ಮೊದಲ ಪುಟ
ಸಿಂದಗಿ: ವಿಜ್ಞಾನ ಹಾಗೂ ಪರಿಸರ ವಸ್ತು ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ನಗರದ ಶಾಂತವೀರ ನಗರದಲ್ಲಿರುವ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ಯ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಪ್ರತಿಭೆಗಳನ್ನು ಹೊರಹಾಕುವ ಮೆಟ್ಟಿಲಾಗುತ್ತದೆ. ಮಕ್ಕಳು ಸಂಸ್ಕಾರದ ಜೊತೆಗೆ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಂದೆ-ತಾಯಿಗಳ ಕನಸನ್ನು ಈಡೇಸುವಲ್ಲಿ ಶ್ರಮವಹಿಸಬೇಕು ಎಂದರು.
ಈ ವೇಳೆ ಶಿಕ್ಷಕ ಸಿದ್ಧಲಿಂಗ ಚೌಧರಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯದ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನ ಮತ್ತು ವಸ್ತು ಪ್ರದರ್ಶನ ಮೇಳ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸುವ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ೨೦೦೦ ಹಾಗೂ ತಾಲೂಕಿಗೆ ಪ್ರಥಮ ಬರುವ ವಿದ್ಯಾರ್ಥಿಗೆ ರೂ.೧೦ಸಾವಿರ ಪ್ರೋತ್ಸಾಹಧನ ನೀಡುವುದಾಗಿ ವಾಗ್ದಾನ ಮಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಡಿ.ಡಿ.ಮುಲ್ಲಾ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಬರುವ ವಿದ್ಯಾರ್ಥಿಗಳಿಗೆ ಸರಕಾರದ ರೂ.೫೦ಸಾವಿರ ನಗದು ಬಹುಮಾನ ಸೇರಿ ದಾನಿಗಳು ನೀಡಿರುವ ರೂ.೪ಲಕ್ಷ ೮೦ಸಾವಿರ ಹಣ ನೀಡಲು ಮುಂದಾಗಿರುವುದು ಸಂತಸದ ವಿಷಯ ಎಂದರು.
ಗಣಿತ ಮನೆ, ಹಗಲು ರಾತ್ರಿ, ಜ್ವಾಲಾಮುಖಿ, ಸುಂದರವಾದ ಹಸಿರು ಮನೆ, ತಂತ್ರಜ್ಞಾನ, ನೀರಿನಲ್ಲಿ ವಿದ್ಯುತ್ ಸೇರಿದಂತೆ ೪೫ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ, ಅವುಗಳ ಕಾರ್ಯ ವಿಧಾನವನ್ನು ವಿವರಿಸಿ, ಪ್ರಶಂಸೆ ಪಡೆದರು. ಕಾರ್ಯಕ್ರಮದಲ್ಲಿ ಅಲ್ಲಾಪೂರ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ ದೊಡಮನಿ, ಶಿಕ್ಷಕ ಗುರುನಾಥ ಅರಳಗುಂಡಗಿ, ಪವನ ಕುಲಕರ್ಣಿ, ಬಸವರಾಜ ಅಗಸರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

