ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗುರಿಯ ದಾರಿಯಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತವೆ ಆದರೆ ಅವುಗಳ ಕಡೆ ಗಮನಕೊಡದೆ ಗುರಿಯತ್ತಲೇ ನಿಮ್ಮ ದೃಷ್ಟಿ ಕೇಂದ್ರೀಕರಿಸಬೇಕು ಎಂದು ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.
ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದ ಜ್ಞಾನ ಸಿಂಚನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವುದು ದೊಡ್ಡ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಬಬಲೇಶ್ವರದ ಶ್ರೀ ಶಾಂತವೀರ ಪಪೂ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅವಟಿ ಉದ್ಘಾಟಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಇದು ಕೇವಲ ಬೀಳ್ಕೊಡುಗೆ ಸಮಾರಂಭವಲ್ಲ. ನಿಮ್ಮ ಬದುಕಿನ ಹೊಸ ಅಧ್ಯಾಯದ ಪ್ರಾರಂಭ. ಶಿಕ್ಷಣ ಹಣ ಸಂಪಾದನೆಗಾಗಿ ಅಲ್ಲ. ಜ್ಞಾನಾರ್ಜನೆ ಮತ್ತು ಸಂಸ್ಕಾರ ನಿರ್ಮಾಣಕ್ಕಾಗಿ ಇರಬೇಕು. ಹಣಕ್ಕಾಗಿ ಶಿಕ್ಷಣ ನೀಡುವ ಮನೋಭಾವ ಇಲ್ಲದೇ ಮೌಲ್ಯಗಳನ್ನು ಬೆಳೆಸುವ ಸಂಸ್ಥೆ ಜ್ಞಾನ ಸಿಂಚನ ಎಂಬುದು ಹೆಮ್ಮೆಯ ವಿಷಯ ಎಂದು ಪ್ರಶಂಸಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಶಿಕ್ಷಕ ಸಂತೋಷ ಬಂಡೆ, ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಜೆ.ಬೋಳೆಗಾಂವ, ಡಾ.ಮಹಾಂತೇಶ ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಣಮಂತ ತಡಲಗಿ, ನಿಂಗಣ್ಣ ಮಾರ್ಸನಳ್ಳಿ, ಪ್ರಾಚಾರ್ಯ ಆರ್.ವ್ಹಿ.ಬಿಂಗೆ, ವಿದ್ಯಾರ್ಥಿ ಪ್ರತಿನಿಧಿ ಸುಕನ್ಯಾ ಮದರಿ, ಸೇರಿದಂತೆ ಪಾಲಕರು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಕಾರ್ಯಾಧ್ಯಕ್ಷ ವ್ಹಿ.ವ್ಹಿ.ಪಾಟೀಲ ಪ್ರೀತಿ ಮಾಲಾಗಾರ ಪ್ರಾರ್ಥಿಸಿದರು. ಉಪನ್ಯಾಸಕ ವಸಂತ ಪಾಟೀಲ ನಿರೂಪಿಸಿದರು.

