ಉದಯರಶ್ಮಿ ದಿನಪತ್ರಿಕೆ
ಎಸ್ ಎಮ್ ಇಟ್ಟಿ.
ಜಮಖಂಡಿ : ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿದ್ದು, ಈ ಬಾರಿ ಭರ್ಜರಿ ಇಳುವರಿಯ ಭರವಸೆ ಮೂಡಿಸಿದೆ.
ಚಳಿಗಾಲದ ಅನುಕೂಲಕರ ವಾತಾವರಣ ಮತ್ತು ಸಕಾಲಕ್ಕೆ ಬಿದ್ದ ಮಳೆಯಿಂದಾಗಿ ಮಾವಿನ ಮರಗಳು ಸಮೃದ್ಧವಾಗಿ ಹೂ ಬಿಟ್ಟಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ತಾಲೂಕಿನ ತೋಟಗಳು, ರಸ್ತೆ ಬದಿಯ ಸಾಲು ಮರಗಳು ಹಸಿರು ಎಲೆಗಳ ನಡುವೆ ಬಂಗಾರದ ಬಣ್ಣದ ಹೂಗಳಿಂದ ಮನಮೋಹಕ ದೃಶ್ಯ ನೀಡುತ್ತಿವೆ.
ಬಾದಾಮಿ, ಮಲಗೋವಾ, ರಸಪುರಿ, ಸಕ್ಕರೆಗುತ್ತಿ ಸೇರಿ ಪ್ರಮುಖ ಪ್ರಮುಖ ತಳಿಗಳ ಮಾವಿನ ಮರಗಳು ಹೂವಿನ ಭಾರಕ್ಕೆ ಬಾಗಿ ನಿಂತಿರುವುದು ಕಾಣಿಸುತ್ತಿದೆ. ಡಿಸೆಂಬರ್ ಅಂತ್ಯದಿಂದ ಆರಂಭವಾದ ಹೂ ಬಿಡುವಿಕೆ ಇದೀಗ ಉತ್ತುಂಗ ತಲುಪಿದೆ.
ಸದ್ಯ ತೋಟಗಳಲ್ಲಿ ಕಾಣಿಸುತ್ತಿರುವ ಈ ಬಂಗಾರದ ಹೂವುಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಹಣ್ಣುಗಳ ರಾಜ ಸಿಹಿ ಮಾವಿನ ಸಮೃದ್ಧ ಪೂರೈಕೆಯ ಸೂಚನೆ ನೀಡುತ್ತಿದ್ದು, ರೈತರು ಹಾಗೂ ಗ್ರಾಹಕರು ಇಬ್ಬರಿಗೂ ಸಂತಸ ತಂದಿದೆ.
ಕಳೆದ ಕೆಲವು ವರ್ಷಗಳಿಂದ ಅಕಾಲಿಕ ಮಳೆ ಹಾಗೂ ರೋಗ ಬಾಧೆಯಿಂದ ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರಿಗೆ ಈ ಬಾರಿ ಪ್ರಕೃತಿ ಕೈಹಿಡಿದಂತಾಗಿದೆ. ಹವಾಮಾನ ತಜ್ಞರ ಪ್ರಕಾರ, ಮಳೆಯ ನಂತರ ಕಂಡ ಒಣಹವೆ ಮಾವಿನ ಹೂ ಬಿಡುವಿಕೆಗೆ ಅತ್ಯಂತ ಅನುಕೂಲಕರವಾಗಿದೆ. ಹವಾಮಾನ ಇದೇ ರೀತಿಯಲ್ಲಿ ಮುಂದುವರಿದರೆ ದಾಖಲೆ ಮಟ್ಟದ ಇಳುವರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಾಕ್ಸ್ ನಲ್ಲಿ: ಎಲ್ಲಿ ನೋಡಿದರೂ ಮಾವಿನ ಗಿಡನ ಎದ್ದು ಕಾಣಾಕತ್ತ್ಯಾವ್ರಿ. ಗಿಡ ಬೃಹದಾಕಾರ ಇದ್ರೂ ಚಿಕ್ಕದಿದ್ರು ಈ ವರ್ಷ ಮಾವಿನ ಗಿಡ ಬಹಳ ಹೂ ಬಿಟ್ಟಾವು. ತೋಟದಲ್ಲಿ ಎಲೆಗಳು ಕೂಡ ಕಾಣದಷ್ಟು ಹೂಗಳ ಗೊಂಚಲು ತೂಗಾಡುತ್ತಿವೆ. ಹೂ ಬಿಟ್ಟಟ್ಟು ಕಾಯಿಯಾದರೆ ನಮ್ಮ ಬಾಳು ಬಂಗಾರಾತ್ರಿ.
- ಸದಾಶಿವ ಬಡಿಗೇರˌ
ಚಿಕ್ಕಪಡಸಲಗಿ ಗ್ರಾಮದ ರೈತ.

