ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರಮಾತ್ಮನ ಪೂಜೆ ಮಾಡುವ ಕೈಗಳಿಗಿಂತ, ಅಲ್ಲಾಹುನನ್ನ ನೆನೆದು ನಮಾಜ ಮಾಡುವದಕ್ಕಿಂತ ಬಡವರಿಗೆ ದಾನ ಮಾಡಿ ಅಲ್ಲಾಹುನನ್ನ ಕಾಣುವ ಕೈಗಳು ದೊಡ್ಡದು ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಮನಿಯಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಬಡ ಮತ್ತು ನಿರ್ಗತಿಕರಿಗೆ ರಂಜಾನ್ ಕಿಟ್ ವಿತರಿಸುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಾನು ಮಾತ್ರ ಹಬ್ಬವನ್ನು ಆಚರಿಸದೇ ತನ್ನವರೂ ಹಬ್ಬವನ್ನು ಆಚರಿಸಬೇಕು ಎಂದು ಸಾಕಷ್ಟು ವರ್ಷಗಳಿಂದ ಕಿಟ್ ವಿತರಿಸುವ ಮೂಲಕ ಮಾನವೀಯತೆಗೆ ಪಾತ್ರರಾದ ಅಯೂಬ ಮನಿಯಾರ್ ಅವರ ಕಾರ್ಯ ಶ್ಲಾಘನೀಯ ಎಂದರು.
ವಾಗ್ಮಿ ಲಾಲ್ಹುಸೇನ ಕಂದಗಲ್ಲ ಮಾತನಾಡಿ, ಬಡವರಿಗೆ ದಾನ ಮಾಡುವದು ಉಪಕಾರ ಅಲ್ಲ, ಭಗವಂತ ನೀಡಿದ ಅವಕಾಶ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರೋದು ಅಯೂಬ್ ಮನಿಯಾರ್ ಮಾತ್ರ ಎಂದರು.
ಕಾರ್ಯಕ್ರಮದ ರೂವಾರಿ ಅಯೂಬ್ ಮನಿಯಾರ್ ಮಾತನಾಡಿ ಭೂಮಿಯಲ್ಲಿ ಕೆಲ ವರ್ಷ ಬದುಕಲು ಕೋಟ್ಯಾಂತರ ಬೆಲೆ ಬಾಳುವ ಮನೆ ಕಟ್ಟಿಸುವ ಬದಲು ಶಾಶ್ವತವಾಗಿ ಬದುಕುವ ೩-೬ ಅಡಿ ಭೂಮಿಯನ್ನು ಶೃಂಗಾರಗೊಳಿಸಲು ಇಂತಹ ಪುಣ್ಯದ ಕೆಲಸಗಳನ್ನು ಮಾಡಬೇಕು. ನನ್ನ ದೇಹದಲ್ಲಿ ಉಸಿರು ಇರುವ ವರೆಗೂ ನಾನು ಈ ಸೇವಾ ಕಾರ್ಯವನ್ನು ಮಾಡುತ್ತಲೇ ಸಾಗುವೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್.ಚೌಕಿಮಠ, ಸಿಪಿಐ ಮೊಹಮ್ಮದ ಫಸಿಯುದ್ಧಿನ್ ಮಾತನಾಡಿದರು. ವಿಜಯಪುರದ ಬನಶ್ರೀ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ರೂಪಸಿಂಗ್ ಲೋಣಾರಿ, ಪ್ರಥಮ ದರ್ಜೆ ಗುತ್ತಿಗೆದಾರ ಶಂಕರಗೌಡ ಹೊಸಮನಿ, ವಿ.ಎಸ್.ಸಾಲೀಮಠ ವಕೀಲರು, ದಾದಾ ಎತ್ತಿನಮನಿ, ಅಫ್ತಾಬ್ ಮನಿಯಾರ್, ಮಹೆಬೂಬ ನಾಲತವಾಡ, ಹಾಜಿಮಲಿಂಗ್ ಎಕಿನ್ ಸೇರಿದಂತೆ ಹಲವರು ಇದ್ದರು.

