ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ವನ್ಯಜೀವಿ ಮತ್ತು ಮಾನವ ಸಂಘರ್ಷ ಹೊಸದೇನು ಅಲ್ಲ. ಈ ಹಿಂದಿನಿಂದಲೂ ಇದೆ. ಆದರೆ ತಂತ್ರಜ್ಞಾನ ಮುಂದುವರೆದಿರುವ ಜೊತೆಗೆ ಮಾಧ್ಯಮಗಳು ಜಾಸ್ತಿಯಾಗಿ ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಿರುವುದರಿಂದ ಸಮಸ್ಯೆ ದೊಡ್ಡದಾಗಿ ಕಾಣಿಸುತ್ತೆ. ಯಾವ ಸಮಸ್ಯೆಗಳು ಕೂಡ ದೊಡ್ಡದಲ್ಲ, ಅರಣ್ಯ ಇಲಾಖೆ ಜೊತೆಗೆ ಸ್ಥಳೀಯರ ಸಹಕಾರವಿದ್ದರೆ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬಹುದು ಎಂದು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರ ಹೇಳಿದರು.
ತಾಲೂಕಿನ ಕೆ. ಎಡತೊರೆ ಗ್ರಾಮದಲ್ಲಿ ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಿಭಾಗ, ಹೆಚ್ ಡಿ ಕೋಟೆ ಉಪ ವಿಭಾಗ, ಹಾರ್ಟ್ ಸಂಸ್ಥೆ ಮೈಸೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಜನ-ಜಾನುವಾರುಗಳ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಮಗೆ ಸಂಬಳ ಬರಬಹುದು. ಆದರೆ ಸಂಬಳಕಷ್ಟೇ ಕರ್ತ್ಯವ್ಯ ನಿರ್ವಹಿಸುವುದಿಲ್ಲ. ಅರಣ್ಯ ಸಂರಕ್ಷಣೆ ಜೊತೆಗೆ ಮಾನವ ರಕ್ಷಣೆ ಕೂಡ ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಇಲಾಖೆಯ ಕೆಲಸವನ್ನು ಮತ್ತು ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಸಿಬ್ಬಂದಿ ಕೊರತೆ ಇರುವುದರಿಂದ ಒಬ್ಬರೇ ಏಕಕಾಲದಲ್ಲಿ ಇಬ್ಬರು, ಮೂವರ ಕೆಲಸ ಮಾಡಬೇಕಾಗುತ್ತೆ. ಇಲಾಖೆಯ ಅನ್ಯ ಕೆಲಸಗಳ ನಿಮಿತ್ತ ಮೇಲಧಿಕಾರಿಗಳು ಘಟನಾ ಸ್ಥಳಕ್ಕೆ ತಕ್ಷಣ ಹೋಗಲು ಸಾಧ್ಯವಾಗದೆ ಇರಬಹುದು. ಆದರೆ ಗಂಭೀರ ಪ್ರಕರಣಗಳಲ್ಲಿ ಎಸಿಎಫ್, ಡಿಸಿಎಫ್ , ಆರ್ ಎಫ್ಒ ಸ್ಥಳದಲ್ಲಿ ಹಾಜರಿರುತ್ತಾರೆ ಎಂದು ಸುಮಿತ್ರ ಹೇಳಿದರು.
ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಮನುಷ್ಯನ ಆರೋಗ್ಯ ಚೆನ್ನಾಗಿದ್ದರೆ ಕುಟುಂಬ, ಸಮಾಜ, ದೇಶ ಸದೃಢವಾಗಿರುತ್ತೆ. ಹಾಗೆಯೇ ಜನ-ಜಾನುವಾರುಗಳ ಆರೋಗ್ಯ ಚೆನ್ನಾಗಿದ್ದರೆ, ಮನುಷ್ಯನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ. ಬೆಳಗ್ಗೆಯಿಂದ ಸಂಜೆತನಕ ದುಡಿಯುವ ರೈತರಿಗೆ, ತಮ್ಮ ಆರೋಗ್ಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ನಾವೇ ಅವರ ಮನೆ ಬಾಗಿಲಿಗೆ ಹೋಗಿ ಉಚಿತವಾಗಿ ಚಿಕಿತ್ಸೆ ನೀಡಿ ಅವರ ಕಾಳಜಿವಹಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೈಲ್ಡ್ ಲೈಫ್ ಕನ್ಸರ್ವೇಶನ್ ಫೌಂಡೇಶನ್ ರಾಜಕುಮಾರ್ ದೇವರಾಜೇ ಅರಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ರವಿಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರವಿಕುಮಾರ್, ಗ್ರಾಮದ ಗುಡಿಗೌಡರು ಕುಮಾರ್, ಯಜಮಾನರಾದ ಲೋಕೇಶ್, ಮಹೇಶ್, ನಂದೀಶ್, ಕುಮಾರ್, ಸುಭಾಷ್, ಚಂದ್ರ ಹೆಚ್. ಎಲ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ವಿವೇಕ್, ರೈತ ಸಂಘದ ಅಧ್ಯಕ್ಷ ಗಂಗಾಧರ್, ನಂಜುಂಡ ಸ್ವಾಮಿ, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಲೀಲಾವತಿ, ಸೋಮೇಶ್ ಇದ್ದರು.
“ಇಲಿ ಹಿಡಿದಷ್ಟು ಸುಲಭವಲ್ಲ ಹುಲಿ ಹಿಡಿಯುವುದು. ಅದಕ್ಕೆ ಇಲಾಖೆಯಲ್ಲಿ ಇತಿಮಿತಿ ಇರುತ್ತೆ. ಕೆಲ ವಿಧಿ ವಿಧಾನ ಇರುತ್ತೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಮಾನವ-ಪ್ರಾಣಿಸಂಘರ್ಷ ತಡೆಗೆ ನಮ್ಮ ಜೊತೆ ಕೈಜೋಡಿಸಬೇಕು. ನಮಗೆ ಸಹಕಾರ ನೀಡಬೇಕು.”
– ರವಿಕುಮಾರ್
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

