ಹಲಸಂಗಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಚಡಚಣ ಹಾಗೂ ಇಂಡಿ ಸರಾಫ್ ವ್ಯಾಪಾರಿಗಳಿಂದ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಲಸಂಗಿ ಗ್ರಾಮದಲ್ಲಿ ಜನೇವರಿ 26 ರಂದು ನಡೆದಿದ್ದ ಭೂಮಿಕಾ ಜ್ಯುವೆಲ್ಲರಿ ಬಂಗಾರದ ಅಂಗಡಿ ಮಾಲಿಕ ಮಹಾರುದ್ರ ಕಂಚಗಾರ ಅವರ ದರೋಡೆ ಪ್ರಕರಣವನ್ನು ಅತಿ ಕಡಿಮೆ ಸಮಯದಲ್ಲಿ ಭೇದಿಸಿ ಕಳುವಾದ ಬಂಗಾರವನ್ನು ವಶಪಡಿಸಿಕೊಂಡ ಚಡಚಣ ಹಾಗೂ ಇಂಡಿ ತಾಲೂಕಿನ ಪೊಲೀಸ್ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದರು. ಈ ಸಂಬಂಧ ಇಬ್ಬನಿ ಹೊಟೇಲನ ಸಭಾಭವನದಲ್ಲಿ ಆಯೋಜಿಸಿದ ಶೌರ್ಯ ಮತ್ತು ಸಾಹಸ ಪುರಸ್ಕಾರ ಸನ್ಮಾನ ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಚಡಚಣ ಹಾಗೂ ಇಂಡಿ ತಾಲೂಕಿನ ಪದಾಧಿಕಾರಿಗಳು ಹಾಗೂ ಎಲ್ಲ ಚಿನ್ನಾಭರಣ ವ್ಯಾಪಾರಸ್ಥರು ಪೊಲೀಸರ ಸೇವೆಯನ್ನು ಶ್ಲಾಘಿಸಿದರು.
ಈ ವೇಳೆ ಶ್ರೀ ವಿಶ್ವಕರ್ಮ ಚಡಚಣ ತಾಲೂಕಾಧ್ಯಕ್ಷ ಸೋಮಶೇಖರ ಬಡಿಗೇರ ಮಾತನಾಡಿ, ಕಡಿಮೆ ಸಮಯದಲ್ಲಿ ಕಳುವಾದ ಬಂಗಾರವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವುದು ಕರ್ನಾಟಕದಲ್ಲಿಯೇ ಮಾದರಿಯಾಗಿದೆ. ಪೊಲೀಸರ ಈ ಕಾರ್ಯವನ್ನು ಮರೆಯಲಿಕ್ಕಾಗುವದಿಲ್ಲ ಪೊಲೀಸ್ ಇಲಾಖೆಯವರು ಬ್ರಹ್ಮದೇವರಂತೆ ಭೂಮಿಕಾ ಜ್ಯುವೆಲ್ಲರಿ ಕುಟುಂಬಸ್ಥರಿಗೆ ಎರಡನೇ ಸಲ ಜೀವ ಕೊಟ್ಟಿದ್ದಾರೆ. ನಮ್ಮ ಭಾಗದಲ್ಲಿ ಇಂತಹ ದೊಡ್ಡ ಮಟ್ಟದ ದರೋಡೆ ಈ ಮೊದಲು ನಡೆದಿರಲಿಲ್ಲ. ತಮ್ಮ ಜೀವ ಪಣಕ್ಕಿಟ್ಟು ಕೆಲವೇ ದಿನಗಳಲ್ಲಿ ದರೋಡೆಕೋರರನ್ನ ಬಂಧಿಸಿ ಬಂಗಾರ ವಶಪಡಿಸಿಕೊಂಡ ಪೊಲೀಸರ ಕಾರ್ಯಚಟುವಟಿಕೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇಂಡಿ ಉಪಾಧ್ಯಕ್ಷ ಸುಜಿತ್ ಲಾಳಸಂಗಿ ಮಾತನಾಡಿ, ಕಳ್ಳತನದಂತಹ ಘಟನೆಗಳನ್ನು ತಡೆಯಲು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತಮ್ಮ ಅಂಗಡಿ ಮತ್ತು ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಂಗಾರದ ಅಂಗಡಿ ಮಾಲೀಕರಿಗೆ ಪಿಸ್ತೂಲ್ ಪರವಾನಗಿ ಕೊಡುವಂತೆ ಡಿವೈಎಸ್ಪಿ ಅವರಿಗೆ ಮನವಿ ಮಾಡಿದರು.
ಚಡಚಣ ಸಿಪಿಐ ಪರಶುರಾಮ ಮನಗೂಳಿ ಮಾತನಾಡಿ, ಹಲಸಂಗಿ ಗ್ರಾಮದಲ್ಲಿ ಸುಮಾರು 205 ಗ್ರಾಂ ಚಿನ್ನ ಹಾಗೂ 1 ಕೆ.ಜಿ. ಬೆಳ್ಳಿಯನ್ನು ಹಗಲು ದರೋಡೆ ನಡೆದ ಪ್ರಕರಣವು ನಮಗೂ ಸವಾಲಾಗಿತ್ತು. ವಿಜಯಪುರ ಎಸ್ಪಿ ಹಾಗೂ ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಚಡಚಣ,ಝಳಕಿ ಹಾಗೂ ಹೋರ್ತಿ ಪಿಎಸ್ಐಗಳ ಮೂರು ತಂಡಗಳನ್ನು ರಚಿಸಿ ಮಹಾರಾಷ್ಟ್ರದ ಸಂಖದಿಂದ ಸೋಲಾಪುರವರೆಗೆ ತನಿಖೆ ನಡೆಸಲಾಯಿತು. ಎಲ್ಲ ಗ್ರಾಮಗಳಲ್ಲಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಸಲಾಯಿತು ಅದರ ಆಧಾರದ ಮೇಲೆ ತನಿಖೆ ಮುಂದುವರಿಸಿ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಹೇಳಿದರು.
ತಾಲೂಕಿನ ಸರಾಫ ವ್ಯಾಪಾರಸ್ಥರು ಉತ್ತಮ ಗುಣಮಟ್ಟದ 12 ಮೆಗಾಪಿಕ್ಸೆಲ್ ನೈಟ್ವಿಷನ್ ಹಾಗೂ(ವಾಯ್ಸ್ )ಧ್ವನಿ ಮುದ್ರಣ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಂಗಾರದ ಅಂಗಡಿ ಮಾಲೀಕರು ಪಿಸ್ತೂಲ್ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದರೆ ನಿಯಮಾನುಸಾರ ಅನುಮೋದನೆ ನೀಡಲಾಗುವುದು ಎಂದರು.
ಚಡಚಣ ಪಿಎಸ್ಐ ಸೋಮೇಶ ಗೆಜ್ಜಿ ಮಾತನಾಡಿ, ಪ್ರಕರಣದ ತನಿಖೆಗೆ ಸೋಲಾಪುರ ಸೇರಿದಂತೆ ವಿವಿಧ ಕಡೆ ತಂಡಗಳನ್ನು ರಚಿಸಿ ಸುಮಾರು 120 ಕಿ.ಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಸಿಸಿಟಿವಿಯಿಂದ ಯಾವುದೇ ಅಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಮಾತನಾಡಿ, ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸಕ್ಕೆ ಧನ್ಯವಾದಗಳು ಸಲ್ಲಿಸಿ, ಜನವರಿ 26ರಂದು ಹಲಸಂಗಿಯಲ್ಲಿ ನಡೆದ ದರೋಡೆ ವೇಳೆ ಆರೋಪಿಗಳು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿದರೂ ಸಾರ್ವಜನಿಕರು ಸಂಶಯ ವ್ಯಕ್ತಪಡಿಸದಿರುವುದು ವಿಷಾದಕರವಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಚಡಚಣದ ಶ್ರೀ ಷಡಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಹೋರ್ತಿ ಪಿಎಸ್ಐ ರಾಕೇಶ್ ಬಗಲಿ, ಝಳಕಿ ಪಿಎಸ್ಐ ಮಂಜುನಾಥ ತಿರಕನ್ನವರ, ಮಲ್ಲಿಕಾರ್ಜುನ ಬಿರಾದಾರ, ಗಂಗಾಧರ ಬಡಿಗೇರ, ಪ್ರಕಾಶ ಭಂಡರಕವಟೆ, ಸುರೇಶ ಭಂಡರಕವಟೆ, ರಮೇಶ ಪೋದ್ದಾರ, ಮಹಾರುದ್ರ ಕಂಚಗಾರ, ಬಸವರಾಜ ಪತ್ತಾರ ಸೇರಿದಂತೆ ಚಡಚಣ ಹಾಗೂ ಇಂಡಿ ತಾಲೂಕಿನ ಎಲ್ಲ ಚಿನ್ನಾಭರಣ ವ್ಯಾಪಾರಸ್ಥರು ಮತ್ತು ವಿಶ್ವಕರ್ಮ ಸಮಾಜದ ಗಣ್ಯರು ಇದ್ದರು.

