ಕಾರಜೋಳದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ. ಈ ನಿಟ್ಟಿನಲ್ಲಿ ಕಾಯಕನಿರತನಾಗಿರುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಮುಸ್ಸಂಜೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಎನ್.ಆರ್.ಎಲ್.ಎಂ ಕಲಿಕಾ ಕಟ್ಟಡ, ಗೋದಾಮು ಹಾಗೂ ಜಲ ಸಂಗ್ರಹಕ್ಕೆ ಅನುಕೂಲವಾಗುವ ಕಲ್ಯಾಣಿ ಉದ್ಘಾಟನೆ ಹಾಗೂ ಡೋಣಿ ಪ್ರವಾಹದಿಂದಾಗಿ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ತೊನಶ್ಯಾಳ ಗ್ರಾಮದ 312 ಕುಟುಂಬಗಳಿಗೆ 17 ವರ್ಷಗಳ ನಂತರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ನೀರಾವರಿ ಕ್ರಾಂತಿಯ ಬಳಿಕ ಈಗ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಲುವೆಗಳ ವ್ಯಾಪ್ತಿಯಲ್ಲಿ ಬರುವ 156 ಹಳ್ಳಗಳಿಗೆ ತುಂಬಿಸುವ ಯೋಜನೆ ರೂಪಿಸಲಾಗಿದೆ. ಹಳ್ಳಗಳಲ್ಲಿ ಹೂಳು ತೆಗೆಯಿಸಿ ಪ್ರತಿ ಕಿಲೋ ಮೀಟರ್ ಅಂತರದಲ್ಲಿ ಒಂದೊಂದು ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಬಬಲೇಶ್ವರ ಮತಕ್ಷೇತ್ರದಲ್ಲಿ 10 ಪ್ಯಾಕೇಜುಗಳ ಪೈಕಿ ಆರು ಪ್ಯಾಕೇಜುಗಳಿಗೆ ಟೆಂಡರ್ ಕರೆಯಲಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಾಗಲಿದೆ. ಡೋಣಿ ನದಿ ಹೂಳೆತ್ತುವ ಕುರಿತು ಬೆಣ್ಣೆಹಳ್ಳದ ಯೋಜನೆ ಮಾದರಿಯಲ್ಲಿ ರೂ. 200 ಕೋ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಬಬಲೇಶ್ವರ ಮತಕ್ಷೇತ್ರಕ್ಕೆ ರಾಜ್ಯದಲ್ಲಿಯೇ ಅತೀ ಹೆಚ್ಚು ಅನುದಾನ ಸಿಕ್ಕಿದೆ. ರೈತರು ಸಮೃದ್ಘಿಗೆ ಶ್ರಮ ವಹಿಸಲಾಗುತ್ತಿದೆ. ರೈತರು ತಮ್ಮ ಆಸ್ತಿ ಮಾರಾಟ ಮಾಡಬಾರದು. ಮುಂದೆ ಜಮೀನಿನ ಬೆಲೆ ಇನ್ನೂ ಹೆಚ್ಚಾಗಲಿದೆ. ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಅಭಿವೃದ್ಧಿಯಾಗಲಿ ಎಂಬುದು ನಮ್ಮ ಸದಾಶಯವಾಗಿದೆ. ಕಾರಜೋಳ ಗ್ರಾಮದಲ್ಲಿ ಪಿಯು ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯದಲ್ಲಿಯೇ ಅತ್ಯುತ್ತಮ ಕಟ್ಟವಾಗಿದೆ. ಕಟ್ಟಡದ ಜೊತೆಗೆ ಆದರ್ಶ ಆಡಳಿತ ನಡೆಸಬೇಕು. ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಚುನಾವಣೆಯ ಬಳಿಕ ಎಲ್ಲರೂ ಒಂದಾಗಿ ಪರಸ್ಪರ ವಿಶ್ವಾಸದಿಂದ ಗ್ರಾಮದ ಅಭಿವೃದ್ಧಿ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಮೊದಲು ಬಂಜರು ಭೂಮಿಯಾಗಿದ್ದ ಈ ಭಾಗದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡ ನೀರಾವರಿಯಿಂದಾಗಿ ಕೃಷಿ, ತೋಟಗಾರಿಕೆ, ಹೈನುಕಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದ ಯುವಕರು ಇಂದು ಗ್ರಾಮದ ತಮ್ಮ ಜಮೀನುಗಳಲ್ಲಿಯೇ ಕಾಯಕ ನಿರತರಾಗಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಬೇಸಾಯದಲ್ಲಿ ತೊಡಗಿ ಸಂತಸಮಯ ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬರೂ ಊಗ ಕೃಷಿ ಚಟುವಟಿಕೆಗಳಲ್ಲಿ ವ್ಯಸ್ಥರಾಗುತ್ತಿದ್ದಾರೆ. ಕೆಂಗಲ್ ಹನುಮಂತರಾಯ ವಿಧಾನ ಸೌಧ ನಿರ್ಮಿಸಿದಾಗ ಜನ ಸಂತಸ ಪಟ್ಟಂತೆ ಇಂದು ಕಾರಜೋಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಕಂಡು ರೈತರು ಖುಷಿ ಪಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಕನೂರಿನ ಮಾದುಲಿಂಗ ಮಹಾರಾಜರು, ಸೋಮದೇವರಹಟ್ಟಿ ಜಗನು ಮಹಾರಾಜರು, ಗ್ರಾ. ಪಂ. ಅಧ್ಯಕ್ಷೆ ಶ್ರೀದೇವಿ ಜಾಧವ, ಮುಖಂಡರಾದ ಬಿ ಡಿ ಆಸಂಗಿ, ಗಿರಮಲ್ಲ ಮಾದರ, ಅಡಿವೇಪ್ಪ ಕೋಲಕಾರ, ವಿ. ಎಸ್. ಪಾಟೀಲ, ವಿ. ಎನ್. ಬಿರಾದಾರ, ಮಲ್ಲು ಪರಸಣ್ಣವರ, ಸಿ. ಜಿ. ಪಾರೆ, ರಪಿಕ್ ಸೂನಾರ, ಬಸವರಾಜ ಯಳವಾರ, ಪಾಂಡು ಜಾಧವ, ಬಾಬು ಜಾದವ, ಜಮಿಲ್ ಪಟೇಲ, ಸದಾಶಿವ ದಳವಾಯಿ, ಪರಸಪ್ಪ ಹಳಿಜೋಳ, ರಾಮಣ್ಣ ಹೂಗಾರ, ರಾಚಯ್ಯ ಹಿರೇಮಠ, ಚನ್ನಮಲ್ಲಯ್ಯ ಮಠ, ರಾಜು ಮಸೂತಿ, ಬಾಳಾಸಾಹೇಬ ಇಂಡಿ, ಲಕ್ಕವ್ವ ಗೋಡೆಖರ, ಶಂಕರ ಜಮಾತಾರ, ಯಲ್ಲವ್ವ ಹರಿಜನ, ಚಂದ್ರವ್ವ ಚಲವಾದಿ, ಪರಸಪ್ಪ ದಳವಾಯಿ, ಶೋಬಾ ಯಳವಾರ, ಲಕ್ಷ್ಮಣ ಶ ಪೋಜಾರಿ. ಕಮಲವ್ವ ಮಣ್ಣೊರ, ಬೌರಮ್ಮ ಕೋಳಲಿ, ಆನಂದ ಲಾಲು ಜಾಧವ, ಪರಶುರಾಮ ಮಲಘಾಣ, ಬುರಾನ್ ಎಚ್ ಮುಜಾವರ, ತಾ. ಪಂ. ಇಓ ಜುಬೇರ ಅಹ್ಮದ ಪಠಾಣ, ಅಧಿಕಾರಿಗಳಾದ ಭಾರತಿ ಹಿರೇಮಠ, ಸಂಗಪ್ಪ ಸಿ ಪಡಸಲಗಿ, ಗುತ್ತಿಗೆದಾರ ಗುಳಪ್ಪ ಸಿ. ಯರನಾಳ ಮುಂತಾದವರು ಉಪಸ್ಥಿತರಿದ್ದರು.

“ಕಾರಜೋಳ ಗ್ರಾ. ಪಂ. ಕಟ್ಟಡ ಜಿಲ್ಲೆಯಲ್ಲಿಯೇ ಅತ್ಯಂತ ಸುಂದರವಾಗಿದೆ. ಇದಕ್ಕೆ ಪ್ರತಿಯೊಬ್ಬರು ಶ್ರಮವಹಿಸಿ ಕೈಜೊಡಿಸಿದ್ದಾರೆ. ಪಿಡಿಓ, ಗ್ರಾ. ಪಂ. ಸದಸ್ಯರು, ಗುತ್ತಿಗೆದಾರರು ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ.”
– ರಿಶಿ ಆನಂದ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

