ಚಡಚಣ: ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಗೆ ಜೀವದಾನ ಮಾಡಿದಷ್ಟು ಶ್ರೇಷ್ಠ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಎರಡು–ಮೂರು ಬಾರಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ ಹೇಳಿದರು.
ಚಡಚಣ ತಾಲೂಕಿನ ಧೂಳಖೇಡ ಗ್ರಾಮದಲ್ಲಿ ಯುವ ಉದ್ಯಮಿ ಗಡ್ಡೆಪ್ಪ ನಾಟಿಕಾರ ಅವರ 42ನೇ ಜನ್ಮದಿನದ ಅಂಗವಾಗಿ ಬಾಲಾಜಿ ಕ್ಲಿನಿಕ್ನ ಡಾ. ಅನೀಲ ನಾಟಿಕಾರ, ಡಾ. ಜ್ಯೋತಿ ಅನೀಲ ನಾಟಿಕಾರ ಹಾಗೂ ಮಹಾತ್ಮ ಬಸವೇಶ್ವರ ಬ್ಲಡ್ ಸೆಂಟರ್, ಸೋಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನವು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅಪಘಾತದ ಗಾಯಾಳುಗಳು ಪ್ರಾಣ ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಮಹತ್ವದ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಒಂದು ಜೀವ ಉಳಿಸಿದ ಪುಣ್ಯ ದೊರೆಯುತ್ತದೆ ಎಂದು ಹೇಳಿದರು.
ಈ ರಕ್ತದಾನ ಶಿಬಿರದಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದ್ದು, ಒಟ್ಟು 55 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಧೂಳಖೇಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿಲೀಪ ಶಿವಶರಣ, ಚಡಚಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸೋಮುಗೌಡ ವಿ. ಪಾಟೀಲ, ಡಾ. ಅನೀಲ ನಾಟಿಕಾರ, ಡಾ. ಎಂ.ಆರ್. ಮಠ, ಡಾ. ಜ್ಯೋತಿ ಅನೀಲ ನಾಟಿಕಾರ, ಹುಚಪ್ಪ ತಳವಾರ, ಶ್ರೀಮಂತ ಪಾಟೀಲ, ಶಂಕರ ಕಮಳೆ, ಬಂದೆನಮಾಜ್ ಮುಲ್ಲಾ, ಆನಂದ ಸಿಂದಗಿ, ರಾಘವೇಂದ್ರ ವಾಲಿಕಾರ ಸೇರಿದಂತೆ ಅನೇಕ ಗಣ್ಯರು ಇದ್ದರು.

