ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ನೀರು ಅಮೂಲ್ಯ ಸಂಪತ್ತು, ಹಿತ-ಮಿತವಾಗಿ ಅದರ ಬಳಕೆಯಾಗಬೇಕು. ಆದ್ದರಿಂದ ನೀರು ನಮ್ಮ ಜೀವನಕ್ಕೊಂದು ಆಧಾರ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪತ್ತು. ಅದನ್ನು ನಮಗೆ ಎಷ್ಟು ಬೇಕು ಅಷ್ಟನ್ನೇ ಬಳಸಿ-ಮುಂದಿನ ಜನಾಂಗಕ್ಕಾಗಿ ಉಳಿಸಿ-ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತರ್ವವಾಗಬೇಕು. ಈ ಭೂಮಿಯ ಜೀವಿಸುವ ಸಕಲ ಮಾನವ ಆದಿಯಾಗಿ ಸಕಲ ಚರಾಚರ ಜೀವರಾಶಿಗಳಿಗೆ ನೀರು ಬೇಕೇ ಬೇಕು. ನೀರಿಲ್ಲದೇ ಯಾವ ಪ್ರಾಣಿಯೂ ಬದುಕಲಾರದು. ಒಂದು ವೇಳೆ ನೀರು ಇಲ್ಲದೇ ಹೋದರೆ ಬದುಕೇ ಇಲ್ಲವಾಗುತ್ತದೆ. ಅದಕ್ಕಾಗಿ ನಿಸರ್ಗದ ನಾಶದಿಂದ ಮತ್ತು ಅರಣ್ಯ ಸಂಪತ್ತಿನ ನಾಶದಿಂದ ಜಗತ್ತಿನೆಲ್ಲೆಡೆಯಲ್ಲಿ ಮಳೆಯ ಪ್ರಮಾಣವು ಸಹ ಕಡಿಮೆಯಾಗುತ್ತಿದೆ. ಇದರಿಂದ ರಾಷ್ಟç-ರಾಷ್ಟçಗಳ ಮಧ್ಯೆ, ರಾಜ್ಯ-ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆಗಾಗಿ ಹಾಹಾಕಾರ, ಪ್ರತಿಭಟನೆ, ಹೋರಾಟಗಳು ಸರ್ವೇ ಸಾಮಾನ್ಯವಾಗುತ್ತಿವೆ. ಮಳೆಯ ಅಭಾವದಿಂ ಕೊರತೆಯುಂಟಾಗುತ್ತಿರುವ ನೀರು-ಜಲದ ಸಂರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. .
ಈ ದಿನದ ಆಚರಣೆಯ ಹಿನ್ನೆಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ನೀರಿನ ಅವಶ್ಯಕತೆ, ಸಂಗ್ರಹಣೆ ಮತ್ತು ಸಂರಕ್ಷಣೆಯ ಕುರಿತು ಜನಜಾಗೃತಿ ನೀಡಬೇಕೆಂಬ ಮಹೋನ್ನತ ಉದ್ಧೇಶದಿಂದ ಚರ್ಚಿಸಿ, ಪರಿಚ್ಛೇದ ೨೧, ೧೦೦೨ ರಲ್ಲಿ ಬ್ರಾಜಿಲ್ ನ ರಿಯೋಡಿ-ಜನೈರೋ ಎಂಬಲ್ಲಿ ಪರಿಸರ ಮತ್ತು ಅಭಿವೃದ್ಧಿ ಕುರಿತು ಅಂತರಾಷ್ಟಿçÃಯ ವಿಚಾರಗೋಷ್ಠಿಯನ್ನು ಆಯೋಜಿಸಲಾಯಿತು. ಹೀಗಾಗಿ ಮುಂದೆ ೧೯೯೩ ಮಾರ್ಚ ೨೨ ರಿಂದ ಈ ವಿಶ್ವ ಜಲ ದಿನದ ಆಚರಣೆಗೆ ಮುನ್ನುಡಿ ಬರೆಯಲಾಯಿತು. ಅದರಂತೆ ೨೦೧೯ ರಲ್ಲಿ “ನಿಸರ್ಗಕ್ಕಾಗಿ ನೀರು” ಹಾಗೂ ೨೦೨೦ ರಲ್ಲಿ “ನೀರು ಉಳಿಸಿ-ಜೀವ ಉಳಿಸಿ” ಎಂಬ ಘೋಷವಾಕ್ಯವನ್ನು ವಿಷಯ ವಸ್ತುವನ್ನಾಗಿಸಿಕೊಂಡು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಇರುವ ಜಲ ವಿವಾದಗಳನ್ನು ಬಗೆಹರಿಸಲು ಹಾಗೂ ನೀರಿನ ಸದ್ಭಳಕೆಯ ಜೊತೆಗೆ ಸಂರಕ್ಷಣೆಯ ಕುರಿತು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ೧೯೯೩ ರಿಂದ ಜಗತ್ತಿನಾದ್ಯಂತ ಮಾರ್ಚ ೨೨ ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನದ ಆಚರಣೆಯ ಮಹತ್ವ
ಆದ್ದರಿಂದ ಅನಾವೃಷ್ಟಿ-ಬರಗಾಲಗಳಂತಹ ಸಂದರ್ಭಗಳಲ್ಲಿ ಲಭ್ಯವಿರುವ ನೀರು ವೃಥಾ ಪೋಲಾಗದಂತೆ ಮತ್ತು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಶಾಲೆ-ಕಾಲೇಜುಗಳಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸುವದರ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಸಮಾಜದಲ್ಲಿ ನೀರು, ಅದರ ಬಳಕೆ ಮತ್ತು ಜಲ ಸಂರಕ್ಷಣೆ ಕುರಿತು ಅರಿವು ಮತ್ತು ಜನಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ ೨೨ ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಖ್ಯಾತ್ ಜಲತಜ್ಞ ಡಾ. ಎ.ಎಚ್.ಏಡನ್ ರವರ ಪ್ರಕಾರ, ಈ ಭೂಮಿಯ ಮೇಲೆ ಸಾವಿರಾರು ಜನ ಪ್ರೀತಿಯಿಲ್ಲದೇ ಬದುಕಬಹುದು. ಆದರೆ ನೀರಿಲ್ಲದೇ ಯಾರೂ ಬದುಕಲಾರರು” ಎಂದು ಹೇಳಿದ್ದಾರೆ. ವಿಶೇಷವಾಗಿ ನೀರಿನ ಬಳಕೆಯ ಮಹತ್ವದ ಬಗೆಗೆ ಈ ಲೇಖನದ ಮುಖೇನ ಜನರಲ್ಲಿ ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದಕ್ಕಾಗಿ ನಾವಿಂದು ನೀರನ್ನು ಹೇಗೆ ಹಿತ-ಮಿತವಾಗಿ ಹೇಗೆ ಬಳಸಬೇಕು, ಅದನ್ನು ಸಂಗ್ರಹಿಸುವ ಬಗೆ ಹೇಗೆ ಮತ್ತು ಭೂಮಿಯಲ್ಲಿ ನೀರಿನ ಮಟ್ಟ ಅಥವಾ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸಬೇಕಾಗಿದೆ. ಆದ್ದರಿಂದ ಈ ಭೂಮಿಯ ಮೇಲೆ ನಾವೆಲ್ಲರೂ ಸುಸ್ಥಿರವಾದ ಜೀವನ ನಿರ್ವಹಣೆ ಮಾಡಲು ನೀರು ಅತಿ ಅವಶ್ಯಕ
೨೦೨೫ ನೇಯ ವರ್ಷದ ಘೋಷವಾಕ್ಯ
ಇತ್ತೀಚಿನ ವರ್ಷಗಳಲ್ಲಿ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಇದರಿಂದಾಗಿ ಜಲಚಕ್ರವು ಹೆಚ್ಚು ಅನಿರೀಕ್ಷಿತವಾಗುತ್ತಿದೆ. ಹೀಗಾಗಿ ಪ್ರವಾಹ, ಬರ, ಭೂ ಕುಸಿತ ಮತ್ತು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತಿದೆ. ಹವಾಮಾನದ ಬದಲಾವಣೆಯನ್ನು ತಗ್ಗಿಸಲು ಮತ್ತು ಸುಸ್ಥಿರ ಪರಿಸರಕ್ಕಾಗಿ ನಾವು ಹಿಮನದಿಗಳ ಸಂರಕ್ಷಣೆಗಾಗಿ ಆದ್ಯತೆ ನೀಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಹೀಗಾಗಿ ಮಾನವನ ಜೀವನಕ್ಕೆ ಅತಿ ಅವಶ್ಯಕವಾಗಿದ್ದು, ಹಿಮ ನದಿಗಳಿಂದ ಕರಗುವ ನೀರು ಕೃಷಿ, ಕೈಗಾರಿಕೆ, ಶುದ್ಧ ಇಂದನ ಉತ್ಪಾದನೆ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳಿಗೆ ಅವಶ್ಯಕವಾಗಿರುತ್ತದೆ ಎಂಬುದನ್ನು ಮನಗಂಡು ೨೦೨೫ ನೇಯ ವರ್ಷದಲ್ಲಿ ವಿಶ್ವ ಜಲ ದಿನವನ್ನು “ಹಿಮನದಿ ಸಂರಕ್ಷಣೆ” ಯ ಧ್ಯೇಯೋದ್ಧೇಶವನ್ನು ಹೊಂದಿದೆ. ಈ ವರ್ಷದ ಜಲ ದಿನದಂದು ಜಾಗತಿಕ ಮಟ್ಟದಲ್ಲಿ ಹಾವಾಮನ ಬದಲಾವಣೆ ಮತ್ತು ನೀರಿನ ಬಿಕ್ಕಟ್ಟನ್ನು ನಿಭಾಯಿಸುವ ಮತ್ತು ಪರಿಸರದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ನಮ್ಮ ಯೋಜನೆಗಳ ಮೂಲದಲ್ಲಿ ಹಿಮನದಿಗಳ ಸಂರಕ್ಷಣೆಯನ್ನು ಪ್ರಮುಖ ಆದ್ಯತೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ.
ಆದ್ದರಿಂದ ಈ ವಿಶ್ವ ಜಲ ದಿನದಂದು ನೈಸರ್ಗಿಕವಾಗಿ ದೊರೆಯುವ ಮತ್ತು ದೈವದತ್ತವಾಗಿ ನಮಗೆ ದೊರೆತ ಸಂಪನ್ಮೂಲಗಳ ಬಳಕೆ, ಸದ್ಭಳಕೆ ಮತ್ತು ಮುಂದಿನ ಜನಾಂಗಕ್ಕಾಗಿ ಉಳಿಸಿ-ಸಂರಕ್ಷಿಸಬೇಕೆಂಬ ವಿಷಯವನ್ನು ನಾವೆಲ್ಲರೂ ಅರಿತುಕೊಂಡು ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ. ಇಡೀ ಜಗತಿನಲ್ಲಿ ಸುಮಾರು ೨.೧ ಬಿಲಿಯನ್ ನಷ್ಟು ಶುದ್ಧ ಕುಡಿಯಲು ನೀರು ದೊರೆಯದೇ ತಮ್ಮ ಆರೋಗ್ಯ ಮತ್ತು ಜೀವನದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿರುವದು ತೀರ ಕಳವಳಕಾರಿ ಸಂಗತಿಯಾಗಿದೆ. ಜಾಗತಿಕ ತಾಪಮಾನದಲ್ಲಿನ ಏರುಪೇರು, ಅರಣ್ಯ-ಪರಿಸರ ಮತ್ತು ಜೈವಿಕ ವ್ಯವಸ್ಥೆಯು ನಾಶವಾಗುತ್ತಾ ನೀರಿನ ಸಮಸ್ಯೆಗಳು ತಲೆದೋರುತ್ತಿವೆ. ಅಷ್ಟೇ ಅಲ್ಲದೇ ಪ್ರಕೃತಿ ವಿಕೋಪ ಮತ್ತು ಹವಾಮಾನದಲ್ಲಿ ಬದಲಾವಣೆಯಿಂದಾಗಿ ಚಂಡಮಾರುತ, ಅತಿವೃಷ್ಟಿ, ಪ್ರವಾಹ, ಸುನಾಮಿ, ಹಿಮ ಕರಗಿ ಮಳೆಯಾಗುವುದು, ಆಮ್ಲ ಮಳೆಯಂತಹ ಪರಿಸರಾತ್ಮಕ ಸಮಸ್ಯೆಗಳು ಎದುರಾಗುತ್ತಿರುವುದು ನಮಗೆಲ್ಲ ಎಚ್ಚರಿಕೆಯ ಗಂಟೆಯಾಗಿದೆ. ಈ ಎಲ್ಲ ಕಾರಣಗಳಿಂದ ಸಮುದ್ರ ತೀರ ಪ್ರದೇಶಗಳಲ್ಲಿ ಭೂ ಕೊರೆತ, ಗುಡ್ಡುಗಾಡು ಪ್ರದೇಶಗಳಲ್ಲಿ ಭೂ ಕುಸಿತ ಮತ್ತು ನದಿಯ ನೀರು ಮಲೀನವಾಗುತ್ತಿದೆ.
ಈ ವಿಶ್ವ ಜಲ ದಿನದ ಅಂಗವಾಗಿ ಶಾಲೆ-ಕಾಲೇಜು, ಸಾರ್ವಜನಿಕ ಸಭೆ, ಉಪನ್ಯಾಸ, ಜನಜಾಗೃತಿ ಜಾಥಾ ಮತ್ತು ಇನ್ನಿತರ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಟಿ.ವ್ಹಿ, ಸಾಮಾಜಿಕ ಜಾಲತಾಣ, ರೇಡಿಯೋ, ವೃತ್ತಪತ್ರಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕ, ಸ್ಫರ್ಧೆ, ಕಾರ್ಯಾಗಾರಗಳಂತಹ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಗಿಡ ಬೆಳೆಸುವ, ವನ ಸಂವರ್ಧನೆ, ಜಲ ಸಂವರ್ಧನೆ, ನೀರು ಸಂಗ್ರಹಣೆ, ಮಳೆ ನೀರು ಕೊಯ್ಲು, ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಮತ್ತು ನೀರಿನ ಹಿತ-ಮಿತ ಬಳಕೆಯ ಕುರಿತು ತಿಳುವಳಿಕೆ ನೀಡವ ಕಾರ್ಯ ನಡೆಯಬೇಕಾಗಿದೆ. ಜಗತ್ತು ನೀರಿನ ಅವಶ್ಯಕತೆಯಿಂದ ತತ್ತರಿಸಿ ಹೋಗುತ್ತಿರುವದರಿಂದ ಮತ್ತು ನೀರಿಗಾಗಿ ನಡೆಯುತ್ತಿರುವ ಹಾಹಾಕಾರವನ್ನು ತಪ್ಪಿಸಲು ಜಗತ್ತಿನಾದ್ಯಂತ ನೀರು-ಜಲ, ಅದರ ಅವಶ್ಯಕತೆ, ಬಳಕೆ, ಸಂಗ್ರಹಣೆ ಮತ್ತು ಅಂತರ್ಜಲ ಮಟ್ಟವನ್ನು ವೃದ್ಧಿಸಲು ಜನರಲ್ಲಿ ಅರಿವು ಮೂಡಿಸುವ ಮಹೋನ್ನತವಾದ ಉದ್ಧೇಶದಿಂದ ಪ್ರತಿವರ್ಷ ಮಾರ್ಚ ೨೨ ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು.
ಕೊನೆಯ ನುಡಿ
ಆದ್ದರಿಂದ ನಿಸರ್ಗ ತನ್ನ ರುದ್ರತಾಂಡವವನ್ನಾಡುವ ಮುನ್ನ ನಾವೆಲ್ಲರೂ ಎಚ್ಚೆತ್ತು ಜಲ ಸಂರಕ್ಷಣೆಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ-ಕರ್ತವ್ಯ ಮತ್ತು ಹಕ್ಕು-ಬಾಧ್ಯತೆಗಳನ್ನು ಮನಗಂಡು ಈ ಜಲವು ನಮಗಷ್ಟೇ ಅಲ್ಲ, ಮುಂದಿನ ಜನಾಂಗಕ್ಕಾಗಿ ಬೇಕೇ ಬೇಕು ಎಂಬುದನ್ನು ಅರ್ಥೈಸಿಕೊಂಡು ಈ ದಿನ ಪ್ರಯುಕ್ತ ನೀರಿನ ಸಂರಕ್ಷಣೆ-ಅಂತರ್ಜಲ ಹೆಚ್ಚಳಕ್ಕಾಗಿ ಶ್ರಮವಹಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ನೀರಿನ ಮಹತ್ವವನ್ನು ಸಾರುವ ಅನೇಕ ಕಾರ್ಯಕ್ರಮ ಆಯೋಜಿಸಿ ನಿಸರ್ಗದತ್ತವಾಗಿ ನಮಗೆ ದೊರೆತ ಅಮೂಲ್ಯವಾದ ಸಂಪತ್ತುಗಳಲ್ಲಿ ಒಂದಾದ ನೀರಿನ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿಯನ್ನು ತರಲು ಕ್ರಮವಹಿಸಲಾಗಿದೆ. ೨೦೩೦ ರ ವೇಳೆಗೆ ವಿಶ್ವದಲ್ಲಿ ಭಾರತವನ್ನು ಒಂದು ಅಭಿವೃದ್ಧಿ ಹೊಂದಿದ ಮತ್ತು ಸುಸ್ಥಿರವಾದ ರಾಷ್ಟ್ರವನ್ನಾಗಿಸಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ.
ಈ ನಿಟ್ಟಿನಲ್ಲಿ ನಾವು-ನೀವೆಲ್ಲರೂ ಜಲ ಸಂರಕ್ಷಣೆಯತ್ತ ಕಂಕಣಬದ್ದರಾಗಬೇಕಾಗಿದೆ ಎನ್ನುವುದು ನನ್ನದೊಂದು ಕಳಕಳಿಯಾಗಿದೆ.


