40 ನೇ ಪುಣ್ಯಸ್ಮರಣೆಯ ಸಮಾರೋಪ | 7 ದಿನಗಳ ಜಾತ್ರೆ ಸಂಪನ್ನ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಜೇವೂರಿನ ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿಯ 40ನೇ ಪುಣ್ಯರಾಧನೆ ಪ್ರಯುಕ್ತ ಕೊನೆಯ ದಿನವಾದ ಬುಧವಾರ ರೇವಣಸಿದ್ಧೇಶ್ವರ ಸ್ವಾಮೀಜಿಯವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಮತ್ತು ನಂದಿಕೋಲ ಉತ್ಸವದೊಂದಿಗೆ ಆನೆ ಅಂಬಾರಿಯ ಮೇಲೆ ರೇವಣಸಿದ್ಧೇಶ್ವರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಜೇವೂರಿನ ಹಠಯೋಗಿ ಶ್ರೀ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದಾರೆ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶ್ರೀಗಳು ಹೇಳಿದರು.
ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗದಗದ ಅಸುಂಡಿಯ ಮಾತೊಶ್ರೀ ಮೈತ್ರಾ ದೇವಿ ಅವರು ಮಾತನಾಡಿ ಮಹಾನ್ ತ್ಯಾಗಮಯಿ ಯೋಗಿಗಳ ಪುಣ್ಯರಾಧನೆಯ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ, ಈ ಮಠದಲ್ಲಿ ಪ್ರತಿ ವರ್ಷ ನಡೆಯುವ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು ಮನುಷ್ಯರ ಭಾವನೆಗಳನ್ನು ಶುದ್ದಿಕರಣಗೊಳಿಸಿ ಸನ್ಮಾರ್ಗದ ದಾರಿ ತೋರಿಸುತ್ತಿವೆ ಎಂದರು.
ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಚೀಟಗುಪ್ಪ ಚಾಂಗಲೇರಾದ ಮರುಳಾಧ್ಯ ಶಿವಾಚಾರ್ಯರು ಹಾಗೂ ಗುರುಲಿಂಗ ಶಿವಾಚಾರ್ಯ, ಮುಗಳಖೋಡ ಕೋಳಿಗುಡ್ಡ ಶಾಖಾ ಮಠದ ಪ್ರಭುದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೇವೂರಿನ ಹಠಯೋಗಿ ರೇವಣಸಿದ್ಧೇಶ್ವರರು ಈ ಪುಣ್ಯಭೂಮಿಯಲ್ಲಿ ಹಲವಾರು ಪವಾಡಗಳನ್ನು ಮಾಡಿ ಬಡವರಿಗೆ ಶ್ರೀಮಂತಿಕೆ ದೊರಕಿಸಿ,ಬಂಜೆಗೆ ಮಕ್ಕಳನ್ನು ಕರುಣಿ ಹೀಗೆ ಹತ್ತು ಹಲವಾರು ಮಹಿಮೆಯನ್ನು ತೋರಿದ್ದಾರೆ. ಅವರ 40ನೇ ಪುಣ್ಯರಾಧನೆಯಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಲೂ ಅವರ ಅಧ್ಯಾತ್ಮಿಕ ದಿವ್ಯ ಶಕ್ತಿ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೇವೂರ ಜಾತ್ರಾ ಕಮೀಟಿ ಸದಸ್ಯರು ಹಾಗೂ ಗ್ರಾ.ಪಂ. ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಧರ್ಮಸಭೆ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡು ಶೋಭೆ ತಂದರು.

