ಲೇಖನ
– ಪ್ರಶಾಂತ ಕುಲಕರ್ಣಿ
ಉಪನ್ಯಾಸಕರು
ಸಿಂದಗಿ -೫೮೬೧೨೮
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
12ನೇ ಶತಮಾನವು ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಅವಿಸ್ಮರಣೀಯವಾದ ಸುವರ್ಣಯುಗವಾಗಿದೆ. ಈ ಕಾಲಘಟ್ಟದಲ್ಲಿ ಶರಣರು ತಮ್ಮ ಅನುಭವಗಳಿಂದ ಹೊರಹೊಮ್ಮಿದ ವಚನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಶ್ರೀಮಂತಿಕೆಯನ್ನು ತಂದಿದ್ದಾರೆ. ಈ ಶರಣ ಸಂಪ್ರದಾಯವು ಕೇವಲ ಧಾರ್ಮಿಕ ಚಳವಳಿಯಷ್ಟೇ ಅಲ್ಲ, ಅದು ಒಂದು ಸಾಮಾಜಿಕ ಕ್ರಾಂತಿ, ಒಂದು ಮೌಲ್ಯಾಧಾರಿತ ಜೀವನ ಪದ್ಧತಿ, ಮತ್ತು ಮಾನವೀಯತೆಯ ಮಹೋನ್ನತ ಸಂದೇಶವಾಗಿತ್ತು. “ಶರಣ” ಎಂದರೆ ತನ್ನನ್ನು ತಾನು ಅರಿತವನು, ತನ್ನ ಅಂತರಂಗವನ್ನು ಶುದ್ಧಗೊಳಿಸಿಕೊಂಡವನು, ಶಿವನನ್ನು ತನ್ನೊಳಗೆ ಕಂಡವನು. ಇವರು ಕೇವಲ ಭಕ್ತರಲ್ಲ, ಅವರು ಚಿಂತಕರು, ಕಾಯಕಯೋಗಿಗಳು, ಸಮಾಜ ಸುಧಾರಕರು ಮತ್ತು ಸತ್ಯದ ಸಾಧಕರು.

ಶರಣರು ತಮ್ಮ ಜೀವನದಲ್ಲಿ “ಕಾಯಕವೇ ಕೈಲಾಸ” ಎಂಬ ತತ್ತ್ವವನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಹೀನ-ಮೇಲು ಎನ್ನದೆ, ಪ್ರಾಮಾಣಿಕವಾಗಿ ಮಾಡುವುದೇ ದೇವಾರಾಧನೆ ಎಂದು ಸಾರಿದರು. ಇವರು ಗುರುವಿಗೆ ತನವನ್ನು, ಲಿಂಗಕ್ಕೆ ಮನವನ್ನು, ಜಂಗಮಕ್ಕೆ ಧನವನ್ನು ಅರ್ಪಿಸಿದವರು. ಇವರ ನಡೆ-ನುಡಿಗಳು ಒಂದೇ ಆಗಿದ್ದು, ಜೀವನವೇ ಒಂದು ಸಾಧನೆಯಾಗಿತ್ತು. ಹೊಗಳಿಕೆಗೆ ಹೆಗ್ಗದೆ, ತೆಗಳಿಕೆಗೆ ಕುಗ್ಗದೆ, ಮರಣವನ್ನೇ ಮಹಾನವಮಿ ಎಂದು ಭಾವಿಸಿದ ಧೈರ್ಯಶಾಲಿಗಳು. ಇಂತಹ ಶರಣರ ಪವಿತ್ರ ನಾಡಾದ ವಿಜಯಪುರ ಜಿಲ್ಲೆಯು ಅನೇಕ ಮಹಾನ್ ಶಿವಶರಣರನ್ನು ಕೊಟ್ಟಿದೆ. ಆ ಮಹಾನ್ ಶರಣರಲ್ಲಿ ಗೋಲಗೆರಿಯ ವೀರ ಗೊಲ್ಲಾಳೇಶ್ವರರು ಪ್ರಮುಖರು.
ವಚನ ಪಿತಾಮಹರೆಂದು ಪ್ರಸಿದ್ಧರಾದ ಹಳಕಟ್ಟೆಯವರು ಪಾಲ್ಧರಿಕೆ ಸೋಮರಾಧ್ಯನು ಗಣಸಹಸ್ರದಲ್ಲಿ ಸೂಚಿಸಿದ ಶಿವಶರಣರನ್ನು “770 ಅಮರ ಗಣಾಧೀಶ್ವರ ಚರಿತ್ರೆ” ಎಂಬ ಗ್ರಂಥದಲ್ಲಿ ಪ್ರಕಟಿಸಿದ್ದು, ಅದರಲ್ಲಿನ 127ನೇ ಸ್ಥಾನವನ್ನು ಪಡೆದಿರುವವರು ವಚನಕಾರ ವೀರ ಗೊಲ್ಲಾಳೇಶ್ವರರು. ಇದರಿಂದಲೇ ಅವರ ಮಹತ್ವ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳಬಹುದು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೆರಿಯಿಂದ ಸುಮಾರು 3-4 ಕಿಲೋಮೀಟರ್ ದೂರದಲ್ಲಿರುವ ದವಳಾರ ಎಂಬ ಚಿಕ್ಕ ಗ್ರಾಮದಲ್ಲಿ ಕುರುಬರ ಮನೆತನದಲ್ಲಿ ಕಾಟಕೂಟ ಮತ್ತು ದುಗ್ಗಲವ್ವ ದಂಪತಿಗಳಿಗೆ ಗೊಲ್ಲಾಳನು ಜನಿಸಿದನು. ಅವನಿಗೆ ಗೊಲ್ಲಾಳರಾಯ, ವೀರಗೊಲ್ಲಾಳ, ಕುರುಬಗೊಲ್ಲಾಳ, ಗೊಲ್ಲಾಳೇಶ್ವರ, ಕಾಟಕೂಟ ಸೂತಗೊಲ್ಲ, ಗೊಲ್ಲನ ಮಗ ಗೊಲ್ಲಾಳ ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯಲ್ಪಟ್ಟರೂ “ಗೋಲಗೆರಿಯ ಗೊಲ್ಲಾಳ” ಎಂಬ ಹೆಸರೇ ಹೆಚ್ಚು ಪ್ರಸಿದ್ಧಿಯಾಯಿತು. ಕ್ರಿ.ಶ. 1160ರ ಸುಮಾರಿಗೆ ಅವನು ಜನಿಸಿದ್ದಾನೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಗೊಲ್ಲಾಳನು ತನ್ನ ಕುಲವೃತ್ತಿಯಾದ ಕುರಿ ಕಾಯುವ ಕೆಲಸವನ್ನೇ ಜೀವನದ ಮಾರ್ಗವನ್ನಾಗಿ ಮಾಡಿಕೊಂಡನು. ಪ್ರತಿದಿನ ದವಳಾರ ಗ್ರಾಮದಿಂದ ಗೋಲಗೆರಿಯತ್ತ ಕುರಿಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದನು. ಸರಳ ಜೀವನ, ಶುದ್ಧ ಮನಸ್ಸು ಮತ್ತು ನಿರ್ಲೋಭ ಸ್ವಭಾವವು ಅವನ ಜೀವನದ ಮುಖ್ಯ ಲಕ್ಷಣಗಳಾಗಿದ್ದವು. ಅವನು ಅಜ್ಞಾನಿಯಲ್ಲ, ಆದರೆ ಲೋಕಜ್ಞಾನಕ್ಕಿಂತ ಆಧ್ಯಾತ್ಮಿಕ ಅರಿವಿಗೆ ಹೆಚ್ಚಿನ ಮಹತ್ವ ನೀಡಿದವನಾಗಿದ್ದನು.
ಒಂದು ದಿನ ಉರಿ ಬಿಸಿಲಿನ ಮಧ್ಯಾಹ್ನದಲ್ಲಿ ಗೊಲ್ಲಾಳನು ತನ್ನ ಕುರಿಗಳನ್ನು ಮರದ ನೆರಳಿನಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಹೋಗುತ್ತಿದ್ದ ಭಕ್ತರನ್ನು ಕಂಡನು. ಅವರು ಕಾಂಬಿ ಹೊತ್ತುಕೊಂಡು, ಬಿಸಿಲಿನ ತಾಪವನ್ನೂ ಲೆಕ್ಕಿಸದೆ, ಭಕ್ತಿಭಾವದಿಂದ ಸಾಗುತ್ತಿದ್ದರು. ಇದನ್ನು ಕಂಡ ಗೊಲ್ಲಾಳನ ಮನಸ್ಸಿನಲ್ಲಿ ಕುತೂಹಲ ಮೂಡಿತು. “ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದಾಗ, ಅವರು “ನಾವು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೋಗುತ್ತಿದ್ದೇವೆ. ಅದು ಕೈಲಾಸಕ್ಕೆ ಸಮಾನವಾದ ಕ್ಷೇತ್ರ. ಪಾದಯಾತ್ರೆಯ ಮೂಲಕ ಹೋದರೆ ಪುಣ್ಯ ಲಭಿಸುತ್ತದೆ” ಎಂದು ತಿಳಿಸಿದರು. ಈ ಮಾತುಗಳು ಗೊಲ್ಲಾಳನ ಮನಸ್ಸಿನಲ್ಲಿ ಭಕ್ತಿಯ ಬೀಜವನ್ನು ಬಿತ್ತಿದವು.
ನಂದಯ್ಯ ಸ್ವಾಮಿಗಳಿಂದ ಲಿಂಗ ತರುವಂತೆ ಕೇಳಿದ ಗೊಲ್ಲಾಳನು ತನ್ನ ಪಾದರಕ್ಷೆಗಳನ್ನು ನೀಡಿ, ಬದಲಾಗಿ ಲಿಂಗವನ್ನು ತಂದುಕೊಡಬೇಕೆಂದು ವಿನಂತಿಸಿದನು. ನಂದಯ್ಯನು ಒಪ್ಪಿಕೊಂಡರೂ, ಮರಳಿ ಬಂದಾಗ ಲಿಂಗ ತರುವುದನ್ನು ಮರೆತು, ಅಲ್ಲಿದ್ದ ಕುರಿಯ ಹಿಕ್ಕಿಯನ್ನು ಲಿಂಗವೆಂದು ನೀಡಿ ಮೋಸ ಮಾಡಿದನು. ಆದರೆ ಗೊಲ್ಲಾಳನು ಅದನ್ನು ನಿಜವಾದ ಲಿಂಗವೆಂದು ನಂಬಿ ಭಕ್ತಿಯಿಂದ ಪೂಜಿಸಲು ಪ್ರಾರಂಭಿಸಿದನು. ಇಲ್ಲಿ ಗೊಲ್ಲಾಳನ ಭಕ್ತಿಯ ಶುದ್ಧತೆ ಮತ್ತು ನಂಬಿಕೆಯ ಗಾಢತೆ ಸ್ಪಷ್ಟವಾಗಿ ಕಾಣುತ್ತದೆ.
ಗೊಲ್ಲಾಳನು ಪ್ರತಿದಿನ ಆ “ಲಿಂಗ”ವನ್ನು ಹೂವು-ಪತ್ರಿಕೆಗಳಿಂದ ಅಲಂಕರಿಸಿ, ತನ್ನ ಕುರಿಗಳ ಹಾಲಿನಿಂದ ಅಭಿಷೇಕ ಮಾಡುತ್ತಿದ್ದನು. ಅವನಿಗೆ ಅದು ಕೇವಲ ಹಿಕ್ಕಿ ಅಲ್ಲ, ಅದು ಶಿವಸ್ವರೂಪ. ಭಕ್ತಿಯು ಯಾವ ರೂಪದಲ್ಲಾದರೂ ದೇವರನ್ನು ಕಾಣಿಸುತ್ತದೆ ಎಂಬ ಸತ್ಯವನ್ನು ಅವನು ತನ್ನ ಜೀವನದ ಮೂಲಕ ತೋರಿಸಿದನು. ಈ ಘಟನೆ ಅವನ ಜೀವನದ ಮಹತ್ವದ ತಿರುವಾಗಿತ್ತು.
ಒಂದು ದಿನ ಅವನ ತಂದೆ ಕಾಟಕೂಟನು ಮನೆಗೆ ಹಾಲು ಬಾರದ ಕಾರಣ ವಿಚಾರಿಸಲು ಕುರಿದೊಡ್ಡಿಗೆ ಬಂದನು. ಅಲ್ಲಿ ಮಗನು ಲಿಂಗದ ಮೇಲೆ ಹಾಲು ಸುರಿಸುತ್ತಿರುವುದನ್ನು ಕಂಡು ಕೋಪಗೊಂಡನು. ಅವನು ಆ ಲಿಂಗವನ್ನು ತುಳಿದು ಒಡೆದುಬಿಟ್ಟನು. ಈ ದೃಶ್ಯವನ್ನು ಕಂಡ ಗೊಲ್ಲಾಳನು ಆಕ್ರೋಶದಿಂದ ತನ್ನ ತಂದೆಯನ್ನು ಹೊಡೆದು ಕೊಂದನು. ಆದರೆ ತಕ್ಷಣವೇ ತನ್ನ ಕೃತ್ಯವನ್ನು ಅರಿತು ಪಶ್ಚಾತ್ತಾಪ ಪಟ್ಟನು. ಈ ಕ್ಷಣದಲ್ಲಿ ಸ್ವತಃ ಶಿವನು ಪ್ರತ್ಯಕ್ಷನಾಗಿ ಗೊಲ್ಲಾಳನ ಭಕ್ತಿಯನ್ನು ಮೆಚ್ಚಿ, “ನಾನು ಬೇರೆಯಲ್ಲ, ನೀನು ಬೇರೆಯಲ್ಲ” ಎಂದು ಅನುಗ್ರಹಿಸಿ, ಅವನ ತಂದೆಗೆ ಮರುಜೀವ ನೀಡಿದನು. ಈ ಘಟನೆ ಗೊಲ್ಲಾಳನ ಭಕ್ತಿಯ ಶ್ರೇಷ್ಠತೆಯನ್ನು ಸಾರುತ್ತದೆ.
ಆ ದಿನದಿಂದ ಗೊಲ್ಲಾಳನು “ಗೊಲ್ಲಾಳೇಶ್ವರ” ಎಂದು ಪ್ರಸಿದ್ಧನಾದನು. ಕುರಿಯ ಹಿಕ್ಕಿಯೇ ಲಿಂಗವಾಗಿ ಪರಿವರ್ತಿತವಾಗಿರುವುದು ಭಕ್ತಿಯ ಮಹಿಮೆಗೂ ಸಾಕ್ಷಿಯಾಗಿದೆ. ಇಂದಿಗೂ ಗೋಲಗೆರಿಯಲ್ಲಿ ಈ ಪವಿತ್ರ ಸ್ಥಳವು ಭಕ್ತರ ಆರಾಧನೆಯ ಕೇಂದ್ರವಾಗಿದೆ.
ಗೊಲ್ಲಾಳೇಶ್ವರರ ವಚನಗಳು ಅವರ ಜೀವನದ ಅನುಭವಗಳಿಂದ ಹುಟ್ಟಿದವು. ಅವು ಕೇವಲ ಕಾವ್ಯವಲ್ಲ, ಅವು ಬದುಕಿನ ಮಾರ್ಗದರ್ಶಕ. ಕುರಿ, ಹೋತ, ತೋಳ, ಹುಲಿ, ಕಳ್ಳ ಇತ್ಯಾದಿ ರೂಪಕಗಳ ಮೂಲಕ ಅವರು ಜೀವನದ ಸತ್ಯಗಳನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ಅವರ ವಚನಗಳಲ್ಲಿ ಅಜ್ಞಾನ ನಿವಾರಣೆ, ಆತ್ಮಜ್ಞಾನ ಸಾಧನೆ, ಕಾಯಕದ ಮಹತ್ವ, ಸತ್ಪ್ರವೃತ್ತಿ, ಸಾತ್ವಿಕ ಜೀವನ ಮತ್ತು ದುರ್ಗುಣಗಳ ಜಯ ಇತ್ಯಾದಿ ವಿಷಯಗಳು ಸ್ಪಷ್ಟವಾಗಿ ಕಾಣುತ್ತವೆ.
ಅವರು ಹೇಳುವಂತೆ, “ ಅಜ್ಞಾನವೆಂಬ ಹೊತನ ಕೊಯ್ದು, ಮೂಢಾಚರಣೆಯಂಬ ಕುರಿಯ ಚರ್ಮಸುಲಿದು ಜೀವಾತ್ಮನನ್ನು ಆವರಿಸಿರುವ ಆವಗುಣಗಳೆಂಬ ತೋಳುಗಳ ಗೆದ್ದು ವಿಚಾರವಂತಿಕೆಯ ಅರಿವಿನ ಕುರುಬ ಶರಣ ಕುಲದಲ್ಲಿ ಬೆರೆತು ವೀರ ಬೀರೇಶ್ವರ ಲಿಂಗವನ್ನರಿಯರಿ ಈ ವಚನವು ಜೀವನದ ಆಳವಾದ ಸತ್ಯವನ್ನು ಹೇಳುತ್ತದೆ. ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ತೊರೆದು, ವೈಚಾರಿಕತೆ ಮತ್ತು ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಮತ್ತೊಂದು ವಚನದಲ್ಲಿ ಅವರು “ಹೋತನ ಹೊಡೆದು ಆಡಕೂಡಿ ಕುರಿಯನಿಲ್ಲಿಸಿ ಟಗರ ತಡೆದು ಹಿಂಡನೊಬ್ಬಳಿತೆ ಮಾಡಿ ಹುಲಿ, ತೋಳ, ಚೋರ, ಭಯಮಾ ಕಳೆದು, ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೇ ವೀರ ಬೀರೇಶ್ವರ“. ದೇವರನ್ನು ಕುರುಬನಿಗೆ ಹೋಲಿಸಿ, ಮನುಷ್ಯರನ್ನು ಕುರಿಗಳಿಗೆ ಹೋಲಿಸುತ್ತಾರೆ. ಹೇಗೆ ಕುರುಬನು ತನ್ನ ಕುರಿಗಳನ್ನು ಹುಲಿ, ತೋಳ ಮತ್ತು ಕಳ್ಳರಿಂದ ರಕ್ಷಿಸುತ್ತಾನೋ, ಹಾಗೆಯೇ ದೇವರು ಮನುಷ್ಯರನ್ನು ದುರ್ಗುಣಗಳಿಂದ ರಕ್ಷಿಸುತ್ತಾನೆ ಎಂದು ಹೇಳುತ್ತಾರೆ. ಇದು ದೇವರ ಕರುಣೆ ಮತ್ತು ಮಾರ್ಗದರ್ಶನವನ್ನು ಸೂಚಿಸುತ್ತದೆ.
ಗೊಲ್ಲಾಳೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಅಂಧಶ್ರದ್ಧೆಗಳನ್ನು ತೀವ್ರವಾಗಿ ವಿರೋಧಿಸಿದರು. ಅವರು ಶಾಂತಿ, ಸಹಬಾಳ್ವೆ ಮತ್ತು ಸಹಕಾರದ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸಲು ಶ್ರಮಿಸಿದರು. ಅವರ ಜೀವನವೇ ಒಂದು ಸಂದೇಶ: “ಭಕ್ತಿಯು ಶುದ್ಧವಾಗಿದ್ದರೆ ದೇವರು ಎಲ್ಲಿಯೂ ಇದ್ದಾನೆ.”
ಇಂದಿಗೂ ಗೋಲಗೆರಿಯಲ್ಲಿ ಗೊಲ್ಲಾಳೇಶ್ವರರ ಜಾತ್ರೆ ಭಕ್ತಿಭಾವದಿಂದ ನಡೆಯುತ್ತದೆ. ದವನದ ಹುಣ್ಣಿಮೆ ದಿನ ಭವ್ಯ ರಥೋತ್ಸವ ನಡೆಯುವುದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಿ, ಗೊಲ್ಲಾಳೇಶ್ವರರ ಆಶೀರ್ವಾದ ಪಡೆಯುತ್ತಾರೆ.


