ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ಅಂಜಲಿ ಸಿ. ಅವರ ವರ್ತನೆಗೆ ಸಾರ್ವಜನಿಕರು ಬೇಸತ್ತಿದ್ದಾರೆ.
ಸಾರ್ವಜನಿಕರು ತಮ್ಮ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ ಉಪನೋಂದಣಾಧಿಕಾರಿಗಳ ಬಳಿ ಹೋದರೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಾಕಷ್ಟು ನಾಗರಿಕರು ಆರೋಪಿಸಿದ್ದಾರೆ.
ಬುಧವಾರ ಸೊನಕನಳ್ಳಿ ಗ್ರಾಮದ ಭೀಮಾಶಂಕರ ವಿಲಾಸ ವಾಲೀಕಾರ ಎಂಬ ರೈತ ತಮ್ಮ ಜಮೀನಿನ ಪಹಣಿಯಲ್ಲಿ ಭೋಜಾ ದಾಖಲು ಮಾಡಿಸಲು ಆನ್ಲೈನ್ ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ಗ್ರಾಮದ ಹೆಸರು ಸೊನಕನಹಳ್ಳಿ ಬದಲಾಗಿ ಬೆನಕನಹಳ್ಳಿ ಎಂದು ದಾಖಲಾಗಿತ್ತು. ಅದನ್ನು ತಿದ್ದುಪಡಿ ಮಾಡಲು ಉಪನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿದ್ದ ಉಪನೋಂದಣಾಧಿಕಾರಿ ಅಂಜಲಿ ಸಿ ಅವರನ್ನು ಆನ್ಲೈನ್ ಹಾಕುವಾಗ ಈ ತಪ್ಪಾಗಿದೆ ಇದಕ್ಕೆ ತಿದ್ದುಪಡಿ ಹೇಗೆ ಮಾಡಬೇಕೆಂದು ಕೇಳಿದಾಗ ಆತನೊಂದಿಗೆ ಅಸಭ್ಯ, ಅಶ್ಲೀಲ ಪದಗಳಿಂದ ಮಾತನಾಡಿದ್ದಾರೆ. ಅಲ್ಲದೆ ಆನ್ಲೈನ್ ಅಪ್ಲಿಕೇಶನ್ ಹಾಕಿದ್ದು ಆನ್ಲೈನ್ ಅಂಗಡಿಯವನೂ ಸಹ ಕಚೇರಿಗೆ ತೆರಳಿ ಹೀಗೆ ತಪ್ಪಾಗಿದೆ ಮೇಡಂ ಅದನ್ನು ತಿದ್ದುಪಡಿ ಮಾಡಲು ನಿಮ್ಮಲ್ಲಿ ಅವಕಾಶವಿದೆ ಮಾಡಿಕೊಡಿ ಎಂದು ಕೇಳಿದಾಗ ಆತನ ಮೇಲೆಯೂ ರೇಗಾಡಿದ್ದಾರೆ. ಅಲ್ಲಿದ್ದ ಸಾರ್ವಜನಿಕರ ಮಧ್ಯಯೇ ಉಪನೋಂದಣಾಧಿಕಾರಿಗಳು ರೇಗಾಡಿದ್ದಲ್ಲದೆ ಪೊಲೀಸರನ್ನು ಕರೆಯಿಸಿ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇನೆ ಎಂದು ಪೊಲೀಸರಿಗೂ ಕರೆಸಿದ್ದಾರೆ. ಪೊಲೀಸರನ್ನು ಕರೆಸಿ ಎಲ್ಲರನ್ನೂ ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮಹಿಳಾ ಅಧಿಕಾರಿಯ ದೌರ್ಜನ್ಯಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಏಜೆಂಟರ ಹಾವಳಿ
ಕಚೇರಿಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಏಜೆಂಟರ ಮುಖಾಂತರವಾಗಿ ಬಂದರೆ ಕೆಲಸಗಳು ಬಹಳ ಬೇಗನೆ ಮುಗಿಯುತ್ತವೆ ನೀರಾವರಿ ಜಮೀನು ಇದ್ದರೂ ಅದನ್ನು ಒಣಬೇಸಾಯದ ವ್ಯಾಲ್ಯೂವೇಶನ್ ಮೂಲಕ ಖರೀದಿ ಹಾಕುತ್ತಾರೆ. ನೇರವಾಗಿ ಹೋದರೆ ನೀರಾವರಿ ವ್ಯಾಲ್ಯೂವೇಶನ್ ಹಾಕಿ ಚಲನ್ ತೆಗೆಯುವಂತೆ ತಿಳಿಸುತ್ತಾರೆ. ಹೀಗಾಗಿ ಜನ ಏಜೆಂಟರ ಮುಖಾಂತರೇ ಕೆಲಸ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಉದಾಹರಣೆ: ನಾಲ್ಕು ಎಕರೆ ನೀರಾವರಿ ಜಮೀನು ಬೇರೆಯವರಿಗೆ ಖರೀದಿ ಹಾಕಬೇಕಾದರೆ ಸರಕಾರಕ್ಕೆ ನೀರಾವರಿ ಚಲನ್ ೬೦೬೮೦ ರೂ ಚಲನ್ ತೆಗೆಯಬೇಕು. ಆದರೆ ಏಜೆಂಟರ ಮುಖಾಂತರ ಹೋದರೆ ಅದೇ ಜಮೀನನ್ನು ಒಣಬೇಸಾಯದಲ್ಲಿ ೩೦೬೮೦ ರೂ ಚಲನ್ ತೆಗೆದು ಹೆಚ್ಚುವರಿಯಾಗಿ ೧೫ ಸಾವಿರ ರೂಪಾಯಿ ಹಣ ಪಡೆದು ಕೆಲಸ ಮಾಡಿಕೊಡುತ್ತಾರೆ. ಇಂತಹ ಸಾವಿರಾರು ಪ್ರಕರಣಗಳು ಈ ಕಚೇರಿಯಲ್ಲಿ ನಡೆದಿದೆ ಎನ್ನುತ್ತಾರೆ ಸಾರ್ವಜನಿಕರು.
“ಇಂಡಿ ಉಪನೋಂದಣಾಧಿಕಾರಿಗಳು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ಜನ ಹೇಳಿದ್ದಾರೆ. ಅದರಲ್ಲಿ ನನ್ನ ಕ್ಷೇತ್ರದ ಜನರೇ ಹೆಚ್ಚಿಗೆ ಬರುತ್ತಾರೆ. ಅವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕಾಗುತ್ತದೆ.”
– ವಿಠ್ಠಲ ಕಟಕಧೋಂಡ ಶಾಸಕರು, ನಾಗಠಾಣ ಮತಕ್ಷೇತ್ರ.
“ಇಂಡಿ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಅಧಿಕಾರಿ ಅಂಜಲಿ ಸಿ ಅವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಏಜೆಂಟರ ಮೂಲಕ ಕಾರ್ಯ ಮಾಡುತಿದ್ದಾರೆ ಎಂಬ ಆರೋಪವಿದೆ.ಅವರನ್ನು ಕೂಡಲೆ ಸರಕಾರ ಅಮಾನತ್ತು ಮಾಡಬೇಕು.”
– ಎಸ್.ಬಿ. ಕೆಂಬೋಗಿ
ಜಿಲ್ಲಾಧ್ಯಕ್ಷರು, ರೈತ ಸಂಘ ಹಾಗೂ ಹಸಿರು ಸೇನೆ

