ಗ್ರಾಹಕರ ಪರದಾಟ, ಟ್ರಾಯ್ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ಜಿಯೋ ಮೊಬೈಲ್ ನೆಟ್ವರ್ಕ್ ಸರಿಯಾಗಿ ಲಭ್ಯವಾಗದೆ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕರೆ ಸಂಪರ್ಕವಾಗದೇ ಇರುವದು, ಸಂಪೂರ್ಣವಾಗಿ ನೆಟ್ವರ್ಕ್ ಕಾಣಿಸದಿರುವುದರಿಂದ ಹಾಗೂ ಕೆಲವೊಮ್ಮೆ ಇಂಟರ್ನೆಟ್ ಸೇವೆ ಬಹಳ ನಿಧಾನವಾಗಿರುವುದು ಜಿಯೋ ಗ್ರಾಹಕರು ದಿನನಿತ್ಯ ಪರದಾಡುವಂತಾಗಿದೆ.
ಪಟ್ಟಣದ ಹಲವು ಪ್ರದೇಶಗಳಲ್ಲಿ ಮೊಬೈಲ್ ಸಿಗ್ನಲ್ ಬಹುತೇಕ ಸಮಯದಲ್ಲಿ ಇಲ್ಲದಿರುವುದರಿಂದ ಆನ್ಲೈನ್ ವ್ಯವಹಾರ, ಬ್ಯಾಂಕಿಂಗ್ ಸೇವೆಗಳು, ವಿದ್ಯಾರ್ಥಿಗಳ ಆನ್ಲೈನ್ ಅಧ್ಯಯನ, ವ್ಯಾಪಾರ ವಹಿವಾಟು ಹಾಗೂ ದೈನಂದಿನ ಸಂಪರ್ಕ ವ್ಯವಸ್ಥೆಗಳಿಗೆ ದೊಡ್ಡ ಮಟ್ಟದಲ್ಲಿ ಅಡಚಣೆ ಉಂಟಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ವಿಶೇಷವಾಗಿ ವ್ಯಾಪಾರಸ್ಥರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಮಸ್ಯೆಯ ಬಗ್ಗೆ ಜಿಯೋ ಕಂಪನಿ ಅಧಿಕಾರಿಗಳಿಗೆ ಹಲವಾರು ಬಾರಿ ಮಾಹಿತಿ ನೀಡಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೆ ಮಾಡಿದಾಗಲೂ ಅಥವಾ ದೂರು ನೀಡಿದಾಗಲೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಾವಿರಾರು ರೂಪಾಯಿ ಹಣ ಪಾವತಿಸಿ ಸೇವೆ ಪಡೆಯುತ್ತಿದ್ದರೂ ಸಮರ್ಪಕ ನೆಟ್ವರ್ಕ್ ಸಿಗದಿರುವುದು ಗ್ರಾಹಕರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕಂಪನಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮೊದಲು ಇರುವ ಜಿಯೋ ಟಾವರ್ ಜಾಗದ ಮಾಲಿಕರಿಗೆ ಬಾಡಿಗೆ ನೀಡದಿರುವದು ಒಂದು ಕಾರಣವಾಗಿದೆ ಮತ್ತು ಜಿಯೋ ಟಾವರ್ ಮಾಲಿಕರ ಜೊತೆಗಿನ ಒಪ್ಪಂದ ಮುಗಿದಿರುವದು ಇನ್ನೊಂದು ಕಾರಣವಾಗಿರುವದರಿಂದ ಈ ಹಿನ್ನೆಲೆಯಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಸ್ಥಿಕೆ ವಹಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಸಾವಿರಾರು ರೂಪಾಯಿ ಖರ್ಚುಮಾಡಿ ಜಿಯೊದ ಒಂದು ವರ್ಷದ ಅವಧಿಗೆ ರೀಚಾರ್ಜಮಾಡಿದವರ ಗತಿ ದೇವರೆಬಲ್ಲ ಎನ್ನುವಂತೆ ಇತ್ತ ಪೊರ್ಟ ಮಾಡಿಕೊಳ್ಳಲಿಕ್ಕಾಗದೆ ಅತ್ತ ಹಣಮರಳಿ ಬಾರದೆ ಅದೆ ಸಂಪರ್ಕ ಅನಿವಾರ್ಯವಾಗಿದೆ. 15 ವರ್ಷದ ಮೊದಲು ಗ್ರಾಹಕರು ಮೊಬೈಲ್, ಮಾಳಿಗೆಯ ಮೇಲೆ ನಿಂತು ನೆಟ್ವರ್ಕಗಾಗಿ ಕೈ ಮೇಲೆ ಎತ್ತಿ ನೆಟ್ವರ್ಕ ಪಡೆಯಲು ಪರದಾಡುತ್ತಿರುವದು ಚಡಚಣ ತಾಲೂಕಿನಲ್ಲಿ ದಿನನಿತ್ಯ ಕಂಡುಬರುವ ದೃಶ್ಯವಾಗಿದೆ.
ಅಗತ್ಯವಿದ್ದರೆ ರಾಜ್ಯ ಸರ್ಕಾರ ಅಥವಾ ಗ್ರಾಹಕರ ನ್ಯಾಯಾಲಯ (ಕನ್ಸ್ಯೂಮರ್ ಕೋರ್ಟ್) ಕೂಡ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಜಿಯೋ ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾಹಕರ ನ್ಯಾಯಾಲಯ (ಕನ್ಸ್ಯೂಮರ್ ಕೋರ್ಟ್)ಗೆ ಜಿಯೋ ವಿರುದ್ಧ ಹೇಗೆ ಪ್ರಕರಣ ದಾಖಲಿಸಬೇಕು ಎಂಬುದು ತಿಳಿಸಲು ಅನೇಕ ಗ್ರಾಹಕರು ಪತ್ರಿಕೆಯ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ತಕ್ಷಣವೇ ಜಿಯೋ ಕಂಪನಿ ಅಧಿಕಾರಿಗಳು ಚಡಚಣ ಪಟ್ಟಣದಲ್ಲಿ ಉಂಟಾಗಿರುವ ನೆಟ್ವರ್ಕ್ ಸಮಸ್ಯೆಯನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಹಕರು ಒಟ್ಟಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

