ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಆರಾಧ್ಯ ದೈವ ಶ್ರೀ ಬಾಲೇಶ್ವರ ದೇವರ ಜಾತ್ರಾ ಮಹೋತ್ಸವವು ರವಿವಾರ ಶ್ರದ್ಧಾ ಭಕ್ತಿಯೊಂದಿಗೆ ಅದ್ದೂರಿಯಾಗಿ ನೆರವೇರಿತು.
ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸಾವಿರಾರು ಭಕ್ತಾದಿಗಳು ದೈವದರ್ಶನ ಪಡೆದು ಪುನೀತರಾದರು.
ಜಾತ್ರೆಯ ಅಂಗವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬಾಲೇಶ್ವರ ದೇವರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ, ನೈವೇದ್ಯ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಯಿತು. ನಂತರ ಗ್ರಾಮದ ಪುಣ್ಯ ಗಂಗಸ್ಥಳದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ವೈವಿಧ್ಯಮಯ ಕಲಾತಂಡಗಳ ಮೆರವಣಿಗೆ
ಗಂಗಸ್ಥಳದಿಂದ ದೇವಸ್ಥಾನದವರೆಗೆ ನಡೆದ ಪಲ್ಲಕ್ಕಿ ಮೆರವಣಿಗೆಯು ನೋಡುಗರ ಕಣ್ಣು ಸೆಳೆಯಿತು. ನೂರಾರು ಡೊಳ್ಳುಗಳ ಬಡಿತದ ನಿನಾದ ಅಂಬರ ಚುಂಬಿಸಿತ್ತು. ಕರಡಿ ಮಜಲು, ಸಕಲ ವಾದ್ಯ ವೈಭವಗಳು ಮೆರವಣಿಗೆಗೆ ಮೆರುಗು ನೀಡಿದವು. ಜೋಗತಿ ನೃತ್ಯ ಭಕ್ತರ ಗಮನ ಸೆಳೆಯಿತು. ನೂರಾರು ಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಭಕ್ತರ ಹರಕೆ ಮತ್ತು ದೀರ್ಘದಂಡ ನಮಸ್ಕಾರ
ದೇವರಿಗೆ ಹರಕೆ ಹೊತ್ತ ನೂರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳು ಗಂಗಸ್ಥಳದಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಶ್ರದ್ಧಾಭಕ್ತಿಯನ್ನು ಮೆರೆದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.
ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಪ್ರಮುಖರಾದ ಪರಶು ನಾಗರಬೆಟ್ಟ, ಲಕ್ಷಣ ಒಳಕಲದಿನ್ನಿ, ಯಮನಪ್ಪ ಬಿರಾದಾರ, ನಾಗೇಶ ಬಿರಾದಾರ, ಯಲ್ಲಪ್ಪ ಚಲವಾದಿ, ರಮೇಶ ಬಿರಾದಾರ, ಹಣಮಗೌಡ ಪಾಟೀಲ, ಭೈಲಪ್ಪ ನಾಗರಬೆಟ್ಟ, ಬಸಪ್ಪ ತುರಡಗಿ, ಬಸನಗೌಡ ಪಾಟೀಲ, ಶಿವಪ್ಪ ನಾಗರಬೆಟ್ಟ, ಹಣಮಂತ ಬಿರಾದಾರ, ಶರಣಗೌಡ ಪಾಟೀಲ, ಸಂತೋಷ ಬಿರಾದಾರ, ಬಸನಗೌಡ ಪಾಟೀಲ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಸರ್ವ ಸದ್ಭಕ್ತರು ಪಾಲ್ಗೊಂಡು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಸಮೃದ್ಧಿಯ ದೈವ ನುಡಿ
ಗ್ರಾಮದ ಭವಿಷ್ಯದ ಬಗ್ಗೆ ನುಡಿದ ಪೂಜಾರಿಗಳು, “ಬರುವ ವರ್ಷದಲ್ಲಿ ಉತ್ತಮ ಮಳೆ-ಬೆಳೆಯಾಗಿ ಗ್ರಾಮವು ಸಕಲ ಸಂಪತ್ತು ಮತ್ತು ಸಮೃದ್ಧಿಯಿಂದ ಬೆಳೆಯಲಿದೆ” ಎಂದು ದೈವವಾಣಿಯನ್ನು ನುಡಿದರು.

