*ಉದಯರಶ್ಮಿ ದಿನಪತ್ರಿಕೆ*
ಸರಗೂರು: 2028ಕ್ಕೆ ರಾಜ್ಯದಲ್ಲಿ NDA ಅಧಿಕಾರಕ್ಕೆ ಬರುತ್ತೆ. ಮೊದಲ ಎರಡೂವರೆ ವರ್ಷ ವಿ. ಸೋಮಣ್ಣ ಮುಖ್ಯಮಂತ್ರಿ ಆಗ್ತಾರೆ, ಬಾಕಿ ಎರಡೂವರೆ ವರ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಆಗ್ತಾರೆ. ನನ್ನ ಭವಿಷ್ಯವಾಣಿ ಯಾವುದೇ ಕಾರಣಕ್ಕೂ ಸುಳ್ಳಾಗಲ್ಲ ಎಂದು ನಂಜನಾಥಪುರದ ಸಿಂಗಪಟ್ಟಣ ಶ್ರೀ ಮಾರಮ್ಮ ದೇವಸ್ಥಾನದ ಪೂಜಾರಿ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ನಂಜನಾಥಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉದ್ಭವಮೂರ್ತಿ ಸಿಂಗಪಟ್ಟಣ ಶ್ರೀ ಮಾರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. 2028ಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದೆ ನಿಂತು ಪ್ರಚಾರ ಮಾಡಿದ್ರೆ, ಬಿಜೆಪಿ ಸುಲಭವಾಗಿ ಅಧಿಕಾರಕ್ಕೆ ಬರುತ್ತೆ. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ರೆ 117 ಸ್ಥಾನ ಗೆಲ್ಲುತ್ತೆ. ಒಂದು ವೇಳೆ ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸಿದರೆ 135 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೆ. ಮೊದಲ ಎರಡೂವರೆ ವರ್ಷ ಅವಧಿಗೆ ಹೈಕಮಾಂಡ್ ನಾಯಕರ ಕೃಪಾಕಟಾಕ್ಷದಿಂದ ವಿ. ಸೋಮಣ್ಣ ಮುಖ್ಯಮಂತ್ರಿ ಆಗ್ತಾರೆ. ಉಳಿದ ಎರಡೂವರೆ ವರ್ಷ ಅವಧಿಗೆ ಬಿ. ವೈ.ವಿಜಯೇಂದ್ರ ಮುಖ್ಯಮಂತ್ರಿ ಆಗ್ತಾರೆ. ಪಕ್ಷದಲ್ಲಿರುವ ಹಿರಿಯ ನಾಯಕರು ಬಿ.ವೈ. ವಿಜಯೇಂದ್ರ ಸಿಎಂ ಆಗುವುದಕ್ಕೆ ವಿರೋಧ ವ್ಯಕ್ತಪಡಿಸಬಹುದು. ಆದರೆ ಯಡಿಯೂರಪ್ಪ ಹೈಕಮಾಂಡ್ ಮೇಲೆ ಒತ್ತಡ ಹೇರಿ ಪುತ್ರ ವಿಜಯೇಂದ್ರನಿಗೆ ಮುಖ್ಯಮಂತ್ರಿ ಸ್ಥಾನ ಕೊಡಿಸುತ್ತಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕೊಡಬಹುದು. ಇಲ್ಲವಾದಲ್ಲಿಕೇಂದ್ರ ಮಂತ್ರಿ ಸ್ಥಾನ ಕೊಡುವ ಸಾಧ್ಯತೆ ಇದೆ ಎಂದು ಪೂಜಾರಿ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.
*ಸಿಎಂ ಮಾಡದಿದ್ದರೆ ಬಿಜೆಪಿಗೆ ಡಿಕೆಶಿ*
ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಸೂತ್ರ ನಡೆದಿರುವುದು ನಿಜ. ಒಪ್ಪಂದದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಯದಿದ್ದರೆ, ಡಿಸಿಎಂ ಡಿ.ಕೆ ಶಿವಕುಮಾರ್ 2028 ಚುನಾವಣೆ ಬಳಿಕ ಅಂದರೆ 2029ಕ್ಕೆ ಬಿಜೆಪಿಗೆ ಹೋಗ್ತಾರೆ. ಆದರೆ ಅಲ್ಲಿ ಅವರಿಗೆ ಸಿಎಂ ಸ್ಥಾನ ಕೊಡುವುದಿಲ್ಲ. ಬದಲಾಗಿ ಕೇಂದ್ರದಲ್ಲಿ ಮಂತ್ರಿ ಮಾಡ್ತಾರೆ ಎಂದು ಪೂಜಾರಿ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.

