ವಿಜಯಪುರದಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟರಿಗೆ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಜೆಪಿ ಪಕ್ಷದ ಬಗ್ಗೆ ಯಾವ ಕಾಂಗ್ರೆಸ್ ನಾಯಕರು ಅಂದು ಹಾಸ್ಯ ಮಾಡಿದ್ದರೋ ಅದೇ ನಾಯಕರು ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದು
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ವತಿಯಿಂದ ಬೂತ್ ಮಟ್ಟದ ಏಜೆಂಟರಿಗೆ ಆಯೋಜಿಸಲಾಗಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಬಿಜೆಪಿ ಪರವಾದ ಅಲೆ ಇದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಪಣಾ ಮನೋಭಾವ, ಅಭಿವೃದ್ಧಿಪರ ದೃಷ್ಟಿಕೋನದ ನಾಯಕತ್ವದಿಂದ ಬಿಜೆಪಿ ಬಲಿಷ್ಠವಾಗಿದೆ, ಕಾಂಗ್ರೆಸ್ ಇಷ್ಟಪಡುತ್ತಿದ್ದ ಅನೇಕರು ಸಹ ಇಂದು ಬಿಜೆಪಿಗೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ, ಅಂದು ಆರಂಭದ ದಿನದಲ್ಲಿ ಬೆರಳಣಿಕೆಯಷ್ಟು ಸೀಟುಗಳನ್ನು ಗೆಲ್ಲದ ಬಿಜೆಪಿಯನ್ನು ನೋಡಿ ನಗುತ್ತಿದ್ದ ಕಾಂಗ್ರೆಸ್ ನಾಯಕರೇ ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ವೆಂಟಿಲೇಟರ್ನಲ್ಲಿರುವ ಹಡಗು, ಶೀಘ್ರವೇ ಅದು ಮುಳುಗುತ್ತದೆ, ಅವರ ರಾಹುಲ್ ಗಾಂಧೀಗೆ ಬದ್ಧತೆಯೇ ಇಲ್ಲ, ಸಂಸತ್ನಲ್ಲಿ ಏನು ಮಾತನಾಡುತ್ತಾರೋ ಅವರಿಗೆ ಪರಿವೆಯೇ ಇಲ್ಲ ಎಂದರು.
ಕಾಂಗ್ರೆಸ್ ನಂತೆ ಬಂಗಾರದ ಚಮಚ ಇರಿಸಿಕೊಂಡು ಜನ್ಮತಾಳಿದ ಪಕ್ಷ ಬಿಜೆಪಿ ಅಲ್ಲ, ಬಿಜೆಪಿ ಬೆಳವಣಿಗೆಯ ಹಿಂದೆ ನೂರಾರು ಶ್ರೇಷ್ಠ ದಿಗ್ಗಜ ನಾಯಕರ ತ್ಯಾಗ, ಪರಿಶ್ರಮ ಅಡಗಿದೆ, ಪಕ್ಷ ಕಟ್ಟಿದ ಅನೇಕರು ಕಾರ್ಪೋರೇಟರ್ ಸಹ ಆಗಲಿಲ್ಲ, ನಮಗಾಗಿ ಅವರು ಪಕ್ಷ ಕಟ್ಟಿದರು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎನ್ನುವ ಸಿದ್ಧಾಂತ ಬಿಜೆಪಿಯದ್ದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾದವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್, ಈರಣ್ಣ ರಾವೂರ, ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸುರೇಶ್ ಬಿರಾದಾರ, ಪ್ರಮುಖರಾದ ಭೀಮಾಶಂಕರ್ ಹದನೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಭಾರತಿ ಭುಯ್ಯಾರ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಉಪಸ್ಥಿತರಿದ್ದರು.

ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಧರ್ಮ
ಕಾರ್ಯಕರ್ತರೇ ಪಕ್ಷದ ಜೀವಾಳ, ಕಾರ್ಯಕರ್ತರು ಪಕ್ಷದ ಮುಖಂಡರಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸುತ್ತಾರೆ, ಹೀಗಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಖಂಡರ ಮಾನವೀಯ ಧರ್ಮ, ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ ನೇರವಾಗಿ ಹೇಳಿ ಆ ತೊಂದರೆ ನಿವಾರಿಸಲು ನಾನು ಬದ್ಧನಾಗಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಕ್ಷದ ನಾಯಕರನ್ನು ರೂಪಿಸುವವರೇ ಕಾರ್ಯಕರ್ತರು, ಕಾರ್ಯಕರ್ತರ ಶ್ರಮದಿಂದಲೇ ನಾಯಕರಾಗಲು ಸಾಧ್ಯ ಎಂದರು.
ಬಿಜೆಪಿ ಎನ್ನುವುದು ನಮ್ಮ ತಾಯಿ ಇದ್ದಂತೆ, ಸಮರ್ಪಣಾ ಮನೋಭಾವದಿಂದ ಪಕ್ಷ ಕಟ್ಟುವ ಈ ಕಾರ್ಯವನ್ನು ಮಾಡೋಣ ಎಂದರು.

