‘ಉದಯರಶ್ಮಿ ‘ ಸಂದರ್ಶನದಲ್ಲಿ ಚಂದನ್ ಗೌಡ ಮನದಾಳದ ಮಾತು
ವಿಶೇಷ ವರದಿ : ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ : ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸಂಸ್ಥಾಪಕ ಭೂಮಿಪುತ್ರ ಚಂದನ್ ಗೌಡ ಸಿ ಅವರು, ಮಣ್ಣಿನ ಸಂರಕ್ಷಣೆ ಬಗ್ಗೆ ಜಾಗೃತಿ ಹಾಗೂ ರೈತರ ನೋವಿಗೆ ಧ್ವನಿಯಾಗಿ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಬರುತ್ತಿರುವ ಒಬ್ಬ ಸಾಮಾನ್ಯ ರೈತ ಮುಖಂಡ. ಕೊರೋನಾ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕಾಗಿ ಜನ ಪರಾಡುತ್ತಿದ್ದಾಗ, ಅನ್ನದ ಮಹತ್ವ ಅರಿತು ಭೂತಾಯಿಯ ಋಣ ತೀರಿಸಲು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ರಿಯಲ್ ಎಸ್ಟೇಟ್ ಉದ್ಯಮಿ. ಕಳೆದ ನಾಲ್ಕು ವರ್ಷಗಳಿಂದಲೂ ಅನ್ನದಾತರ ಏಳಿಗೆಗಾಗಿ ಶ್ರಮಿಸುತ್ತಾ ಬರುತ್ತಿರುವ ಇವರು ಇವತ್ತು ರೈತರ ಮನೆ ಮಗನಾಗಿದ್ದಾರೆ. ಕಷ್ಟ ಎಂದಾಗ ರೈತರಿಗೆ ಜನಪ್ರತಿನಿಧಿಗಳು ನೆನಪಾಗುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಚಂದನ್ ಗೌಡರ ಹೆಸರು ಕ್ಷಣಾರ್ಧದಲ್ಲೇ ಜ್ಞಾಪಕಕ್ಕೆ ಬರುತ್ತೆ.ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ವರ ಮೇಲೆ ದಾಳಿ ಮಾಡಿ ಮೂವರನ್ನು ಬಲಿ ಪಡೆದಾಗ, ತತ್ ಕ್ಷಣದಲ್ಲಿ ಹಾಜರಾಗಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಾನಿದ್ದೀವಿ ಭಯಪಡಬೇಡಿ ಎಂದು ಆತ್ಮವಿಶ್ವಾಸ ತುಂಬಿದ್ದ ಏಕೈಕ ವ್ಯಕ್ತಿ ಚಂದನ್ ಗೌಡ ಎಂದರೆ ತಪ್ಪಾಗಲಾರದು.
ಹೀಗೆ ಕಳೆದ ನಾಲ್ಕು ವರ್ಷಗಳಲ್ಲಿ ಭೂತಾಯಿಯ ಸೇವೆ ಮಾಡುತ್ತಾ ಬರುತ್ತಿರುವ ಚಂದನ್ ಗೌಡ ಅವರಿಗೆ ಮೊನ್ನೆಯಷ್ಟೇ ಪ್ರತಿಷ್ಠಿತ ರೈತ ರತ್ನ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಉದಯ ರಶ್ಮಿ ದಿನಪತ್ರಿಕೆ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹೆಚ್ ಡಿ ಕೋಟೆ ತಾಲೂಕು ವರದಿಗಾರ ಶ್ರೀಕಂಠ ಈಶ್ವರ್ ಅವರ ಜೊತೆ ತಾವು ಯಾಕೆ ಕೃಷಿ ಕ್ಷೇತ್ರವನ್ನ ಆಯ್ಕೆಮಾಡಿಕೊಂಡೇ ಎಂಬುದನ್ನು ಹೇಳಿದ್ದಾರೆ.
ಪ್ರಶ್ನೆ : ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಹುಟ್ಟಿಹಾಕಲು ಕಾರಣವೇನು?
ಚಂದನ್ ಗೌಡ : ನನಗೆ ಮಣ್ಣು, ಅನ್ನದ ಮಹತ್ವ ಗೊತ್ತಿರಲಿಲ್ಲ. ಕೊರೋನಾ ಬಂದು ಲಾಕ್ ಡೌನ್ ಆದ ಸಂದರ್ಭದಲ್ಲಿ ಅನ್ನದ ಮಹತ್ವ ತಿಳಿದುಕೊಂಡೆ. ಅನ್ನ ಇಲ್ಲದಿದ್ದರೆ ಮಾನವ ಪ್ರಾಣಿ ಈ ಮನುಕುಲದಲ್ಲಿ ಉಳಿಯಲು ಸಾಧ್ಯವೇ ಇಲ್ಲ ಎಂಬುದು ಗೊತ್ತಾಯಿತು. ಅಲ್ಲಿಯವರೆಗೆ ನನಗೆ ಒಂದು ಅಡಿ ಜಾಗಕ್ಕೆ ಎಷ್ಟು ಬೆಲೆ ನಿಗದಿಪಡಿಸಬೇಕು ಎಂಬುದಷ್ಟೇ ಗೊತ್ತಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಅನ್ನ, ಕೃಷಿ ಮಹತ್ವ ತಿಳಿದುಕೊಂಡು, ಭೂತಾಯಿಯ ಸೇವೆ ಮಾಡಬೇಕೆಂದು ನಾನು ಈ ಕ್ಷೇತ್ರ ಆಯ್ದುಕೊಂಡು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಸ್ಥಾಪನೆ ಮಾಡಿದೆ.
ಪ್ರಶ್ನೆ : ಸಮಾಜ ಸೇವೆ ಮಾಡಬೇಕಾದರೆ ಬೇರೆ ಕ್ಷೇತ್ರಗಳಿಗೆ ಹೋಗಬಹುದಿತ್ತು. ಆದರೆ ಕೃಷಿ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ಚಂದನ್ ಗೌಡ: ನಾನು ತಿನ್ನುವ ಮೂರೊತ್ತಿನ ಊಟ ಕೊಡುವ ಅನ್ನದಾತನ ಋಣ ತೀರಿಸಬೇಕೆಂದು ನಾನು ಈ ಕ್ಷೇತ್ರ ಆಯ್ಕೆಮಾಡಿಕೊಂಡೆ.
ತಿಂಗಳಿಗೆ 90 ಹೊತ್ತು, ವರ್ಷಕ್ಕೆ 1080 ತುತ್ತು ಅನ್ನ ತಿನ್ನುತ್ತಿದ್ದೇನೆ. ಹೀಗಾಗಿ ನನ್ನ ಅನ್ನದಾತನಿಗೆ ಸಹಾಯವಾಗುವಂತಹ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಭೂತಾಯಿಯ ಸೇವೆ ಮಾಡಲು ಆರಂಭಿಸಿದೆ.
ಪ್ರಶ್ನೆ : ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಎಲ್ಲಿಗೆ? ಈ ವೇದ ವಾಕ್ಯದ ಅರ್ಥವೇನು?
ಚಂದನ್ ಗೌಡ: 84 ಲಕ್ಷ ಜೀವಿಗಳ ಜೀವದಾತೆ, ನಮ್ಮೆಲ್ಲರನ್ನ ಹೊತ್ತಿ ಸಾಕಿ ಸಲಹುತ್ತಿರುವ ಭೂತಾಯಿಯ ಮಡಿಲಿನ ಮಣ್ಣಿಗೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಸೇರಿಸಿ ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದಾರೆ. ಈ ಮೂಲಕ ಮಣ್ಣಿನ ಸಾರಾಂಶವನ್ನು ನಾಶ ಮಾಡುತ್ತಿದ್ದಾರೆ. ಹೀಗಾಗಿ ಮಣ್ಣಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಎಲ್ಲಿಗೆ ಎಂಬ ವೇದವಾಕ್ಯದೊಂದಿಗೆ ರೈತ ಕಲ್ಯಾಣ ಸಂಘ ಸ್ಥಾಪನೆ ಮಾಡಿ, ಮಣ್ಣಿನ ಸಂರಕ್ಷಣೆ ಅಭಿಯಾನ ನಡೆಸುತ್ತಿದ್ದೇವೆ. ಈ ಮೂಲಕ ಮಣ್ಣಿನ ಮಹತ್ವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
ಪ್ರಶ್ನೆ : ನಮ್ಮ ದಿನಪತ್ರಿಕೆ ಮೂಲಕ ಕೃಷಿ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಾ?
ಪ್ರಶ್ನೆ : ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು, ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ ದಾಟವೆ ಕೆಡುಗು ಸರ್ವಜ್ಞ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಎಂಬಂತೆ ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಪದದಲ್ಲಿ ಬಹಳ ಮಹತ್ವವಿದೆ. ಕೃಷಿ ಇದ್ದ ಕಡೆ ಬಡತನ ಇರಲ್ಲ, ಹಸಿವು ಕೂಡ ಇರಲ್ಲ. ಈ ಭೂಮಿಮೇಲೆ 14 ವಿದ್ಯೆಗಳು, 64 ಕಲೆಗಳು, 6 ಉತ್ಪಾದನಾಂಗಗಳು, ನಾಲ್ಕು ವೇದಗಳಿವೆ. ಇವುಗಳಿಗೆಲ್ಲ ಶ್ರೇಷ್ಠವಾದ ವಿದ್ಯೆ ಕೃಷಿ ವಿದ್ಯೆ ಮಾತ್ರ. ಸಕಲ ಜೀವ ರಾಶಿಗಳನ್ನು ರಕ್ಷಿಸುವ ವಿದ್ಯೆ ಈ ಕೃಷಿ ವಿದ್ಯೆ. ನನ್ನ ಬಳಿ ಕೋಟಿಗಟ್ಟಲೆ ಹಣ ಇರಬಹುದು. ಆದರೆ ಆ ಹಣವನ್ನ ಒಗ್ಗರಣೆ ಹಾಕಿಕೊಂಡು ತಿನ್ನೋದಕ್ಕೆ ಆಗಲ್ಲ. ನಾವು ಬದುಕಲು ತಿನ್ನಬೇಕು ಅಂದ್ರೆ ಅನ್ನನೇ ಬೇಕು. ಅನ್ನ ಬೇಕು ಅಂದ್ರೆ, ರೈತ ಬೇಕು. ರೈತ ಬೇಕು ಅಂದ್ರೆ ಭೂತಾಯಿಯ ಮಣ್ಣು ಬೇಕು. ಹೀಗಾಗಿ ಮಣ್ಣನ್ನು ರಕ್ಷಿಸಿ ಎಂದು ಸರ್ವರಲ್ಲೂ ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

