ ಹಿರೇಮಠ, ರಾಘವೇಂದ್ರ ಪಾಟೀಲ, ಮಂಜುನಾಥ ವಾಲಿ, ಶ್ರೀಕಾಂತ ರಜಪೂತ, ರಮೇಶ ಚವ್ಹಾಣ ಲಿಂಗರಾಜ ಕಾಚಾಪುರ ಇವರೆಲ್ಲರ ಕಲಾಕೃತಿಗಳು ನೋಡುಗರನ್ನು ಮಂತ್ರಮುಗ್ಧರಾಗಿಸುತ್ತಿವೆ.
ಏ.೧೯ ವರೆಗೆ ಕಲಾ ಪ್ರದರ್ಶನ
ಈ ಕಲಾ ಪ್ರದರ್ಶನವು ದಿನಾಂಕ 15-04-2026 ರಿಂದ 19-04-2026ರ ಮುಂಜಾನೆ 10 ರಿಂದ ಸಂಜೆ 5 ರ ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಉಚಿತ ಪ್ರವೇಶವಿದೆ. ಎಲ್ಲ ಕಲಾಸಕ್ತರು ಆಗಮಿಸಿ ಈ ಅಪರೂಪದ ಕಲಾ ಪ್ರದರ್ಶನ ವೀಕ್ಷಿಸಲು ಸಂಘಟಕರು ಕೋರಿದ್ದಾರೆ.

