ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ : ರಾಜ್ಯದಲ್ಲಿಯೇ ಗುಣಮಟ್ಟದ ತಂಬಾಕು ಬೆಳೆಯುವ ಜಿಲ್ಲ ಮೈಸೂರು ಜಿಲ್ಲೆ. ಇಲ್ಲಿನ ಹುಣಸೂರು, ಪಿರಿಯಾಪಟ್ಟಣ, ಕೆ ಆರ್ ನಗರ ಜೊತೆಗೆ ಹೆಚ್ ಡಿ ಕೋಟೆಯಲ್ಲೂ ಅತಿ ಹೆಚ್ಚಾಗಿ ಹೊಗೆಸೊಪ್ಪು ಬೆಳೆಯಲಾಗುತ್ತೆ. ಆದರೆ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೇ ಬೆಳೆಗಾರ ಚಿಂತಾಕ್ರಾಂತನಾಗಿದ್ದಾನೆ.
ರಾಗಿ, ಜೋಳ, ಹತ್ತಿ ಬೆಳೆದಂತೆ ಸಿಕ್ಕ ಸಿಕ್ಕಲಿ ಹೊಗೆಸೊಪ್ಪು ಬೆಳೆಯಲು ಅನುಮತಿ ಇಲ್ಲ. ಅದರದ್ದೇ ಆದ ಚೌಕಟ್ಟಿದ್ದು, ಮಾನದಂಡವಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ತನ್ನದೇ ಆದ ತಂಬಾಕು ಮಂಡಳಿಗಳಿವೆ. ಇದರ ಮೂಲಕವೇ ತಂಬಾಕು ವ್ಯವಹಾರ, ಖರೀದಿ ಎಲ್ಲವೂ ನಡೆಯುತ್ತೆ. ತಂಬಾಕು ಮಂಡಳಿಯ ನಿಯಮದ ಪ್ರಕಾರ ರೈತನಿಗೆ ಮತ್ತೆ ಹೆಚ್ಚುವರಿ ಅಂತೇಳಿ 500 ಕೆಜಿ ಆಸುಪಾಸಿನಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಅವಕಾಶ ಇರುತ್ತದೆ. ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಅಧೀನದಲ್ಲಿ ತಂಬಾಕು ಮಂಡಳಿ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರೂ ರೈತನಿಗೆ ಪ್ರಯೋಜನಕ್ಕಿಂತ ಬರೀ ಮೋಸವೇ ಆಗುತ್ತಿದೆ.
ಭಾರತದಲ್ಲಿ ಅತಿಹೆಚ್ಚು ತಂಬಾಕು ಬೆಳೆಯುವ, ಮಾರಾಟ ಮಾಡುವ ರಾಜ್ಯ ಆಂಧ್ರಪ್ರದೇಶ ಹೊರತುಪಡಿಸಿದರೆ ಎರಡನೇ ರಾಜ್ಯವಾಗಿ ಕರ್ನಾಟಕ ಇದೆ. ಆಂಧ್ರಪ್ರದೇಶದಲ್ಲಿ ಗುಣಮಟ್ಟದ ತಂಬಾಕಿಗೆ ಕೆಜಿಗೆ 400 ರೂಪಾಯಿ, ಕಳಪೆ ದರ್ಜೆ ತಂಬಾಕು ಕೆಜಿಗೆ 250 ರೂಪಾಯಿ ಆಸುಪಾಸಿನಲ್ಲಿ ಇದೆ. ಆದರೆ ಕರ್ನಾಟಕದಲ್ಲಿ ಈವರೆಗಿನ ಹೈಬಿಡ್ ಗುಣಮಟ್ಟದ ತಂಬಾಕು ಕೆಜಿಗೆ ಕೇವಲ 292 ರೂಪಾಯಿ ಮಾತ್ರ. ಇನ್ನು ಲೋ ಗ್ರೇಡ್ (ಎರಡನೇ ದರ್ಜೆ, ಮೂರನೇ ದರ್ಜೆ) ತಂಬಾಕು 225 ರೂಪಾಯಿ ಗಡಿ ದಾಟುತ್ತಿಲ್ಲ
ಹೆಚ್ ಡಿ ಕೋಟೆಯಲ್ಲಿ ಬಾಗಿಲು ಬಂದ್
ಹೆಚ್ ಡಿ ಕೋಟೆಯಲ್ಲಿ ಗುರುವಾರ ಕೂಡ ತಂಬಾಕು ಬೆಲೆ ಪಾತಾಳಕ್ಕೆ ಕುಸಿದಿತ್ತು. ಗುಣಮಟ್ಟದ ತಂಬಾಕಿಗೆ ಕೆಜಿಗೆ 280 ರೂಪಾಯಿ ಇದ್ದರೆ, ಮೂರನೇ ದರ್ಜೆ ತಂಬಾಕಿಗೆ ಕೇವಲ 260 ರೂಪಾಯಿ ಇತ್ತು. ಇನ್ನು ಮೂರನೇ ದರ್ಜೆ ಹೊಗೆಸೊಪ್ಪಿಗೆ ಬೆಲೆಯನ್ನೇ ನಿಗದಿಪಡಿಸಿರಲಿಲ್ಲ. ಇದನ್ನು ನೋಡಿ ಕೆರಳಿ ಕೆಂಡವಾದ ಹೊಗೆಸೊಪ್ಪು ಬೆಳೆಗಾರರು ಪಟ್ಟಣದ ಹೆಬ್ಬಾಳ ಸಮೀಪವಿರುವ ತಂಬಾಕು ಹರಾಜು ಮಾರುಕಟ್ಟೆ 65ರ ಸಂಖ್ಯೆ ಬಾಗಿಲು ಬಂದ್ ಮಾಡಿಸಿದರು. ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ತಾಲೂಕು ಯುವ ಘಟಕದ ಕಾರ್ಯಾಧ್ಯಕ್ಷ ಪ್ರಕಾಶ್ ಟಿ ನೇತೃತ್ವದಲ್ಲಿ ರೈತರು ಹರಾಜು ಮಾರುಕಟ್ಟೆ ಬಾಗಿಲು ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು. ತಂಬಾಕು ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ
ತಂಬಾಕು ಹರಾಜು ಮಾರುಕಟ್ಟೆ 65ರ ಸೂಪರಿಂಟೆಂಡೆಂಟ್ ವಿಜಯ್ ಕುಮಾರ್ ಗೆ ಮನವಿ ಪತ್ರ ಸಲ್ಲಿಸಿದರು. ವೇಳೆ ಪೃಥ್ವಿ ಕುಮಾರ್ , ರವಿಕುಮಾರ್ ಸಿಕೆ, ನೀಲಕಂಠೇಗೌಡ, ರಾಜೇಂದ್ರಗೌಡ ಸೇರಿದಂತೆ ಬೆಳೆಗಾರರು ಇದ್ದರು.
ತಂಬಾಕು ವರ್ಷದ ಬೆಳೆ. ಪಟದಲ್ಲಿ ಹೊಗೆ ಸಸಿ ಬಿತ್ತನೆ ಮಾಡಿದ್ದಾಗಿನಿಂದ ತಂಬಾಕು ಮಂಡಳಿಗೆ ತಂದು ಮಾರಾಟ ಮಾಡಿ ಹಣ ಪಡೆಯುವವರೆಗೆ ಸುದೀರ್ಘವಾಗಿ ನಡೆಯುವ ಪ್ರಕ್ರಿಯೆ. ಅದರಲ್ಲೂ ವ್ಯವಸಾಯಕ್ಕೆ ಹೆಚ್ಚಿನ ಖರ್ಚು ಸಹ ತಗಲುತ್ತೆ. ಆಂಧ್ರದಲ್ಲಿ ತಂಬಾಕು ಬೆಳೆಯುವ ರೈತರಿಗೆ ಒಂದು ಬೆಲೆ ಕೊಟ್ಟು ನಮ್ಮ ರಾಜ್ಯದಲ್ಲಿ ಬೆಳೆಯುವ ತಂಬಾಕು ಬೆಳೆಗೆ ಸರಿಯಾದ ಬೆಲೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ.
ಪ್ರಕಾಶ್ ಟಿ, ರೈತ ಕಲ್ಯಾಣ ಸಂಘ

