ವಿಜಯಪುರದಲ್ಲಿ ಮಹಿಳಾ ಪತ್ರಕರ್ತೆಯರಿಂದ ಎಡಿಸಿ ಡಾ.ಔದ್ರಾಮ ಅವರಿಗೆ ಮನವಿ ಮೂಲಕ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ವಾರ್ತಾಧಿಕಾರಿಯವರ ವಿರುದ್ಧ ಇತ್ತೀಚೆಗೆ ಕೇಳಿಬಂದಿರುವ ಆಪಾದನೆಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಮಹಿಳಾ ಸಂಪಾದಕಿಯರು ಹಾಗೂ ಮಹಿಳಾ ಪತ್ರಕರ್ತೆಯರು ಜಿಲ್ಲಾಧಿಕಾರಿಗಳಿಗೆ ಬುಧವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಮೂಲಕ ಮನವಿ ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಂಪಾದಕಿಯರು ಮತ್ತು ಮಹಿಳಾ ಪತ್ರಕರ್ತೆಯರು ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜದ ಹಿತಕ್ಕಾಗಿ ಸತ್ಯಾಧಾರಿತ ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿಯವರ ವಿರುದ್ಧ ಕೇಳಿಬಂದಿರುವ ಆರೋಪಗಳು ನಮ್ಮ ಗಮನಕ್ಕೆ ಬಂದಿದ್ದರೂ, ಇಲಾಖೆಯೊಂದಿಗೆ ದೀರ್ಘಕಾಲದಿಂದ ಸಂಪರ್ಕದಲ್ಲಿರುವ ನಮಗೆ ಅವರಿಂದ ಯಾವುದೇ ರೀತಿಯ ಅಸಭ್ಯ ವರ್ತನೆ ಅಥವಾ ಅಸಮರ್ಪಕ ನಡೆನುಡಿ ಕಂಡುಬಂದಿಲ್ಲ ಎಂದು ಮಹಿಳಾ ಪತ್ರಕರ್ತೆಯರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಜಿಲ್ಲಾ ವಾರ್ತಾಧಿಕಾರಿಯವರು ನಿಷ್ಠಾವಂತ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿ ಪರಿಚಿತರಾಗಿದ್ದು, ಅವರು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇಲಾಖೆಗೆ ಭೇಟಿ ನೀಡುವ ಸಂದರ್ಭದಲ್ಲಿಯೂ ಅವರು ಸದಾ ಗೌರವಯುತವಾಗಿ ವರ್ತಿಸುತ್ತಾರೆ. ಇದು ತಮ್ಮ ಅನುಭವದ ಮಾತು ಎಂದು ಮಹಿಳಾ ಪತ್ರಕರ್ತೆಯರು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಹಿನ್ನೆಲೆಯಲ್ಲಿ, ಆರೋಪಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ವಾಸ್ತವಾಂಶಗಳನ್ನು ಹೊರತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸುಳ್ಳು ಆಪಾದನೆಗಳ ಮೂಲಕ ಅಧಿಕಾರಿಯ ಮಾನಹಾನಿಗೆ ಕಾರಣವಾಗುವವರನ್ನು ಪತ್ತೆಹಚ್ಚಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸಹ ಅವರು ಆಗ್ರಹಿಸಿದ್ದಾರೆ.
ಪತ್ರಿಕೋದ್ಯಮವು ಸಮಾಜದ ನಾಲ್ಕನೇ ಸ್ಥಂಭವಾಗಿರುವುದರಿಂದ ಅದರ ಗೌರವ ಹಾಗೂ ಮರ್ಯಾದೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಹಿಳಾ ಸಂಪಾದಕಿಯರು ಹಾಗೂ ಮಹಿಳಾ ಪತ್ರಕರ್ತೆಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಂಪಾದಕೀಯರ ರಾಜ್ಯಾಧ್ಯಕ್ಷೆ ರಶ್ಮಿ ಪಾಟೀಲ್, ಕೌಶಲ್ಯ ಡಿ ಪನಾಳ್ಕರ್, ಶೈಲಾ ಮಣೂರ, ಎಸ್ ಬಿ ಕುಲಕರ್ಣಿ, ಎಸ್ ಬಿ ಬಿದರಿ, ಸೌಮ್ಯ ರೇಶ್ಮಿ ಸೇರಿದಂತೆ ಹಲವರಿದ್ದರು.

