ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮೀಣ ಭಾಗದಲ್ಲಿ ಹಲಿಗೆ ಹಬ್ಬವೆಂದೆ ಖ್ಯಾತಿ ಪಡೆದ ಹೋಳಿ ಹಬ್ಬವನ್ನು ಸಡಗರದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು, ಯುವಕರು ವಿವಿಧ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.
ಮಕ್ಕಳು ಗುಂಪಾಗಿ ಹಲಿಗೆ ಬಾರಿಸುತ್ತ ಖುಷಿ ಅನುಭವಿಸಿದರೆ. ರೈತರು, ಕಾರ್ಮಿಕರು ಹೊಸ ಬಟ್ಟೆ ತೊಟ್ಟು ಹೋಳಿ ಹಾಡುಗಳನ್ನು ಹಾಡುತ್ತಾ ಆನಂದ ಪಟ್ಟರು. ಯುವಕರು ಬಣ್ಣಧಾಟ ನಿಷೇಧದ ಛಾಯೆ ಇದ್ದರೂ ತಮ್ಮ ಪಾಡಿಗೆ ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಹಬ್ಬಕ್ಕೆ ರಂಗು ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮ; ಸೋಮವಾರ ಬೆಳಗ್ಗೆ ೬ ಗಂಟೆಗೆ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕಾಮಣ್ಣನ ಕಟ್ಟೆ ಮೇಲೆ ರತಿ ಕಾಮರ ಮೂರ್ತಿ ಪ್ರತಿಷ್ಠಾಪಣೆ ಮಾಡಿದ ಗ್ರಾಮಸ್ಥರು ಇಡೀ ದಿನ ರೈತರು ಮಹಿಳೆಯರು ರತೀ ಕಾಮರಿಗೆ ವಿಶೇಷ ಪೂಜೆ ಸಲ್ಲಿಸಿದರು, ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಳಿ ಹಾಗೂ ಕರ್ಬಲಾ ಪದಗಳ ಗಾಯಣ ರಾತ್ರಿ ೯.ಘಂಟೆಯವರೆಗೆ ನಡೆದವು, ಕಾಮಣ್ಣ ಸೇವಾ ಸಮೀತಿ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮಣ ಕಣದಾಳ ಹಾಗೂ ಭಾಗ್ಯಶ್ರೀ ಕುಂಬಾರಹಳ್ಳರವರ ತಂಡಗಳಿಂದ ಗೀಗಿ ಪದಗಳ ಗಾಯಣ ಹಾಗೂ ಮಂಗಳವಾರ ಜೈ ಹಣುಮಾನ ವಾಯಾಮ ಶಾಲೆಯ ಆವರಣದಲ್ಲಿ ಅಭಿಮಾನಿಗಳ ಹೋಳಿ ಪದಗಳ ಗಾಯಣ ನಡೆದವು.
ಮುಂಜಾನೆ ಗ್ರಾಮದ ಪ್ರಯುಖ ಬೀದಿಗಳಲ್ಲಿ ಸಂಗ್ರಹಿಸಲಾಗಿದ್ದ ಬ್ರಹತ್ ಪ್ರಮಾಣದ ಉರುವಲಿಗೆ ಕಿಚ್ಚು ಇಡುವ ಮೂಲಕ ರತಿ ಕಾಮರ ಪ್ರತಿಕೃತಿಯನ್ನು ದಹಿಸಲಾಯಿತು.

