ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೈದ್ಯಕೀಯ ವೃತ್ತಿಯಲ್ಲಿ ಪ್ರ್ಯಾಕ್ಟಿಸ್ ಮಾಡಲು ನ್ಯಾಯಸಮ್ಮತ ಅಂಶಗಳನ್ನು ಗಮನದಲ್ಲಿಡಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಅರುಣ ಚಂ. ಇನಾಮದಾರ ಹೇಳಿದ್ದಾರೆ.
ಶುಕ್ರವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಕಾನೂನು ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ವೈದ್ಯಕೀಯ ವೃತ್ತಿಯಲ್ಲಿ ನ್ಯಾಯಸಮ್ಮತವಾಗಿ ಪ್ರಾಕ್ಟೀಸ ಮಾಡಲು ಐದು ಪ್ರಮುಖ ನ್ಯಾಯಾಂಗ ಕೇಸುಗಳನ್ನು ಅವರು ಉದಾಹರಣೆಯಾಗಿ ನೀಡಿದರು.
ಗ್ರಾಹಕರ ಹಕ್ಕುಗಳು ಸಂಬಂಧ ಭಾರತೀಯ ವೈದ್ಯಕೀಯ ಸಂಘ ವಿರುದ್ಧ ಶಾಂತಾ ಕೇಸ್, ಕ್ರಿಮಿನಲ್ ನಿರ್ಲಕ್ಷ್ಯ ಮಾನದಂಡ ಸಂಬಂಧ ಜಾಕೋಬ್ ಮ್ಯಾಥ್ಯೂ ಪ್ರಕರಣ, ಮಾಹಿತಿಯುಕ್ತ ಒಪ್ಪಿಗೆಕ್ಕೆ ಪೂರಕವಾಗಿ ಸಮಿರಾ ಕೊಹ್ಲಿ ಪ್ರಕರಣ, ಅವಧಿಯ ನಂತರದ ಆರೈಕೆ ಮತ್ತು ದಯಾಮರಣದ ಬಗ್ಗೆ ಇರುವ ಅರುಣಾ ಶಾನ್ಬಾಗ್ ಪ್ರಕರಣ ಹಾಗೂ ಪರಿಹಾರ ಮತ್ತು ಹೊಣೆಗಾರಿಕೆ ಬಗ್ಗೆ ಇರುವ ಕುನಾಲ್ ಸಹಾ ಪ್ರಕರಣಗಳ ಕುರಿತು ಅವರು ಸೂಕ್ತ ವಿವರಣೆ ನೀಡಿದರು. ಅಲ್ಲದೇ, ಇವುಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಸೇವೆ ಮಾಡಬೇಕು ಎಂದು ಹೇಳಿದರು. ವಿವರಿಸಿದರು.
ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯ ನಿರ್ದೇಶಕ ಪ್ರೊ. ಸಿ. ಎಸ್. ಪಾಟೀಲ ಮಾತನಾಡಿ, ವೈದ್ಯಕೀಯ ವೃತ್ತಿ ಒಂದು ಶ್ರೇಷ್ಠ ವೃತ್ತಿಯಾಗಬೇಕೇ ಹೊರತು ಅದು ಒಂದು ವ್ಯವಹಾರವಾಗಬಾರದು. ಕಾನೂನಿನ ಅರಿವು ಹೊಂದಿರಬೇಕು ಎಂದು ಹೇಳಿದರು.
ಸಂಶೋಧನೆ ವಿಭಾಗದ ಮುಖ್ಯಸ್ಥ ಡಾ.ರೇವಯ್ಯ ಒಡೆಯರ ಪ್ರಾಸ್ತಾವಿಕವಾಗಿ ಮಾತನಾಡಿ, 2005 ರಲ್ಲಿ ಪ್ರಾರಂಭವಾದ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಕಾನೂನಿನಲ್ಲಿ ಹೊಸಹೊಸ ಆವಿಷ್ಕಾರಗಳು ಹಾಗೂ ಅನ್ವೇಷಣೆಯನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಬಳ್ಳಾರಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈ ಸಿ ಮಾತನಾಡಿ, ಬೌದ್ಧಿಕ ಸ್ವತ್ತು ಹಕ್ಕು ಮತ್ತು ವೈದ್ಯಕೀಯ ಸ್ವಾಯತ್ತತೆಯ ನಡುವಿನ ಸಮತೋಲನ ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಗೋವಾದ ವಿ. ಎಂ. ಸಲ್ಗವ್ಕರ ಕಾಲೇಜ್ ಆಫ್ ಲಾ ಸಹಪ್ರಾಧ್ಯಾಪಕ ಡಾ. ಬಾಬುಗೌಡ ಪಾಟೀಲ, ಅವರು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ- 2019 ರ ಪಾತ್ರ ಕುರಿತು ಮಾಹಿತಿ ನೀಡಿದರು. ಗದಗ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ಪವನ ಕುಮಾರ ಪಾಟೀಲ ಮಾತನಾಡಿ, ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಕಾನೂನಿನ ಸುಧಾರಣೆ: ನಿಯಂತ್ರಣಾತ್ಮಕ ದೃಷ್ಟಿಕೋನ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜಿನ ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಈ ವಿಚಾರ ಸಂಕೀರ್ಣದಲ್ಲಿ ಹಲವಾರು ಸ್ಪರ್ಧಿಗಳು ಪ್ರಬಂಧ ಮಂಡಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಆರ್. ಜಿ. ಕುಲಕರ್ಣಿ ಸ್ವಾಗತಿಸಿದರು. ಸನಾ ಕೌಸರ್ ಮೊಘಲಾಯಿ ವಂದಿಸಿದರು. ಲಾವಣ್ಯ ಕುಲಕರ್ಣಿ, ನಿಕಿತಾ ನಿರೂಪಿಸಿದರು.

