ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪುರೋಹಿತ ವರ್ಗಕ್ಕೆ ಪ್ರತ್ಯೇಕ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ಪುರೋಹಿತ ಸಂಘದ ಸದಸ್ಯರು ತಹಸೀಲ್ದಾರ ಅನೀಲ ಬಡಿಗೇರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಸಾವಿರಾರು ಅರ್ಚಕರು, ಪುರೋಹಿತರು ಹಾಗೂ ಅಡಿಗೆ ಕಾರ್ಯದಲ್ಲಿ ತೊಡಗಿರುವವರು ಸದಸ್ಯರಾಗಿದ್ದಾರೆ. ಅವರ ಕುಟುಂಬ ಸದಸ್ಯರನ್ನು ಸೇರಿಸಿ ಒಟ್ಟು ಎಂಟು ಲಕ್ಷಕ್ಕಿಂತ ಹೆಚ್ಚು ಜನರು ಈ ವಲಯಕ್ಕೆ ಸೇರಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪುರೋಹಿತರು, ಅರ್ಚಕರು ಹಾಗೂ ಅಡಿಗೆಯವರನ್ನು ಗುರುತಿಸಿ ಲೇಬರ್ ಕಾರ್ಡ್ ನೀಡುವ ವ್ಯವಸ್ಥೆ ಕಲ್ಪಿಸಿ, ಪ್ರತ್ಯೇಕ ಮಂಡಳಿ ರಚಿಸಿದರೆ ರಾಜ್ಯದ ಸುಮಾರು 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹೆಚ್ಚಿನ ಅನುದಾನ ಮತ್ತು ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಶೀಘ್ರದಲ್ಲೇ ಪ್ರತ್ಯೇಕ ಮಂಡಳಿ ರಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಜೆ ಶ್ರೀನಿವಾಸ್ ಮೂರ್ತಿ ಅವರನ್ನು ಮಂಡಳಿಯ ಅಧ್ಯಕ್ಷರಾಗಿ ಹಾಗೂ ಸತೀಶ್ ಸಿಂಹ ಎಚ್. ಎಸ್ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಮನವಿಯಲ್ಲಿ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವೆಂಕಣ್ಣಾಚಾರ್ಯ ಅಧ್ಯಾಪಕ, ಮುಕುಂದಾಚಾರ್ಯ ನಾಮಣ್ಣಾ, ಪ್ರಸಾದ ಗೋಠೆ, ಶ್ರೀನಿವಾಸ ಮನಗೂಳಿ, ಪ್ರವೀಣ ಕುಲಕರ್ಣಿ, ಅಶೋಖಾಚಾರ್ಯ ಮೈಗೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

