ಇರಾನ್ ಮೇಲಿನ ಯುದ್ಧದ ಪರಿಣಾಮ | ತಾಳೆ, ಸೂರ್ಯಕಾಂತಿ ಎಣ್ಣೆ 15 ದಿನಕ್ಕಾಗುವಷ್ಟು ದಾಸ್ತಾನು
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ ಜಮಖಂಡಿ: ಯುದ್ಧದ ಪರಿಣಾಮ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಯುದ್ದದಿಂದಾಗಿ ಲಭ್ಯತೆ ಇಲ್ಲ ಎನ್ನಲಾಗ್ತಿದೆ. ಈಗ ಕೇವಲ 15 ದಿನದ ದಾಸ್ತಾನು ಇದೆ ಎನ್ನುತ್ತಿರುವ ವ್ಯಾಪಾರಿಗಳು, ಇನ್ನೊಂದೆಡೆ ಭಾರಿ ಬೆಲೆ ಏರಿಕೆ ಮಾಡಿದ್ದಾರೆ.
ವಿದೇಶಗಳಿಂದ ಕಚ್ಚಾ ತೈಲವಾಗಿ ಆಮದು ಮಾಡಿಕೊಂಡು, ಇಲ್ಲಿ ಶುದ್ಧೀಕರಿಸಿ ಹಾಗೂ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸನ್ಫ್ಲವರ್ ಎಣ್ಣೆಯ ಕಚ್ಚಾ ತೈಲವನ್ನು ಉಕ್ರೇನ್ ಹಾಗೂ ಕೆಲವು ಯೂರೋಪಿನ ರಾಷ್ಟ್ರಗಳಿಂದ ತರಲಾಗುತ್ತದೆ
ಸನ್ಫ್ಲವರ್ ಎಣ್ಣೆ ಲೀಟರ್ಗೆ 165 ರೂ. ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದಿಂದಾಗಿ ದೇಸಿ ಮಾರುಕಟ್ಟೆ ಮೇಲೂ ಪರಿಣಾಮ ಬೀಳಲು ಆರಂಭವಾಗಿದೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊರತೆ ಉಂಟಾಗಿ ಕೃತಕ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ರಾಜ್ಯದಲ್ಲಿ ತಾಳೆ (ಪಾಮ್) ಹಾಗೂ ಸೂರ್ಯಕಾಂತಿ ಎಣ್ಣೆಗಳ ಹೆಚ್ಚಿನ ಪ್ರಮಾಣವು ವಿದೇಶಗಳಿಂದ ಕಚ್ಚಾ ತೈಲವಾಗಿ ಆಮದು ಮಾಡಿಕೊಂಡು, ಇಲ್ಲಿ ಶುದ್ಧೀಕರಿಸಿ ಹಾಗೂ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಪಾಮ್ ಎಣ್ಣೆಯನ್ನು ಮುಖ್ಯವಾಗಿ ಮಲೇಶಿಯಾ ಹಾಗೂ ಇಂಡೋನೇಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸನ್ಫ್ಲವರ್ಎಣ್ಣೆಯ ಕಚ್ಚಾ ತೈಲವನ್ನು ಉಕ್ರೇನ್ ಹಾಗೂ ಕೆಲವು ಯೂರೋಪಿನ ರಾಷ್ಟ್ರಗಳಿಂದ ತರಲಾಗುತ್ತದೆ. ಆದರೆ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಹಾಗೂ ಸಾಗಾಟದ ಅಡಚಣೆಗಳಿಂದಾಗಿ ಈ ಕಚ್ಚಾ ತೈಲದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಲಕ್ಷಣ ಕಂಡುಬಂದಿದೆ. ಇದರಿಂದಲೇ ಸದ್ಯ ಮಾರುಕಟ್ಟೆಯಲ್ಲಿ ಎಣ್ಣೆ ಬೆಲೆ ಏರಿಕೆಯ ಜತೆಗೆ ಬೇಡಿಕೆ ಹೆಚ್ಚಳವೂ ಕಂಡುಬರುತ್ತಿದೆ.
ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ
ಕಳೆದ ವಾರದಲ್ಲಿ ಸನ್ಫ್ಲವರ್ಎಣ್ಣೆ ಹಾಗೂ ಪಾಮ್ ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹತ್ತು ದಿನದ ಹಿಂದೆ ಸನ್ಫ್ಲವರ್ಎಣ್ಣೆ ಲೀಟರ್ಗೆ 165 ರೂ.ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಪಾಮ್ ಎಣ್ಣೆ ಲೀಟರ್ಗೆ 134 ರೂ. ಇದ್ದದ್ದು ಈಗ 146 ರೂ.ಗೆ ತಲುಪಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಯುದ್ಧ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ದಾಸ್ತಾನು ಕೇವಲ 15 ದಿನ
ಪ್ರಾದೇಶಿಕ ವಿತರಣೆ ಕೇಂದ್ರಗಳಲ್ಲಿ ಸದ್ಯ 100 ಟನ್ ಸನ್ಫ್ಲವರ್ಎಣ್ಣೆ, 120 ಟನ್ ಪಾಮ್ ಎಣ್ಣೆ ದಾಸ್ತಾನು ಇದ್ದು, ಇದು ಗರಿಷ್ಠ 15 ದಿನಗಳವರೆಗೆ ಸಾಕಾಗಬಹುದು ಎನ್ನುತ್ತವೆ ಮೂಲಗಳು.
ಕೆಲ ವರ್ಷಗಳ ಹಿಂದೆ ಉಕ್ರೇನ್-ರಷ್ಯಾ ಯುದ್ಧದ ಸಂದರ್ಭ ಸನ್ಫ್ಲವರ್ ಎಣ್ಣೆಯ ಬೆಲೆ ಲೀಟರ್ಗೆ 200 ರೂ.ದಾಟಿತ್ತು. ಈಗಲೂ ಅಂತಹ ಪರಿಸ್ಥಿತಿ ಉಂಟಾಗುವ ಭೀತಿ ಮಾರುಕಟ್ಟೆಯಲ್ಲಿ ವ್ಯಕ್ತವಾಗಿದೆ.
” ಒಂದೆಡೆ ಸಿಲಿಂಡರ್ ಅಭಾವ ಉಂಟಾಗುತ್ತಿದೆ. ಮತ್ತೊಂದೆಡೆ ಸೂರ್ಯಕಾಂತಿ, ತಾಳೆ ಎಣ್ಣೆ ಬೆಲೆಯೂ ಏರಿಕೆಯಾಗುತ್ತಿದೆ. ಹಾಗಾಗಿ, ನಮ್ಮ ಹೋಟೆಲ್ ಗಳಲ್ಲಿ ಮತ್ತು ದಾಬಾಗಳಲ್ಲಿ ಹೆಚ್ಚು ಬೇಡಿಕೆ ಇರುವ ಉಪಾಹಾರವನ್ನು ಮಾತ್ರ ತಯಾರಿಸುವತ್ತ ಗಮನಹರಿಸುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ನಮಗೆ ಅಗತ್ಯವಿರುವಷ್ಟು ಎಣ್ಣೆಯನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.”
– ಹನಮಂತ ಅಂಬಿ
ದಾಬಾ ಮಾಲಿಕ, ಚಿಕ್ಕಪಡಸಲಗಿ.

