ಉದಯರಶ್ಮಿ ದಿನಪತ್ರಿಕೆ
ದಾವಣಗೆರೆ: ‘ಪದ್ಮಭೂಣ’ ಡಾ. ಪಂ. ಪುಟ್ಟರಾಜರ ಜೀವನ ಅದು ಸಂಗೀತದ ಶ್ರೀಗಂಧವಾಗಿತ್ತು. ಶ್ರೀಗಂಧವು ತೇಯಿದಾಗ ಹೇಗೆ ಪರಿಮಳ ಬೀರಿ ಪರಿಸರವನ್ನು ಆಹ್ಲಾದಕರವಾಗಿ ಮಾಡುತ್ತದೆಯೋ ಹಾಗೆ ಪುಟ್ಟರಾಜ ಗುರುವರ್ಯರು, ತಮ್ಮ ಜೀವನವನ್ನು ಸಂಗೀತಕ್ಕೆ ತೆಯಿದು, ಸಂಗೀತದ ಪರಿಮಳವನ್ನು ತಮ್ಮ ಶಿಷ್ಯ ಪ್ರಶಿಷ್ಯರಿಂದ ವಿಶ್ವದ ತುಂಬೆಲ್ಲಾ ಪಸರಿಸಿದರು. ಸಂಗೀತದ ಮೂಲಕ ಶಿವಯೋಗವನ್ನು ಸಾಧಿಸಿ ಶಿವಯೋಗಿಯನಿಸಿದರು. ಅವರ ಲಿಂಗ ಪೂಜೆ ಸಂಗೀತಯುಕ್ತವಾಗಿರುತಿತ್ತು. ಇಂತಹ ಪೂಜ್ಯರ ಪ್ರೀತಿಗೆ ಪಾತ್ರರಾದ ದಾವಣಗೆರೆ ಭಕ್ತರೇ ಧನ್ಯರು ಎಂದು ವೇ. ಚನ್ನವೀರ ಸ್ವಾಮಿ ಹಿರೇಮಠ, (ಕಡಣಿ) ಸಂಸ್ಥಾಪಕರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ ಇವರು ಹೇಳಿದರು.
ಅವರು ದಿನಾಂಕ, ೦೮ ರಂದು ಬಾನುವಾರ ಸಂಜೆ ೬ ಗಂಟೆಗೆ, ದಾವಣಗೆರೆ ನಗರದ ಶ್ರೀಗಂಧ ರೆಸಿಡೆನ್ಸಿಯ ‘ಗಿಹನ’ ಬ್ಯಾಂಕ್ವೆಟ್ ಹಾಲಿನಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಮತ್ತು ನಗರದ ಶ್ರೀಗಂಧ ರೆಸಿಡೆನ್ಸಿ, ಸಂಯುಕ್ತವಾಗಿ ಆಯೋಜಿಸಲಾಗಿದ್ದ ಪದ್ಮಭೂಷಣ ಡಾ. ಪಂ. ಪುಟ್ಟರಾಜರ ೧೧೨ನೆಯ ಜಯಂತಿ ಹಾಗೂ ಪುಟ್ಟರಾಜರ ಮಾಸದ ನೆನಪು ಸಂಗೀತ ಶ್ರೀಗಂಧ ಮಾಸಿಕ ಕಾರ್ಯಕ್ರಮದ ಸಮ್ಮುಖವನ್ನು ವಹಿಸಿಕೋಂಡು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಶ್ರೀಗಂಧ ರೆಸಿಡೆನ್ಸಿ ಮಾಲೀಕರಾದ, ವಿನಾಯಕ ಪಿ. ಬಿ. ಮಾತನಾಡಿ, ಸಂಗೀತ ಕೇವಲ ಮನೋರಂಜನೆಗೆ ಮಾತ್ರವಾಗಿರದೇ ಯಜ್ಞ, ಯಾಗ, ಹೋಮ ಹವನದಂತೆ, ಆರಾಧನೆಯೋಗ್ಯವಾಗಿದ್ದು, ಮನೆ ಮನೆಯಲ್ಲಿ ಸಂಗೀತ ಆರಾಧನೆಯಾಗಬೇಕು. ಸಂಗೀತ ಆರಾಧನೆಯ ನೆಲದಲ್ಲಿ ಸುಖ ಶಾಂತಿ ನೆಮ್ಮದಿ ಲಕ್ಷ್ಮಿವಾಸವಾರುತ್ತಾಳೆ ಎಂದು ಅಭಿಪ್ರಾಯಪಟ್ಟರು.
ಗದಗ ಬೆಟಗೇರಿ ನಗರ ಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಪ್ರಕಾಶ ಅಕ್ಕಿ, ಬಿಂದು ಡಿ ಆರ್. ಅಭಿಷೇಕ ಎಸ್. ಆರ್. ವೇದಿಕೆಯಲ್ಲಿ ಉಪಸ್ಥಿತರಿರುವರು.
ಪ್ರತಿತಿಂಗಳು ನಡೆಸಿಕೊಂಡು ಬಂದಿರುವ ಪಂ. ಪುಟ್ಟರಾಜರ ಮಾಸದ ನೆನಪು ಸಂಗೀತ ಶ್ರೀಗಂಧ ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ರಾಘವೇಂದ್ರ ಕೃಷ್ಣಾಜಿ ಕ್ಷತ್ರೀಯ ಇವರ ಭಾನ್ಸುರಿ ವಾದನ ಕೇಳುಗರನ್ನು ಮಂತ್ರಮುಗ್ದರನ್ನಾಗಿ ಮಾಡಿತು, ಖ್ಯಾತ ತಬಲಾ ವಾದಕ ಸುರೇಶ ಕೊಪ್ಪಳ, ಸಮರ್ಥ ತಬಲಾಸಾಥ ನೀಡಿದರು.
ಆರಂಭದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಲಾಯಿತು. ವೇದಿಕಿಯಲ್ಲಿದ್ದ ಗಣ್ಯರು, ಕಲಾವಿದರೆಲ್ಲರು ಸಸಿಗೆ ನೀರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕ್ಕಮಹಾದೇವಿ ಭಜನಾ ಮಂಡಳಿಯವರು ಪ್ರಾರ್ಥನೆ ಮಾಡಿದರೇ, ಎಂ. ಗೀತಾ ಸುರೇಶ ಸ್ವಾಗತ ಮಾಡಿದರು. ಬಿಂದು ಆರ್.ಡಿ. ಕಾರ್ಯಕ್ರಮ ನೀರೂಪಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಂತರ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯೆವಸ್ಥೆ ಮಾಡಲಾಗಿತ್ತು

