ಒಳಮೀಸಲಾತಿ ಹಂಚಿಕೆ ಮಾಡಿದ ನಂತರವೇ ನೇಮಕಾತಿ ಭರ್ತಿ ಮಾಡಲು ಆಗ್ರಹ | ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗಿ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿದ ನಂತರವೇ ನೇಮಕಾತಿ ಭರ್ತಿ ಮಾಡಬೇಕು ಎಂದು ಬಿಗಿಪಟ್ಟು ಹಿಡಿದಿರುವ ಮಾದಿಗ ಸಮುದಾಯ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆರುವ ನಿಟ್ಟಿನಲ್ಲಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಮಾದಿಗ ಸಮುದಾಯದ ಮುಖಂಡರು ಸಭೆ ನಡೆಸಿ, ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಎರಡು ತಾಲೂಕಿನ ಮಾದಿಗ ಸಮುದಾಯದ ಜನರು ಭಾಗವಹಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು.
ಒಳಮೀಸಲಾತಿ ಗೊಂದಲವನ್ನು ಬಗೆಹರಿಸುವರೆಗೂ 56,432 ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಬಾರದು. ವಿಶೇಷ ಸಂಪುಟ ಸಭೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲೇ ಒಳಮೀಸಲಾತಿ ಸಮರ್ಪಕ ಅನುಷ್ಠಾನದ ನಿರ್ಧಾರ ಕೈಗೊಂಡು ಸಮುದಾಯದಲ್ಲಿ ಮನೆಮಾಡಿರುವ ಆತಂಕ ದೂರಮಾಡಬೇಕು. ಸದ್ಯ ಜಾರಿಗೊಳಿಸಿರುವ ಒಳಮೀಸಲಾತಿಯನ್ನು ಜಾರಿ ಮಾಡಲು ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ವಿಷಯವರು ನೇಮಕಾತಿ ಕೈಬಿಟ್ಟು ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಒಳಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವರೆಗೂ ಪ್ರತಿಭಟನೆಯಲ್ಲಿ ಭಾಗವಹಿಸುವ ಕುರಿತು ಒಕ್ಕೊರಲ ನಿರ್ಧಾರ ತೆಗೆದುಕೊಳ್ಳಲಾಯಿತು.
ಡಾ.ಬಾಬು ಜಗಜೀವನರಾಂ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಸಾವಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದೆ ಲೆಕ್ಕಕ್ಕೆ ಮಾತ್ರ ಒಳ ಮೀಸಲಾತಿ ಜಾರಿ ನಮಗೆ ಬೇಕಾಗಿಲ್ಲ. ಕಾನೂನು ಭದ್ದವಾಗಿ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರವಾಣದ ಒಳ ಮೀಸಲಾತಿ ಜಾರಿ ಮಾಡಬೇಕು. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ ತಾಲೂಕಿನಿಂದ ಸುಮಾರು 1500 ರಿಂದ 2000 ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಡಿಸಿಸಿ ಪರಶಿವಮೂರ್ತಿ, ಉಡ ನಾಗರಾಜ್, ಬೆಟ್ಟಸ್ವಾಮಿ, ಶಿವಯ್ಯ, ವೆಂಕಟೇಶ್, ಚೆಲುವರಾಜು, ಶಿವರಾಜ್, ಡಿ. ನಾಗರಾಜು, ಶಿವರಾಜ್, ಶಿವಾಜಿ, ಪ್ರಕಾಶ್, ಕೆ.ಟಿ.ಹರೀಶ್, ಸಿ.ಕಾಳಪ್ಪಾಜಿ, ಮಹೇಶ್, ದೇವನಾಥ್, ಮಹೇಂದ್ರ, ಮಹದೇವ, ಸೋಮು, ರಾಮಯ್ಯ, ಚೆನ್ನಪ್ಪ, ಸೇರಿದಂತೆ ಹಲವು ಮುಖಂಡರು, ಯುವಕರು ಉಪಸ್ಥಿತರಿದ್ದರು.

