ಕೊಲ್ಹಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬೃಹತ್ ಹಿಂದೂ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಹುಟ್ಟು ಇಲ್ಲದ, ಸಾವು ಬರದ ಮೃತ್ತ್ಯುಂಜಯವಾದ ಧರ್ಮವೇ ಸನಾತನ ಹಿಂದೂ ಧರ್ಮವಾಗಿದ್ದು, ಇದು ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಸಿಂಧೂ ನಾಗರಿಕತೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಮುಖ ಧಾಮೋದರಜಿ ಹೇಳಿದರು.
ಪಟ್ಟಣದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಘಟಕದ ವತಿಯಿಂದ ಆಯೋಜಿಸಲಾದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಬೌದ್ಧಿಕ ಪ್ರಮುಖರಾಗಿ ಮಾತನಾಡಿದ ಅವರು, ಭಾರತಭೂಮಿ ತ್ಯಾಗ, ಆಶ್ರಯ ಮತ್ತು ಸಂಸ್ಕಾರ ನೀಡುವ ಪವಿತ್ರ ನೆಲವಾಗಿದ್ದು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿದೆ ಎಂದರು.
ಗುರು ಪರಂಪರೆ ಹಾಗೂ ಧರ್ಮ ಮಾರ್ಗದ ಮೂಲಕ ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆಯಿಂದ ಜ್ಞಾನ, ಆರೋಗ್ಯ ಹಾಗೂ ವಿಜ್ಞಾನ ತಿಳುವಳಿಕೆಯನ್ನು ನೀಡುವ ಶೈಕ್ಷಣಿಕ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ದೊರಕುವಂತಾಗಬೇಕು ಎಂದು ಹೇಳಿದರು.
ಸಾಮಾಜಿಕ ಸಾಮರಸ್ಯದ ಮೂಲಕ ಜಾತಿ ಪದ್ದತಿಯನ್ನು ಹೋಗಲಾಡಿಸಿ ಎಲ್ಲರೂ ಭಾರತಮಾತೆಯ ಮಕ್ಕಳು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಹಿಂದೂ ಧರ್ಮದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ಜಲ ಸಂರಕ್ಷಣೆ, ನೀರು ಉಳಿಸುವುದು, ಲಕ್ಷಾಂತರ ವೃಕ್ಷಗಳನ್ನು ನೆಡುವುದು, ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಸಮಾಜದ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ದಿಗಂಬರ ಮಠದಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಮೇಳ ವಿಜೃಂಭಣೆಯಿಂದ ನಡೆಯಿತು. ನೂರಾರು ವಾಹನಗಳ ಮೇಲೆ ಭಾರತ ಮಾತೆಯ ಭಾವಚಿತ್ರಗಳೊಂದಿಗೆ ನಡೆದ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು. ಸರ್ವಜನಾಂಗದ ಜನತೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮುಳವಾಡ ಮಠದ ಸಿದ್ದಲಿಂಗ ಶಿವಾಚಾರ್ಯರು, ವರ್ಚಗಲದ ಜಗದೀಶಾನಂದ ಶ್ರೀಗಳು, ಪಟ್ಟಣದ ಕಲ್ಲಿನಾಥ ದೇವರು, ಕೈಲಾಶನಾಥ ಶ್ರೀಗಳು ಭಾಗವಹಿಸಿದ್ದರು. ಮಹಿಳಾ ಪ್ರತಿನಿಧಿಯಾಗಿ ಗಾಯತ್ರಿ ಅವಟಿ ಉಪಸ್ಥಿತರಿದ್ದರು. ಈರಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಈರಯ್ಯ ಗಣಕುಮಾರ ಸ್ವಾಗತಿಸಿ ಪರಿಚಯ ಮಾಡಿಕೊಟ್ಟರು. ಶ್ರೀಶೈಲ ಪಡಸಲಗಿ ಕಾರ್ಯಕ್ರಮವನ್ನು ನಿರೂಪಿಸಿದರು.

