ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿ ಕೊಡುವಂತೆ ಅಖಂಡ ರೈತ ಸಂಘ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಕಾನೂನು ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರವನ್ನು ಸರ್ಕಾರ ನೀಡುವ ಮೂಲಕ ಜಮೀನು ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಬಸವನಬಾಗೇವಾಡಿ ತಾಲೂಕಾ ಅಧ್ಯಕ್ಷ ಉಮೇಶ ವಾಲೀಕಾರ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀನು ದಾರಿ ಸಮಸ್ಯೆ ರಾಜ್ಯಾದಂತ ರೈತರಿಗೆ ದೊಡ್ಡ ತಲೆನೋವಾಗಿದೆ. ದಿನನಿತ್ಯ ಹಳ್ಳಿಗಳಲ್ಲಿ ಹೊಲಗಳ ದಾರಿಗಾಗಿ ಕಲಹಗಳು ನಡೆಯುತ್ತಲೆ ಇವೆ. ಆದರೆ ಸರ್ಕಾರಿ ಮಾತ್ರ ಅದಕ್ಕೂ ನಮಗೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಮೌನ ವಹಿಸಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರೈತರು ದಾರಿಗಾಗಿ ಹೊಡದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಮಾಮುಲಾಗಿಬಿಟ್ಟಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಇದು ಸಿವ್ಹಿಲ್ ಸ್ವರೂಪದ ಪ್ರಕರಣ ಇರುವುದರಿಂದ ರೈತರು ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುವುದು ಸಾಮಾನ್ಯವಾಗಿದೆ. ನ್ಯಾಯಾಲಯದ ಮೆಟ್ಟಿಲು ಏರಿದರೆ ಪ್ರಕರಣ ಇತ್ಯರ್ಥವಾಗಲು ಕನಿಷ್ಠ 10 ರಿಂದ 12 ವರ್ಷಗಳ ಕಾಲ ಬೇಕು. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಸಮಸ್ಯೆ ಇತ್ಯರ್ಥವಾಗುವರೆಗೂ ಜಮೀನು ಪಾಳು ಬೀಳುತ್ತವೆ. ಅಲ್ಲಿಯವರೆಗೆ ರೈತ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದರು.
ಅನುಭೋಗದ ಹಕ್ಕು ಅಧಿನಿಯಮ 1882ರ ಪ್ರಕಾರ ಯಾವ ರೈತ ನಿರಂತರವಾಗಿ ಅದೇ ದಾರಿಯನ್ನು ಬಳಸಿ ತಮ್ಮ ಜಮೀನುಗಳಿಗೆ ತೆರಳುತ್ತಿದ್ದರೆ ಅದನ್ನು ವಹಿವಾಟು ದಾರಿ ಎಂದು ಪರಿಗಣಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಿದ್ದರೂ ಸಹ ತಹಸೀಲ್ದಾರರು ದಾರಿ ಸಮಸ್ಯೆ ಬಗೆಹರಿಸುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಿ ಸುಗ್ರಿವಾಜ್ಞೆ ಹೊರಡಿಸುವ ಮೂಲಕ ದಾರಿ ಸಮಸ್ಯೆಗೆ ಅಂತ್ಯ ಹಾಡಬೇಕು. ಸರ್ಕಾರವು ದಾರಿ ಇಲ್ಲದ ರೈತರಿಗೆ ಪ್ರತಿ ವರ್ಷ ಪರಿಹಾರ ಕೊಡಬೇಕು. ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ರೈತ ಸಂಘವು ರಾಜ್ಯಾದ್ಯಂತ ಗಂಭೀರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಲಂಕೇಶ ತಳವಾರ, ವಿಠ್ಠಲ ಬಿರಾದಾರ, ಹಣಮಂತ್ರಾಯ ಹಂದ್ರಾಳ, ಕಲ್ಲಪ್ಪ ಕಾಳಗಿ ಇದ್ದರು.

