ಅಕ್ರಮ ಕಟ್ಟಡ ಆರೋಪ | ಹುಣಸೂರು ಎಸಿ ಕಾವ್ಯರಾಣಿ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ ಮಾರ್ಗ ಬರುವ ಮಗ್ಗೆ- ಮಳಲಿ ಗ್ರಾಮಗಳ ಮಧ್ಯೆ ನಿರ್ಮಾಣವಾಗುತ್ತಿರುವ ಹೋಟೆಲ್ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಹುಣಸೂರು ಉಪವಿಭಾಗಧಿಕಾರಿ ಕಾವ್ಯರಾಣಿ ತಾಕೀತು ಮಾಡಿದ್ದಾರೆ.
ಸಾರ್ವಜನಿಕರಿಂದ ದೂರುಗಳ ಕೇಳಿಬಂದ ಹಿನ್ನೆಲೆ ಅಧಿಕಾರಿಗಳ ಜೊತೆ ಗುರುವಾರ ಸ್ಥಳಕ್ಕೆ ಬಂದ ಕಾವ್ಯರಾಣಿ. ಕಟ್ಟಡ ಕಾಮಗಾರಿ ಪರಿಶೀಲಿಸಿ, ಕೂಡಲೇ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿದರು. ಕಟ್ಟಡ ಮಾಲೀಕ ಲಕ್ಷ್ಮಿಪ್ರಸಾದ್ ಎಂಬುವರಿಗೆ ಕರೆಮಾಡಿ, ತತ್ ಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇದು ಸೂಕ್ಷ್ಮಪರಿಸರ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ಸಂಬಂಧ ಎರಡು ಬಾರಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಅಷ್ಟಾದರೂ ಕೂಡ ಕಾಮಗಾರಿ ಮುಂದುವರೆಸಿರುವುದು ಕಾನೂನು ಬಾಹಿರ. ಕಟ್ಟಡ ಕಾಮಗಾರಿ ಸಂಬಂಧ ದಾಖಲೆಗಳು ಇದ್ದರೆ ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಅನುಮತಿ ಪಡೆದು ಕಟ್ಟಡ ಕಾಮಗಾರಿ ಮುಂದುವರೆಸಿ ಎಂದು ಸೂಚನೆ ನೀಡಿ, ಕೂಲಿ ಕಾರ್ಮಿಕರನ್ನು ಹೊರಗೆ ಕಳುಹಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಕಚೇರಿಯಲ್ಲಿ ಕಾವ್ಯಾರಾಣಿ, ಅಧಿಕಾರಿಗಳ ಜೊತೆ ಸಭೆ ನಡೆಸಿ, ರೆಸಾರ್ಟ್ ಗಳ ನಿರ್ಮಾಣಕ್ಕೆ ಒತ್ತುವರಿ ಜಾಗ ತೆರವು ಸಂಬಂಧ ವರದಿ ಕೇಳಿದರು. ಈ ವೇಳೆ ಕಬಿನಿ ಎಇಇ ಗಣೇಶ್ ಮಾತನಾಡಿ, ನಮ್ಮಲ್ಲಿ ಸದ್ಯಕ್ಕೆ ಆರು ರೆಸಾರ್ಟ್ ಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿದೆ. ಈ ಜಾಗದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಿಲ್ಲ. ಒತ್ತುವರಿ ಜಾಗಗಳಲ್ಲಿ ಪಾರ್ಕ್ ನಿರ್ಮಾಣ ಮಾಡಿಕೊಂಡು ಕೆಲವೊಂದು ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ. ಐದು ರೆಸಾರ್ಟ್ ಗಳ ಮಾಲೀಕರು ಕಬಿನಿ ಹಿನ್ನೀರಿನ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದರು. ಆ ಜಾಗವನ್ನು ತೆರವುಗೊಳಿಸಿ, ಟ್ರಂಚ್ ಹೊಡೆಸಿ ಮುಳ್ಳುತಂತಿ ಬೇಲಿ ಹಾಕಿಸಿದ್ದೇವೆ. ಆದರೆ ವಾಟರ್ ಹುಡ್ ರೆಸಾರ್ಟ್ ನವರು ಹೈಕೋರ್ಟ್ ಮೊರೆಹೋಗಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈ ಜಾಗದ ಮೂಲ ಮಾಲೀಕ 1 ಎಕರೆ 5 ಗುಂಟೆ ಜಮೀನನ್ನು ತನ್ನ ಆಸ್ತಿಯೆಂದು ರೆಸಾರ್ಟ್ ಮಾಲೀಕರಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಿದರು.
ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್, ಎಇಇ ಗಣೇಶ್, ಇಒ ಧರಣೇಶ್, ಮುಖ್ಯಾಧಿಕಾರಿ ಸುರೇಶ್, ಎಸಿಎಫ್ ಮಧು ದೇವಯ್ಯ, ASI ಶಶಿಕುಮಾರ್,
ನಗರ ಯೋಜನಾ ಅಧಿಕಾರಿ ದೀಪಕ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸುನಿಲ್, ಆರ್ ಐ ಯೋಗೀಶ್, ವಿಎ ನಾಗರಾಜ್, ಪರಶಿವ, ಪಿಡಿಒ ಚಿದಾನಂದ, ಮತ್ತಿತರರು ಹಾಜರಿದ್ದರು.
ಕೋಟ್
“ಇಲಾಖೆಯ ಕೈತಪ್ಪಿನಿಂದ ದಾಖಲೆಯಲ್ಲಿ ಸರಿಯಾಗಿ ನಮೂದು ಹಾಗೂ ಜಮೀನು ಇಂಡೀಕರಣ( ಇಂಡೀಕರಣ ಎಂದರೆ ಕಂದಾಯ ದಾಖಲೆಗಳಲ್ಲಿ (ಪಹಣಿ/RTC) ಭೂಮಿಯ ಒಡೆತನ, ವಿಸ್ತೀರ್ಣ ಅಥವಾ ವರ್ಗಾವಣೆಯನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆ) ಆಗದೇ ಇರುವುದರಿಂದ ಮಾಲೀಕ ತನ್ನದೆ ಆಸ್ತಿ ಎಂದು ರೆಸಾರ್ಟ್ ನವರಿಗೆ ಮಾರಾಟ ಮಾಡಿದ್ದಾನೆ. ತಕ್ಷಣವೇ ತಹಸೀಲ್ದಾರ್ ಮುಖಾಂತರ ಇಂಡೀಕರಣ ಮಾಡಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಆ ಜಾಗವನ್ನು ತೆರವುಗೊಳಿಸುತ್ತೇವೆ.”
– ಗಣೇಶ್
ಕಬಿನಿ ಎಇಇ

